5,000 ಕೋಟಿ ವಂಚನೆ ಸಂದೇಸರ ಕುಟುಂಬಕ್ಕೆ ಸರಗಳ್ಳತನದಷ್ಟೇ ಸಲೀಸು !
ನವದೆಹಲಿ, ಸೆಪ್ಟೆಂಬರ್ 24: ದುಬೈ ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾದ ನಿತೀನ್ ಸಂದೇಸರ ಈಗ ನೈಜೀರಿಯಾಗೆ ಪಲಾಯನ ಮಾಡಿದ್ದಾನೆ ಎಂಬ ವರದಿಗಳು ಬರುತ್ತಿವೆ. ಅಂದ ಹಾಗೆ ಯಾರು ಈ ನಿತಿನ್ ಸಂದೇಸರಾ ಅಂತೀರಾ? ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಎಂಬ ಸಂಸ್ಥೆಯೊಂದರ ಮಾಲೀಕ ಈತ.
5,000 ಕೋಟಿ ರುಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದ ಈತನನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಂಗಳ ಹಿಂದೆ ಸುದ್ದಿ ಆಗಿತ್ತು. ದರೆ ಈಗ ಆತ ಯುಎಇನಲ್ಲಿ ಇಲ್ಲ, ನೈಜೀರಿಯಾಗೆ ಪಲಾಯನ ಮಾಡಿದ್ದಾನೆ ಎನ್ನುತ್ತಿವೆ ವರದಿಗಳು.
ಉನ್ನತ ಮೂಲಗಳ ಪ್ರಕಾರ, ನಿತೀನ್ ಸಂದೇಸರ, ಆತನ ಸೋದರ ಚೇತನ್ ಸಂದೇಸರ ಹಾಗೂ ಪತ್ನಿ ದೀಪ್ತಿಬೆನ್ ಸಂದೇಸರ ನೈಜೀರಿಯಾದಲ್ಲಿ ತಲೆ ಮರೆಸಿಕೊಂಡಿದ್ದಾರೆ. ನೈಜೀರಿಯಾ ಹಾಗೂ ಭಾರತದ ಮಧ್ಯೆ ಯಾವುದೇ ಕಾನೂನು ನೆರವಿನ ಪರಸ್ಪರ ಒಪ್ಪಂದವಿಲ್ಲ. ಹಸ್ತಾಂತರಕ್ಕೆ ಕೂಡ ಅವಕಾಶ ಇಲ್ಲ. ಆದ್ದರಿಂದ ಆತನ ಕುಟುಂಬವನ್ನು ಭಾರತಕ್ಕೆ ಕರೆತರುವುದು ಕಷ್ಟ ಎನ್ನಲಾಗುತ್ತಿದೆ.
ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರ ಪ್ರಕಾರ, ಆಗಸ್ಟ್ ಎರಡನೇ ವಾರದಲ್ಲಿ ನಿತೀನ್ ಸಂದೇಸರನನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವರದಿಯೇ ಸುಳ್ಳಾಗಿತ್ತು. ಆತ ಹಾಗೂ ಕುಟುಂಬ ಸದಸ್ಯರು ಅದಕ್ಕೂ ಬಹಳ ಮುಂಚೆಯೇ ನೈಜೀರಿಯಾಗೆ ತೆರಳಿದ್ದಾರೆ.

ಯಾವ ಪಾಸ್ ಪೋರ್ಟ್ ಬಳಸಿದ್ದಾರೋ ಗೊತ್ತಾಗ್ತಿಲ್ಲ
ಆದರೂ ಯುಎಇ ಅಧಿಕಾರಿಗಳಿಗೆ ತನಿಖಾ ಸಂಸ್ಥೆಗಳು ಮನವಿ ಸಲ್ಲಿಸಲು ಮುಂದಾಗಿವೆ. ಒಂದು ವೇಳೆ ಸಂದೇಸರ ಕುಟುಂಬದವರು ಕಂಡುಬಂದಲ್ಲಿ 'ತಾತ್ಕಾಲಿಕ ಬಂಧನ'ದಲ್ಲಿ ಇರಿಸುವಂತೆ ಕೇಳಿಕೊಳ್ಳಲಿವೆ. ಸಂದೇಸರ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಪ್ರಯತ್ನ ನಡೆಯುತ್ತಿದೆ. ಇನ್ನು ಆ ಕುಟುಂಬ ಭಾರತೀಯ ಪಾಸ್ ಪೋರ್ಟ್ ಬಳಸಿ ನೈಜೀರಿಯಾಗೆ ತೆರಳಿದೆಯೋ ಅಥವಾ ಬೇರೆ ಪಾಸ್ ಪೋರ್ಟ್ ಬಳಸಿದೆಯೋ ಎಂಬುದು ಗೊತ್ತಾಗಿಲ್ಲ.

