ಉಪಚುನಾವಣೆ: ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಎಡವಟ್ಟು!
ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯುವ ದಿನ ಮುಗಿದಿದೆ. ಹಾಗಾಗಿ, ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಯಾರು ಎನ್ನುವುದು ಅಂತಿಮವಾಗಿದೆ.
ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸಂಸದರು, ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಶಾಸಕರ ನಿಧನದಿಂದ, ಮತ್ತು ಮಸ್ಕಿಯಲ್ಲಿ ಆಪರೇಶನ್ ಕಮಲ ನಡೆದಿದ್ದರಿಂದ ಉಪಚುನಾವಣೆ ನಡೆಯುತ್ತಿದೆ.
ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನದಂದ ಒಟ್ಟು ಹನ್ನೆರಡು ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದರು. ಇದರಿಂದ, ಒಟ್ಟು ಮೂರು ಕ್ಷೇತ್ರಗಳಲ್ಲಿ ಮೂವತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ.
ಜೆಡಿಎಸ್ ಪಕ್ಷ ಬಸವಕಲ್ಯಾಣದಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಮಸ್ಕಿಯಲ್ಲಿ ಎಂಟು, ಬಸವಕಲ್ಯಾಣದಲ್ಲಿ ಹನ್ನೆರಡು ಮತ್ತು ಬೆಳಗಾವಿಯಲ್ಲಿ ಹತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಒಂದು ಕ್ಷೇತ್ರದ ಅಭ್ಯರ್ಥಿಯ ಉಮೇದುವಾರಿಕೆಯನ್ನು ಬಿಜೆಪಿ ಹಿಂದಕ್ಕೆ ಪಡೆಯಲು ಶಕ್ತವಾಗದೇ ಇರುವುದು ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ಮುಂದೆ ಓದಿ..

ಮರಾಠಿ ಪ್ರಾಧಿಕಾರವನ್ನು ರಚಿಸಿದ್ದೇ ಬಸವಕಲ್ಯಾಣ ಚುನಾವಣೆಗಾಗಿ
ಬಿಜೆಪಿ ಪ್ರಮುಖವಾಗಿ ಮರಾಠಿ ಪ್ರಾಧಿಕಾರವನ್ನು ರಚಿಸಿದ್ದೇ ಬಸವಕಲ್ಯಾಣ ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಯಾಕೆಂದರೆ, ಈ ಕ್ಷೇತ್ರದಲ್ಲಿ ಮುಸ್ಲಿಂ, ಲಿಂಗಾಯತ ಮತ್ತು ಮರಾಠಿ ಸಮುದಾಯದ ವೋಟ್ ಬ್ಯಾಂಕ್ ಅತಿಮುಖ್ಯ. ಆದರೆ, ಲಿಂಗಾಯತ ಸಮುದಾಯದ ವೋಟುಗಳು ಡಿವೈಡ್ ಆಗುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ಸಿನ ಬಿ.ನಾರಾಯಣರಾವ್
ಕಳೆದ ಅಂದರೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಿ.ನಾರಾಯಣರಾವ್ ಅವರ ವಿರುದ್ದ ಸುಮಾರು ಹದಿನೇಳು ಸಾವಿರ ಮತಗಳಿಂದ ಸೋಲುಂಡಿದ್ದ ಮಲ್ಲಿಕಾರ್ಜುನ ಖೂಬಾ ಈ ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯವರು ಪಕ್ಷದ ಸಕ್ರಿಯ ಕಾರ್ಯಕರ್ತ ಶರಣು ಸಲಗರ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರಕ್ಕೆ ಸಂಬಂಧ ಪಟ್ಟವರು ಇವರಲ್ಲ ಎನ್ನುವ ಮಾತು ಕೇಳಿ ಬರುತ್ತಿರುವುದು ಒಂದು ಕಡೆಯಾದರೆ, ಖೂಬಾ ಕಣದಲ್ಲಿ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.

