ಬಸವಕಲ್ಯಾಣ ಉಪ ಚುನಾವಣೆ; ಬಿಜೆಪಿಗೆ ಬಂಡಾಯದ ಬಿಸಿ?
ಬೀದರ್, ಮಾರ್ಚ್ 30; ಬೀದರ್ ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿಲಿದೆ. ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಲು ಮಂಗಳವಾರ ಕೊನೆ ದಿನ. ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಶರಣು ಸಲಗಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದಾರೆ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ. ಪಕ್ಷೇತರ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ನಿವಾಸಕ್ಕೆ ತೆರಳಿ ಅವರ ಜೊತೆ ಮಾತುಕತೆ ನಡೆಸಿದರು. ಆದರೆ ಸಂಧಾನ ಮುರಿದುಬಿದ್ದಿದ್ದು, ಬಂಡಾಯದ ಬಿಸಿ ತಟ್ಟುವುದು ಖಚಿತವಾಗಿದೆ.
ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಬಸವಕಲ್ಯಾಣ ಸ್ವಾಭಿಮಾನಿ ಬಳಗದ ಸಭೆಯನ್ನು ಕರೆದಿದ್ದಾರೆ. ನೂರಾರು ಜನರು ಸಭೆಯಲ್ಲಿ ಪಾಲ್ಗೊಂಡಿದ್ದು, ಬಿಜೆಪಿಗೆ ತಲೆನೋವು ತಂದಿದೆ.
2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ 44,153 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಬಿ. ನಾರಾಯಣರಾವ್ ವಿರುದ್ಧ ಸೋಲು ಕಂಡಿದ್ದರು.
ನಾರಾಯಣರಾವ್ ಅಕಾಲಿಕ ಮರಣದಿಂದ ಉಪ ಚುನಾವಣೆ ಎದುರಾಗಿದೆ. ಆದರೆ ಬಿಜೆಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡಿದ್ದು, ಶರಣು ಸಲಗಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ ಅಸಮಾಧಾನಗೊಂಡಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಮಲ್ಲಮ್ಮ, ಜೆಡಿಎಸ್ ಪಕ್ಷದಿಂದ ಯಸ್ರಬ್ ಅಲಿ ಖಾದ್ರಿ ಅಭ್ಯರ್ಥಿಗಳು ಏಪ್ರಿಲ್ 17ರಂದು ಉಪಚುನಾವಣೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications