ಕೋವಿಡ್ ಜವಾಬ್ದಾರಿ ತಪ್ಪಿಸಿಕೊಂಡರೆ ಕ್ರಮ: ಜಿಮ್ಸ್ ಆಡಳಿತಕ್ಕೆ ಸಚಿವ ಸುಧಾಕರ್ ಎಚ್ಚರಿಕೆ
ಕಲಬುರಗಿ, ಮೇ 1: ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಬಳಕೆಯಲ್ಲಿ ಕಟ್ಟುನಿಟ್ಟಿನ ಮಾನದಂಡಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯ ಜಿಮ್ಸ್ ಆಸ್ಪತ್ರೆ ಮತ್ತು ಕಾಲೇಜಿಗೆ ಭೇಟಿ ನೀಡಿ, ಕೋವಿಡ್ ಚಿಕಿತ್ಸೆ ಹಾಗೂ ಸಂಬಂಧಿಸಿದ ವಿಷಯಗಳ ಬಗ್ಗೆ ಶನಿವಾರ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಸುಧಾಕರ್, ಕೋವಿಡ್ ಸಂದರ್ಭದಲ್ಲಿ ಒಟ್ಟಾರೆ ನಿರ್ವಹಣೆಯ ಉಸ್ತುವಾರಿಯಾಗಿ ಹಿರಿಯ ಅಧಿಕಾರಿಯನ್ನು ನೇಮಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
Recommended Video

ರೆಮ್ಡೆಸಿವಿರ್ ಬಳಕೆ ಬಗ್ಗೆ ಕೆಲ ದೂರು
ರೆಮ್ಡೆಸಿವಿರ್ ಬಳಕೆ ಬಗ್ಗೆ ಕೆಲ ದೂರುಗಳಿವೆ, ರೋಗಿಗೆ ನೀಡಬೇಕಾದ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ನಿರ್ವಹಣೆಗೆ ತಜ್ಞರ ತಂಡ ರಚನೆ ಮಾಡಿ, ಪ್ರತಿದಿನ ಅವುಗಳ ಬಳಕೆಯ ಮೇಲುಸ್ತುವಾರಿ ನೋಡಿಕೊಳ್ಳಲು ಸೂಚನೆ ನೀಡಬೇಕು. ಆಯಾ ದಿನದ ವರದಿಯನ್ನು ಕ್ರೋಡೀಕರಿಸಿ ಸರಕಾರಕ್ಕೆ ವರದಿ ನೀಡಬೇಕು ಎಂದು ನಿರ್ದೇಶಕರಿಗೆ ಸೂಚನೆ ನೀಡಿದರು.

ವೈದ್ಯರು ಮತ್ತು ಸಿಬ್ಬಂದಿಯ ಪರಿಣಾಮಕಾರಿ ಬಳಕೆ
ಜಿಮ್ಸ್ ಸಂಸ್ಥೆಯ ವೈದ್ಯರು ಮತ್ತು ಸಿಬ್ಬಂದಿಯ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದಂತೆ ನೀಲನಕ್ಷೆ ಸಿದ್ಧಪಡಿಸಿಕೊಂಡು ಅಗತ್ಯತೆಗೆ ಅನುಗುಣವಾಗಿ ಬಳಕೆ ಮಾಡಬೇಕು. ಎಲ್ಲಾ ವಿಭಾಗಗಳ ತಜ್ಞರು ಮತ್ತು ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ರೋಗಿಗಳ ಆರೈಕೆ ಮತ್ತು ಶುಶ್ರೂಷೆ
ಸಂಸ್ಥೆಯ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಒದಗಿಸಿದೆ, ಮುಂದೆಯೂ ನೀಡುತ್ತದೆ. ಅದಕ್ಕೆ ತಕ್ಕಂತೆ ರೋಗಿಗಳ ಆರೈಕೆ ಮತ್ತು ಶುಶ್ರೂಷೆ ಆಗಬೇಕು. ಸಾರ್ವಜನಿಕರಿಂದ ದೂರುಗಳು ಇಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕು. ಅದಕ್ಕಾಗಿ ಪ್ರತಿದಿನ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಡಿಸಿಯವರಿಗೆ ಸೂಚನೆ ನೀಡಿದರು.

ಡೆತ್ ಆಡಿಟ್ ವರದಿಯನ್ನು ಕ್ರೋಡೀಕರಿಸಿ
ವ್ಯಾಕ್ಸಿನೇಷನ್ ಪ್ರಕ್ರಿಯೆ ಕೂಡ ಅನೂಚಾನವಾಗಿ ನಡೆಯಬೇಕು. ಎಲ್ಲಾ ವಿಭಾಗದವರು ರೋಸ್ಟರ್ ಪ್ರಕಾರ ಕೋವಿಡ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಬೇಕು. ಆಯಾ ದಿನದ ಡೆತ್ ಆಡಿಟ್ ವರದಿಯನ್ನು ಕ್ರೋಡೀಕರಿಸಿ ಸರಕಾರಕ್ಕೆ ನಿಯಮಿತವಾಗಿ ವರದಿ ನೀಡಬೇಕು ಎಂದರು. ಸಾವಿನ ಪ್ರಮಾಣ ಶೇ.6 ರಷ್ಟಿದೆ. ಅದಕ್ಕಾಗಿ ಡೆತ್ ಆಡಿಟ್ ಅಧ್ಯಯನ ಮಾಡಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಹೆಚ್ಚಿನ ಸಾವು ಆಗದಂತೆ ಎಚ್ಚರವಹಿಸಬೇಕು ಎಂದು ಜಿಮ್ಸ್ ನ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದರು.












Click it and Unblock the Notifications