ರೋಗಿಯನ್ನು 5 ಕಿ.ಮೀ ಹೊತ್ತೊಯ್ದ ವೈದ್ಯ: ಮಾನವೀಯತೆಗೊಂದು ಸಲಾಂ

ಬೆಹರಾನ್‌ಪುರ, ಸೆಪ್ಟೆಂಬರ್ 18: 'ವೈದ್ಯೋ ನಾರಾಯಣೋ ಹರಿ' ಎನ್ನುವುದು ವಾಡಿಕೆಯಲ್ಲಿರುವ ಮಾತು. ಅದನ್ನು ಸುಳ್ಳಾಗಿಸುವಂತೆ ವೈದ್ಯಕೀಯ ಜಗತ್ತಿನಿಂದ ಪ್ರತಿದಿನವೂ ಒಂದಿಲ್ಲೊಂದು ಅಮಾನವೀಯ ಕೃತ್ಯದ ಆರೋಪಗಳೇ ಕೇಳಿಬರುತ್ತಿವೆ. ಅದರಲ್ಲಿಯೂ ಸೇವೆಯ ಹೆಸರಿನಲ್ಲಿ ಕಟ್ಟಿದ ಆಸ್ಪತ್ರೆಗಳು ಹಣಪೀಕುವ ಜಾಗಗಳಾಗಿವೆ. ವೈದ್ಯರುಗಳು ಕೂಡ ಹಣವಿಲ್ಲದೆ ಯಾವ ಚಿಕಿತ್ಸೆಯನ್ನೂ ನೀಡುವುದಿಲ್ಲ ಎಂಬ ಆರೋಪಗಳಿವೆ. ಸರ್ಕಾರಿ ವೈದ್ಯರ ಕುರಿತೂ ಈ ರೀತಿಯ ದೂರುಗಳು ಕಡಿಮೆಯೇನಿಲ್ಲ. ಇದಕ್ಕೆ ಅಪವಾದವೆಂಬಂತೆ ಆಗಾಗ ಉತ್ತಮ ಸೇವಾಮನೋಭಾವದ ವೈದ್ಯರ ಕುರಿತ ಘಟನೆಗಳು ಕಂಡುಬರುತ್ತವೆ.

ಇದಕ್ಕೆ ತಾಜಾ ನಿದರ್ಶನ ಒಡಿಶಾದ ಆಯುಷ್ ವೈದ್ಯ ಡಾ. ಶಕ್ತಿ ಪ್ರಸಾದ್. ತಮ್ಮದು ಹಣಕೀಳುವ ವೃತ್ತಿಯಲ್ಲ, ಬದಲಾಗಿ ತಮ್ಮೊಳಗೆ ಕಷ್ಟದಲ್ಲಿರುವ ವ್ಯಕ್ತಿಯ ಜೀವ ಉಳಿವಿಗೆ ಪ್ರಯತ್ನಿಸುವ ಮಾನವೀಯತೆಯ ಸೆಲೆಗಳೂ ಇವೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನೊಬ್ಬನನ್ನು ಕಡಿದಾದ ಬೆಟ್ಟಗುಡ್ಡದ ಹಾದಿಯಲ್ಲಿ ಹೊತ್ತುಕೊಂಡು ಹೋಗುವ ಶಕ್ತಿ ಪ್ರಸಾದ್ ಅವರ ಚಿತ್ರ ವೈರಲ್ ಆಗಿದೆ. ಅವರ ಸೇವಾಬದ್ಧತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಅನಾಥನ ಬಾಲಕನನ್ನು ಹೊತ್ತುಕೊಂಡು ಬಂದವರು

ಅನಾಥನ ಬಾಲಕನನ್ನು ಹೊತ್ತುಕೊಂಡು ಬಂದವರು

ಒಡಿಶಾದ ಮಾಲ್ಕಂಗಿರಿ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಅನಾಥ ಬಾಲಕನೊಬ್ಬನನ್ನು ವೈದ್ಯರು ಮತ್ತು ಆಂಬುಲೆನ್ಸ್ ಚಾಲಕ ಇಬ್ಬರೂ ಜೋಲಿ ಕಟ್ಟಿಕೊಂಡು ಐದು ಕಿ.ಮೀ. ಹೊತ್ತು ಸಾಗಿದ್ದಾರೆ. ಅತ್ಯಂತ ದುರ್ಗಮವಾದ ಊರಿನ ಕಡಿದಾದ ಬೆಟ್ಟಗುಡ್ಡಗಳನ್ನು ಹಾದು, ತೊರೆಗಳನ್ನು ಹಾದು ಅವರು ಜಿಲ್ಲಾ ಕೇಂದ್ರಕ್ಕೆ ಹೊತ್ತುಕೊಂಡು ಬಂದಿದ್ದಾರೆ.

ಬುಡಕಟ್ಟು ಸಮುದಾಯದ ಅನಾಥ ಬಾಲಕ

ಬುಡಕಟ್ಟು ಸಮುದಾಯದ ಅನಾಥ ಬಾಲಕ

ಆಯುರ್ವೇದ ವೈದ್ಯರಾಗಿರುವ ಡಾ. ಶಕ್ತಿ ಪ್ರಸಾದ್ ಮಿಶ್ರಾ ಅವರು ಮಾಲ್ಕಂಗಿರಿ ಜಿಲ್ಲೆಯ ಖಾಯಿರಾಪುಟ್ ಬ್ಲಾಕ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆಯಲ್ಲಿ (ಎನ್‌ಎಚ್‌ಎಂ) ಸಂಚಾರ ಆರೋಗ್ಯ ಕೇಂದ್ರ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡಾದುರಲ್ ಪಂಚಾಯತ್ ವ್ಯಾಪ್ತಿಯ ನೌಗಡ ಎಂಬ ಹಳ್ಳಿಯಲ್ಲಿನ ಬುಡಕಟ್ಟು ಸಮುದಾಯದ ಅನಾಥ ಬಾಲಕನಿಗೆ ತೀವ್ರ ಅನಾರೋಗ್ಯ ಉಂಟಾಗಿದೆ ಎಂಬ ಮಾಹಿತಿ ಅವರಿಗೆ ದೊರಕಿತ್ತು.

ಬಾಲಕನ ಸ್ಥಿತಿ ಗಂಭೀರವಾಗಿತ್ತು

ಬಾಲಕನ ಸ್ಥಿತಿ ಗಂಭೀರವಾಗಿತ್ತು

ಆದರೆ ಆ ಹಳ್ಳಿಗೆ ಸೂಕ್ತವಾದ ರಸ್ತೆಯೇ ಇಲ್ಲದ ಕಾರಣ ಆಂಬುಲೆನ್ಸ್ ಅಲ್ಲಿಗೆ ತಲುಪಲು ಸಾಧ್ಯವಿರಲಿಲ್ಲ. ಹೀಗಾಗಿ ಡಾ. ಮಿಶ್ರಾ ಅವರು ಬಾಲಕನನ್ನು ತಪಾಸಣೆ ಮಾಡಲು ಸ್ವತಃ ಕಾಲ್ನಡಿಗೆಯಲ್ಲಿ ಬೆಟ್ಟಗುಡ್ಡಗಳನ್ನು ಹಾದು ಅಲ್ಲಿಗೆ ತಲುಪಿದರು. 12 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿತ್ತು. ಆತನನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಕರೆದೊಯ್ಯುವುದು ಅನಿವಾರ್ಯವಾಗಿತ್ತು. ಐದು ಕಿ.ಮೀ. ದೂರದಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ ಬಳಿ ಆತನನ್ನು ಕರೆದೊಯ್ಯಲು ಬೇರೆ ಯಾವ ವ್ಯವಸ್ಥೆಯೂ ಇರಲಿಲ್ಲ.

ಬೇರೆ ಯಾವ ಮಾರ್ಗವೂ ಇರಲಿಲ್ಲ

ಬೇರೆ ಯಾವ ಮಾರ್ಗವೂ ಇರಲಿಲ್ಲ

'ರೋಗಿಯನ್ನು ರಕ್ಷಿಸಲು ಬೇರೆ ಯಾವ ಮಾರ್ಗವೂ ಇರಲಿಲ್ಲ. ಹೀಗಾಗಿ ಅಲ್ಲಿಯೇ ಜೋಲಿಯೊಂದನ್ನು ಸಿದ್ಧಪಡಿಸಿ ಅವರನ್ನು ಹೊತ್ತುಕೊಂಡು ಬರಲು ನಾನು ಮತ್ತು ಆಂಬುಲೆನ್ಸ್ ಚಾಲಕ ಗೋಬಿಂದ್ ನಾಗುಲು ನಿರ್ಧರಿಸಿದೆವು' ಎಂದು ಮಿಶ್ರಾ ಅವರು ತಿಳಿಸಿದ್ದಾರೆ. ಇಬ್ಬರೂ ಜೋಲಿಯಲ್ಲಿ ಬಾಲಕನನ್ನು ಕೂರಿಸಿಕೊಂಡು ದಟ್ಟವಾದ ಕಾಡಿನಿಂದ ಆವರಿಸಿದ ಬೆಟ್ಟವನ್ನು ಹಾದು ಹರಸಾಹಸಪಟ್ಟು ನಡೆದು ಆಂಬುಲೆನ್ಸ್ ನಿಲ್ಲಿಸಿದ್ದ ಮುಖ್ಯ ರಸ್ತೆಗೆ ತಲುಪಿದರು.

ಈ ರೀತಿ ಕಾರ್ಯದಿಂದ ನೈಜ ತೃಪ್ತಿ

ಈ ರೀತಿ ