ಗುರುವಾರದಿಂದ ಬೀದರ್-ಬೆಂಗಳೂರು ವಿಮಾನ ಪುನಃ ಆರಂಭ
ಬೀದರ್, ಫೆಬ್ರವರಿ 23; ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಬೀದರ್ ವಿಮಾನ ನಿಲ್ದಾಣ ಮತ್ತೆ ಕಾರ್ಯಾರಂಭ ಮಾಡಲಿದೆ. ಬೀದರ್-ಬೆಂಗಳೂರು ವಿಮಾನ ಸೇವೆ ಗುರುವಾರದಿಂದ ಪುನಃ ಆರಂಭವಾಗಲಿದೆ.
ಕೋವಿಡ್ ಪರಿಸ್ಥಿತಿ ಮತ್ತು ಇತರ ಕಾರಣಗಳಿಂದಾಗಿ ಬೀದರ್ನಿಂದ ವಿಮಾನ ಹಾರಾಟ ಸ್ಥಗಿತವಾಗಿತ್ತು. 24/2/2022ರ ಗುರುವಾರದಿಂದ ವಿಮಾನ ಸೇವೆ ಮತ್ತೆ ಆರಂಭಗೊಳ್ಳಲಿದೆ. ಇದರಿಂದಾಗಿ ಜನರು ರಾಜಧಾನಿ ಬೆಂಗಳೂರಿಗೆ ಬರಲು ಸಹಾಯಕವಾಗಲಿದೆ.
ವಾರದಲ್ಲಿ ಮೂರು ದಿನ (ಮಂಗಳವಾರ, ಗುರುವಾರ ಮತ್ತು ರವಿವಾರ) ಬೀದರ್-ಬೆಂಗಳೂರು ವಿಮಾನ ಹಾರಾಟನಡೆಸಲಿದೆ. ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಬೀದರ್ ಸಂಸದ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕೋವಿಡ್ ಮತ್ತು ಇತರ ಕಾರಣಗಳಿಂದ ಬೀದರ್ನಿಂದ ನಾಗರಿಕ ವಿಮಾನಯಾನ ಸೇವೆ ಸ್ಥಗಿತಗೊಂಡಿರುವ ಕುರಿತು ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು.
ವೇಳಾಪಟ್ಟಿ; ವಾರದಲ್ಲಿ ಮೂರು ದಿನ ಟ್ರೂ ಜೆಟ್ ಸಂಸ್ಥೆ ಬೀದರ್-ಬೆಂಗಳೂರು ನಡುವೆ ವಿಮಾನ ಹಾರಾಟವನ್ನು ನಡೆಸಲಿದೆ. ವಿಮಾನ ಸಂಖ್ಯೆ 2ಟಿ 625 ಬೆಳಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 1.10ಕ್ಕೆ ಬೀದರ್ ತಲುಪಲಿದೆ.
ವಿಮಾನ ಸಂಖ್ಯೆ 2ಟಿ 626 ಮಧ್ಯಾಹ್ನ 1.40ಕ್ಕೆ ಬೀದರ್ನಿಂದ ಹೊರಟು 3.25ಕ್ಕೆ ಬೆಂಗಳೂರು ತಲುಪಲಿದೆ. ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ 1 ಗಂಟೆ 45 ನಿಮಿಷವಾಗಿದೆ.
ವಿಮಾನ ಸಂಚಾರಕ್ಕೆ ಒತ್ತಾಯ; 2021ರ ನವೆಂಬರ್ನಲ್ಲಿಯೇ ಬೀದರ್-ಬೆಂಗಳೂರು ವಿಮಾನ ಸಂಚಾರ ಪುನಃ ಆರಂಭಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ. ಜಿ. ಶೆಟಕಾರ್ ಒತ್ತಾಯಿಸಿದ್ದರು.
ಕೇಂದ್ರ ವಿಮಾನಯಾನ ಸಚಿವರಿಗೆ ಈ ಕುರಿತು ಪತ್ರವನ್ನು ಬರೆದಿದ್ದರು. ಉಡಾನ್ ಯೋಜನೆಯಡಿ ಬೀದರ್ನಿಂದ ನಾಗರಿಕ ವಿಮಾನ ಸೇವೆ ಆರಂಭ ಮಾಡಲಾಗಿತ್ತು. ಆದರೆ ಅದನ್ನು ಕಡಿಮೆ ಅವಧಿಯಲ್ಲಿಯೇ ಸ್ಥಗಿತಗೊಳಿಸಲಾಗಿತ್ತು ಎಂದು ಪತ್ರದಲ್ಲಿ ವಿವರಿಸಿದ್ದರು.
2020ರ ಫೆಬ್ರವರಿ 7ರಂದು ಬೀದರ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದರು. ಈ ಮೂಲಕ ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಜಿಲ್ಲೆಯ ಜನರ ದಶಕಗಳ ಕನಸು ನನಸಾಗಿತ್ತು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಬೀದರ್ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗದಲೇ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿತ್ತು. ಆದರೆ ಬಳಿಕ ಬೀದರ್-ಬೆಂಗಳೂರು ವಿಮಾನ ಹಾರಾಟ ಸ್ಥಗಿತಗೊಂಡಿತ್ತು.
2008ರಲ್ಲಿ ಬೀದರ್ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ಸಿಕ್ಕಿತ್ತು. ಆದರೆ ಹೈದರಾಬಾದ್ ವಿಮಾನ ನಿಲ್ದಾಣ 150 ಕಿ. ಮೀ. ದೂರದಲ್ಲಿ ಇದೆ ಎಂಬ ಕಾರಣಕ್ಕೆ ಯೋಜನೆಗೆ ಅನುಮತಿ ನೀಡುವುದು ವಿಳಂಬವಾಯಿತು.
ಆದರೆ 2017ರಲ್ಲಿ ಜಾರಿಗೆ ಬಂದ ಉಡಾನ್ ಯೋಜನೆ ಅಡಿ ಬೀದರ್ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ಸಿಕ್ಕಿತು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಲ್ಲಿಕೆಯಾಗಿದ್ದ ಆಕ್ಷೇಪಣೆ ವಾಪಸ್ ಪಡೆಯಲಾಯಿತು.












Click it and Unblock the Notifications