ಪಂಚಾಯಿತಿಗೊಂದು ಕಲ್ಯಾಣ ಮಂಟಪ, ಬಿಜೆಪಿ ಅಭ್ಯರ್ಥಿ ಪ್ರಣಾಳಿಕೆ
ಬೀದರ್, ಮೇ 04; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಜನರಿಗೆ ಚುನಾವಣಾ ಪ್ರಣಾಳಿಕೆ ಮೂಲಕ ಹಲವಾರು ಭರವಸೆಗಳನ್ನು ನೀಡುತ್ತಿವೆ. ಅಭ್ಯರ್ಥಿಗಳು ಸಹ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿ ಪ್ರಣಾಳಿಕೆಗಳನ್ನು ಮಾಡಿಕೊಂಡು ಜನರಿಗೆ ವಿವಿಧ ಭರವಸೆ ನೀಡುತ್ತಿದ್ದಾರೆ. ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯುತ್ತಿದೆ.
ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಶೈಲೇಂದ್ರ ಬೆಲ್ದಾಳೆ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕೆರೆಗಳ ಅಭಿವೃದ್ಧಿ, ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ವಿಶೇಷ ಕೈಗಾರಿಕಾ ಘಟಕ ಸ್ಥಾಪನೆ ಸೇರಿದಂತೆ ವಿವಿಧ ಭರವಸೆಗಳನ್ನು ಜನರಿಗೆ ನೀಡಿದ್ದಾರೆ.

ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ ಪಕ್ಷದ ಬಡೆಂಪ್ಪ ಕಾಶೆಂಪೂರ. ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿಯೂ ಸಹ ಅವರೇ ಪಕ್ಷದ ಅಭ್ಯರ್ಥಿ. ಕಾಂಗ್ರೆಸ್ನಿಂದ ಅಶೋಕ್ ಖೇಣಿ ಮತ್ತು ಬಿಜೆಪಿಯಿಂದ ಡಾ. ಶೈಲೇಂದ್ರ ಬೆಲ್ದಾಳೆ ಅಭ್ಯರ್ಥಿಗಳು. ಕಳೆದ ಚುನಾವಣೆಯಲ್ಲಿಯೂ ಡಾ. ಶೈಲೇಂದ್ರ ಬೆಲ್ದಾಳೆ ಬಿಜೆಪಿಯಿಂದ ಕಣಕ್ಕಿಳಿದಿದ್ದರು. 42,365 ಮತಗಳನ್ನು ಪಡೆದು ಸೋಲು ಕಂಡಿದ್ದರು.
ಚುನಾವಣಾ ಪ್ರಣಾಳಿಕೆ; ಡಾ. ಶೈಲೇಂದ್ರ ಬೆಲ್ದಾಳೆ ತಮ್ಮ ಪ್ರಣಾಳಿಕೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣ, ಕಾರಂಜಾ ಸಂತ್ರಸ್ತರಿಗೆ ನ್ಯಾಯಯುತವಾಗಿ ಸರ್ಕಾರದಿಂದ ಪ್ಯಾಕೇಜ ಒದಗಿಸುವುದು, ಕ್ಷೇತ್ರದ ವಿವಿಧ ದೇವಾಲಯಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದು, ಎಪಿಎಂಸಿ ನಿರ್ಮಾಣ ಸೇರಿದಂತೆ ವಿವಿಧ ಭರವಸೆಗಳನ್ನು ನೀಡಿದ್ದಾರೆ.
ಕ್ಷೇತ್ರದ ಮತದರಾರರಿಗೆ ಬೆಂಗಳೂರಿನಲ್ಲಿ ಸಹಾಯವಾಣಿ ಸ್ಥಾಪನೆ, ವಿಶೇಷ ಕೈಗಾರಿಕಾ ಘಟಕ ಸ್ಥಾಪನೆ, ಸರ್ಕಾರಿ ಶಾಲೆ ದತ್ತು ಪಡೆಯುವುದು, ಹೊಬಳಿಗೊಂದು ಬಾಲಾಕಿಯರ ಕಾಲೇಜು ನಿರ್ಮಾಣ, ಗ್ರಾಮ ಪಂಚಾಯಿತಿಗಳಲ್ಲಿ ಪತ್ಯೇಕ ಶೌಚಾಲಯ ನಿರ್ಮಾಣ ಮುಂತಾದ ಭರವಸೆಗಳನ್ನು ಕ್ಷೇತ್ರದ ಜನರಿಗೆ ಕೊಟ್ಟಿದ್ದಾರೆ.
ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ. ಗುಡಿ ಕೈಗಾರಿಕೆಗಳ ಸ್ಥಾಪನೆ. ರೈತರ ತರಕಾರಿ ಇಡಲು ಕೋಲ್ಡ್ ಸ್ಟೋರೇಜ್ ನಿರ್ಮಾಣ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೆರೆಗಳ ಅಭಿವೃದ್ಧಿ ಮಾಡುವುದು ಸೇರಿದಂತೆ ಹಲವು ಭರವಸೆ ನೀಡಿದ್ದಾರೆ.
ಕಳೆದ ಚುನಾವಣಾ ಫಲಿತಾಂಶ; ಬೀದರ್ ದಕ್ಷಿಣ ಕ್ಷೇತ್ರ ಇದುವರೆಗೂ ಮೂರು ಚುನಾವಣೆಗಳನ್ನು ಕಂಡಿದೆ. 2008ರಲ್ಲಿ ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ ಗೆಲುವು ಸಾಧಿಸಿದ್ದರು. 2013ರಲ್ಲಿ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷದಿಂದ ಕಣಕ್ಕಿಳಿದು ಗೆದ್ದಿದ್ದರು. 2018ರಲ್ಲಿ ಕ್ಷೇತ್ರ ಪುನಃ ಜೆಡಿಎಸ್ ವಶವಾಗಿದೆ.
2018ರಲ್ಲಿ ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ 55,107 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಡಾ. ಶೈಲೇಂದ್ರ ಬೆಲ್ದಾಳೆ 42,365 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಅಶೋಕ್ ಖೇಣಿ 35,131 ಮತಗಳನ್ನು ಪಡೆದಿದ್ದರು.
2013ರಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿ ಅಶೋಕ ಖೇಣಿ 47,763 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ 31,975 ಮತಗಳನ್ನು ಪಡೆದಿದ್ದರು. ಡಾ. ಶೈಲೇಂದ್ರ ಬೆಲ್ದಾಳೆ 11,560 ಮತಗಳನ್ನು ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮೂವರು ಮುಖಾಮುಖಿಯಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ ಮಾಡಲಾಗಿದೆ. ಆದರೆ ಕಾಂಗ್ರೆಸ್ನ ಅಶೋಕ್ ಖೇಣಿಗೆ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ಚಂದ್ರಾಸಿಂಗ್ ಬಂಡಾಯಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ ಪ್ರಭಾವಿ ನಾಯಕರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಪ್ತರು. ಅವರು ಪ್ರಬಲ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಾರಿಯ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.











Click it and Unblock the Notifications