ಮಲ್ಲಿಕಾರ್ಜುನ ಖೂಬಾ ಬಂಡಾಯದ ತಲೆಬಿಸಿ
ಮಲ್ಲಿಕಾರ್ಜುನ ಖೂಬಾ ಅವರ ಮನವೊಲಿಸುವ ಜವಾಬ್ದಾರಿಯನ್ನು ಡಿಸಿಎಂ ಲಕ್ಷ್ಮಣ ಸವದಿ ಮತ್ತು ವಿ.ಸೋಮಣ್ಣ ಅವರಿಗೆ ಸಿಎಂ ವಹಿಸಿದ್ದರು. ಅವರ ಹಲವು ಸುತ್ತಿನ ಮಾತಿಗೆ ಖೂಬಾ ಜಗ್ಗದಿದ್ದಾಗ ಖುದ್ದು ಯಡಿಯೂರಪ್ಪನವರೇ ಅವರ ಮನವೊಲಿಕೆಗೆ ಫೋನ್ ಮಾಡಿದ್ದರು. ಆದರೂ, ಖೂಬಾ ಒಪ್ಪದೇ ಇರುವುದರಿಂದ ಬಿಜೆಪಿ ಪ್ರಮುಖವಾಗಿ ಲಿಂಗಾಯತ ವೋಟ್ ಬ್ಯಾಂಕ್ ಛಿದ್ರವಾಗದಂತೆ ನೋಡಿಕೊಳ್ಳುವ ರಿಸ್ಕ್ ನಲ್ಲಿದೆ.

ಬಿಜೆಪಿಯ ವರಿಷ್ಠರಿಗೆ ಪ್ರವೇಶವಿಲ್ಲ ಎಂದು ಮನೆಯ ಗೇಟಿಗೇ ಬೋರ್ಡ್
ಖೂಬಾ ಅವರ ಸಿಟ್ಟು ಎಷ್ಟರ ಮಟ್ಟಿಗೆ ಇದೆಯೆಂದರೆ, ಬಿಜೆಪಿಯ ವರಿಷ್ಠರಿಗೆ ಪ್ರವೇಶವಿಲ್ಲ ಎಂದು ಮನೆಯ ಗೇಟಿಗೆ ಬೋರ್ಡ್ ತಗಲಾಕಿದ್ದಾರೆ. ಸ್ವಾಭಿಮಾನ ಬಳಗ ಎನ್ನುವ ಅಭಿಮಾನಿಗಳನ್ನು ಕಟ್ಟಿಕೊಂಡು ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿರುವ ಖೂಬಾ, ಈ ರಾಜಕೀಯ ಗ್ರೌಂಡ್ ರಿಯಾಲಿಟಿಯನ್ನು ಅವಲೋಕಿಸಿದಾಗ ಬಿಜೆಪಿಗೆ, ಚುನಾವಣೆಯ ಹೊತ್ತಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.
Recommended Video

ಬಿಜೆಪಿ ವರ್ಸಸ್ ಕಾಂಗ್ರೆಸ್
ಅನುಕಂಪದ ಆಧಾರ, ಲಿಂಗಾಯತ ಮತ ಇಬ್ಭಾಗವಾಗುವುದನ್ನು ಪ್ರಮುಖ ಲೆಕ್ಕಾಚಾರ ಕಾಂಗ್ರೆಸ್ ಹಾಕಿಕೊಂಡಿದೆ. ಆದರೆ, ಜೆಡಿಎಸ್ ಇಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮತ್ತು ಉಮೇದುವಾರಿಕೆ ಹಿಂದಕ್ಕೆ ಪಡೆಯುವ ಕೊನೆಯ ದಿನದಂದು ಎನ್ಸಿಪಿಯ ಎಂ.ಜೆ.ಮುಳೆ ನಾಮಪತ್ರ ಹಿಂದೆಕ್ಕೆ ಪಡೆದಿರುವುದರಿಂದ ಮರಾಠಿ ಮತಬ್ಯಾಂಕ್ ವಿಚಾರದಲ್ಲಿ ಬಿಜೆಪಿ ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications