ನೆಚ್ಚಿನ ಶಿಕ್ಷಕ ವರ್ಗಾವಣೆ: ನಮಸ್ಕರಿಸಿ, ಕಣ್ಣೀರಿಟ್ಟ ವಿದ್ಯಾರ್ಥಿಗಳು
ಔರಾದ್, ಜನವರಿ 12: ಮಕ್ಕಳಿಗೆ ಶಿಕ್ಷಕರೆಂದರೆ ಅಚ್ಚುಮೆಚ್ಚು, ಅದರಲ್ಲೂ ಹಳ್ಳಿಯ ಮಕ್ಕಳಿಗೆ ತು ಹೆಚ್ಚು. ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವರ್ಗಾವಣೆಯಾಗಿದ್ದಕ್ಕೆ ಮಕ್ಕಳು ಕಣ್ಣೀರಿಟ್ಟ ಘಟನೆ ಔರಾದ್ ತಾಲೂಕಿನ ಎಕಲಾರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ವರ್ಗಾವಣೆಗೊಂಡ ಭಾಷಾ ಶಿಕ್ಷಕ ಬೀರಪ್ಪ ಕಡ್ಲಿಮಡ್ಡಿ ಅವರನ್ನು ಬೀಳ್ಕೊಡಲು ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಣ್ಣೀರಿಟ್ಟರೆ ಸಹ ಶಿಕ್ಷಕರು ಕೂಡ ಭಾವುಕರಾದರು.
ಹಳೆಯ ವಿದ್ಯಾರ್ಥಿನಿ ಸುಮಯ್ಯ ಮಾತನಾಡಿ'' ನಾನು 8ನೇ ತರಗತಿಗೆ ಇಲ್ಲಿ ಪ್ರವೇಶ ಪಡೆದಾಗ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ, ಆದರೆ ಈಗ ನಾನು ಕಾಲೇಜಿನಲ್ಲಿ ಟಾಪರ್ ಆಗಿದ್ದೇನೆ. ನಾನು ಸರ್ಕಾರಿ ಶಾಲೆ ವಿದ್ಯಾರ್ಥಿ ಎಂದು ಹೇಳಿಕೊಂಡರೂ ಯಾರು ನಂಬುವುದೇ ಇಲ್ಲ, ಆ ಪರಿ ಇಲ್ಲಿಯ ಶಿಕ್ಷಕರು ನಮ್ಮನ್ನು ತಯಾರು ಮಾಡಿದ್ದಾರೆ ಎಂದು ಹೇಳಿದ್ದಾರೆ.

''ಶಿಕ್ಷಕ ಬೀರಪ್ಪ ಅವರಿಗೆ ಇಲ್ಲಿಂದ ಹೋಗಲು ಮನಸ್ಸಿಲ್ಲ, ಕೊಪ್ಪಳದಲ್ಲಿರುವ ತಮ್ಮ ತಂದೆ ನೋಡಿಕೊಳ್ಳಲು ಅಲ್ಲಿಗೆ ಹೋಗುವುದು ಅನಿವಾರ್ಯವಾಗಿದೆ, ಅವರನ್ನು ಸಂತೋಷದಿಂದ ಕಳುಹಿಸಿಕೊಡಬೇಕಾಗಿದೆ'' ಎಂದು ಮುಖ್ಯ ಶಿಕ್ಷಕ ಜ್ಞಾನದೇವ ಪಾಂಚಾಳ ಹೇಳಿದ್ದಾರೆ.
''ಬೀರಪ್ಪ ಸರ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕಾಗ ಇಡೀ ಊರೇ ಸಂಭ್ರಮಿಸಿತು, ಆ ರೀತಿ ಅವರು ಇಲ್ಲಿಯ ಪಾಲಕರ ಮನ ಗೆದ್ದಿದ್ದಾರೆ'' ಎಂದು ಶಾಲಾ ಸಮಿತಿ ಅಧ್ಯಕ್ಷ ಶಿವಕುಮಾರ ಪಾಟೀಲ ತಿಳಿಸಿದ್ದಾರೆ.
''ನನ್ನ ಜೀವಮಾನದಲ್ಲಿ ಬೀರಪ್ಪ ಅವರಂತಹ ಶಿಕ್ಷಕರನ್ನು ಕಂಡಿಲ್ಲ, ತಮ್ಮ 12 ವರ್ಷಗಳ ಇಲ್ಲಿಯ ಸೇವಾವಧಿಯಲ್ಲಿ ಹೆಚ್ಚಿನ ಸಮಯ ಶಾಲೆ, ವಿದ್ಯಾರ್ಥಿಗಳ ಜತೆ ಕಳೆಯುತ್ತಿದ್ದರು, ಅನೇಕ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ'' ಎಂದು ನಿವೃತ್ತ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾವೆ ಹೇಳಿದ್ದಾರೆ.
Recommended Video
''ಶಿಕ್ಷಕ ಬೀರಪ್ಪ ಅವರನ್ನು ನಾವು ಎಂದೂ ಮರೆಯಲಾಗದು, ನಮ್ಮನ್ನು ಅವರು ತಮ್ಮ ಮಕ್ಕಳಂತೆ ನೋಡಿಕೊಂಡಿದ್ದಾರೆ'' ಎಂದು ಅನೇಕ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು.
ಕ್ಷೇತ್ರ ಸಮನ್ವಯಾಧಿಕಾರಿ ನಾರಾಯಣ ರಾಥೋಡ್, ಶಿಕ್ಷಕಿ ವಿಜಯಲಕ್ಷ್ಮೀ ನಿರ್ಮಳೆ, ಶಿವರಾಜ ಬಿರಾದಾರ, ಸೂರ್ಯಕಾಂತ ನಾಗೂರೆ ಗ್ರಾಮದ ಗಣ್ಯರು, ಪಾಲಕರು ಇದ್ದರು.












Click it and Unblock the Notifications