5,000 ಕೋಟಿ ರುಪಾಯಿ ಬ್ಯಾಂಕ್ ವಂಚನೆ ಹಗರಣದಲ್ಲಿ
ಸ್ಟರ್ಲಿಂಗ್ ಬಯೋಟೆಕ್ ನ ನಿರ್ದೇಶಕರಾದ ನಿತೀನ್, ಚೇತನ್ ಮತ್ತು ದೀಪ್ತಿ ಸಂದೇಸರ, ರಾಜ್ ಭೂಷಣ್ ಓಂಪ್ರಕಾಶ್ ದೀಕ್ಷಿತ್, ವಿಲಾಸ್ ಜೋಶಿ, ಚಾರ್ಟರ್ಡ್ ಅಕೌಂಟೆಂಟ್ ಹೇಮಂತ್ ಹಾಥಿ, ಆಂಧ್ರ ಬ್ಯಾಂಕ್ ಮಾಜಿ ನಿರ್ದೇಶಕ ಅನುಪ್ ಗರ್ಗ್ ಮತ್ತಿತರರ ವಿರುದ್ಧ 5,000 ಕೋಟಿ ರುಪಾಯಿ ಬ್ಯಾಂಕ್ ವಂಚನೆ ಹಗರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.

4700 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ
ದೆಹಲಿ ಮೂಲದ ಉದ್ಯಮಿ ಗಗನ್ ಧವನ್ ಹಾಗೂ ಗರ್ಗ್ ನನ್ನು ಬಂಧಿಸಿದ ಜಾರಿ ನಿರ್ದೇಶನಾಲಯ, 4700 ಕೋಟಿ ರುಪಾಯಿ ಮೌಲ್ಯದ ಫಾರ್ಮಾಸ್ಯುಟಿಕಲ್ ಕಂಪನಿಯ ಆಸ್ತಿಯನ್ನು ಜೂನ್ ನಲ್ಲಿ ಜಪ್ತಿ ಮಾಡಿಕೊಂಡಿದೆ. ಇದೀಗ ಅಧಿಕಾರಿಗಳು ಹೇಳುವ ಪ್ರಕಾರ, ಸಂದೇಸರ ಕುಟುಂಬವನ್ನು ಭಾರತಕ್ಕೆ ಕರೆತರುವುದು ಬಹಳ ಮುಖ್ಯ. ಏಕೆಂದರೆ ಅವರು ದೊಡ್ಡ ಮೊತ್ತದ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಮುನ್ನೂರಕ್ಕೂ ಹೆಚ್ಚು ಷೆಲ್ ಹಾಗೂ ಬೇನಾಮಿ ಕಂಪನಿಗಳು
ಭಾರತ ಹಾಗೂ ವಿದೇಶಗಳಲ್ಲಿ ಸಂದೇಸರ ಮುನ್ನೂರಕ್ಕೂ ಹೆಚ್ಚು ಷೆಲ್ ಹಾಗೂ ಬೇನಾಮಿ ಕಂಪನಿಗಳನ್ನು ಆರಂಭಿಸಿ, ಸಾಲವನ್ನು ಅವುಗಳಿಗೆ ವರ್ಗಾವಣೆ ಮಾಡಿದ್ದಾರೆ. ಈ ರೀತಿ ಬೇನಾಮಿ ಅಥವಾ ಷೆಲ್ ಕಂಪನಿ ಆರಂಭಿಸಿ, ತನಗೆ ಬೇಕಾದ ರೀತಿಯಲ್ಲಿ ಬ್ಯಾಲೆನ್ಸ್ ಶೀಟ್ ತಿದ್ದಿ, ಆ ಕಂಪನಿಯ ಷೇರುಗಳ ವ್ಯವಹಾರದಲ್ಲಿ ಭಾರೀ ಏರಿಕೆ ತೋರಿಸುತ್ತಿದ್ದನಂತೆ ನಿತೀನ್. ನಾಮ್ ಕೇ ವಾಸ್ಥೆ ನಿರ್ದೇಶಕರ ಮೂಲಕ ಈ ಕಂಪನಿಗಳನ್ನು ಆತ ನಡೆಸುತ್ತಿದ್ದನಂತೆ.

ಬೋಗಸ್ ವ್ಯವಹಾರ ತೋರಿಸಿ ಭಾರೀ ಮೊತ್ತದ ಸಾಲ
ಇನ್ನು ನಿರ್ದೇಶಕರಾಗಿದ್ದವರು ಸಹ ಸ್ಟರ್ಲಿಂಗ್ ಸಮೂಹದ ಉದ್ಯೋಗಿಗಳೇ ಆಗಿದ್ದರು. ಬೋಗಸ್ ಮಾರಾಟ/ಖರೀದಿಯನ್ನು ಬೇನಾಮಿ ಕಂಪನಿಗಳಿಂದ ಮಾಡಿದಂತೆ ತೋರಿಸಿ, ಸ್ಟರ್ಲಿಂಗ್ ಗ್ರೂಪ್ ನಿಂದ ಸಾಲವನ್ನು ಅವುಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ರೀತಿ ಬೋಗಸ್ ವ್ಯವಹಾರ ತೋರಿಸಿ, ಬ್ಯಾಂಕ್ ಗಳಿಂದ ಭಾರೀ ಮೊತ್ತದ ಸಾಲ ಪಡೆಯಲಾಗಿದೆ.












Click it and Unblock the Notifications