ಬೆಳ್ಳಂಬೆಳಗ್ಗೆ ಬೀದರ್ನಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು, ಉಳಿದವರ ಸ್ಥಿತಿ ಚಿಂತಾಜನಕ
ಬೀದರ್, ಫೆಬ್ರವರಿ 28: ಟಾಟಾ ಏಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ನಡೆದಿದೆ.
ದಸ್ತ್ ಗಿರ್ ದಾವಲಸಾಬ್ (36) ರಸೀದಾ ಸೈಕ್ (41) ಟಾಟಾ ಎಸಿ ಚಾಲಕ ವಲಿ (31) ಹಾಗೂ ಅಮಾಮ್ ಸೇಕ್ (51) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಟಾಟಾ ಏಸ್ ವಾಹನದಲ್ಲಿ ಉದಗೀರ್ನಿಂದ ಹೈದರಾಬಾದ್ಗೆ ಒಟ್ಟು 14 ಜನರು ಪ್ರಯಾಣಿಸುತ್ತಿದ್ದರು. ಜನ ಮಹಿಳೆಯರು 5 ಜನ ಪುರುಷರು 3 ಮಕ್ಕಳು ಇದ್ದರು ಎನ್ನಲಾಗಿದೆ. ಸಂಬಂಧಿಯೊಬ್ಬರ ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುವಾಗ ಬೆಳಗಿನ ಜಾವ 4:30ರ ಸುಮಾರಿಗೆ ಟಾಟಾ ಏಸ್ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ಗೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಟಾಟಾ ಏಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಬೀದರ್ನ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೃತಪಟ್ಟಿರುವ ಎಲ್ಲರೂ ಮಹಾರಾಷ್ಟ್ರದ ಉಗ್ಗಿರ್ ಮೂಲದವರು ಎಂದು ತಿಳಿದು ಬಂದಿದೆ.
ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತ ಸ್ಥಳಕ್ಕೆ ಎಸ್ಪಿ ಚೆನ್ನಬಸವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳೆಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತ ಸಾವು
ಬೆಳೆಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಸೇವಾಲ್ಪುರ ಗ್ರಾಮದಲ್ಲಿ ನಡೆದಿದೆ. ಗಂಗಪ್ಪ ಹೇಮಲ್ಪಾ ಲಮಾಣಿ (74) ಮೃತ ದುರ್ದೈವಿ.
ಹೇಮಲ್ಪಾ ಲಮಾಣಿ ಅವರ ಮಾಲೀಕತ್ವದ ಲಕ್ಷಾಂತರ ರೂಪಾಯಿಯ ಶೇಂಗಾ ಹೊಟ್ಟಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಈ ವೇಳೆ ಗಂಗಪ್ಪ ಹೇಮಲ್ಪಾ ಗಾಬರಿಗೊಂಡ ಏಕಾಏಕಿ ಬೆಂಕಿ ಆರಿಸಲು ಮುಂದಾಗಿದ್ದಾರೆ. ಈ ವೇಳೆ ಬಣವೆಗೆ ಹಾಕಿದ ತಾಡಪತ್ರೆಗೆ ಸಿಲುಕಿ ಅಗ್ನಿ ಕೆನ್ನಾಲಿಗೆಗೆ ರೈತ ಸುಟ್ಟು ಕರಕಲಾಗಿದ್ದಾರೆ. ಮಾಹಿತಿ ತಿಳಿಯುತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ಆರಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.












Click it and Unblock the Notifications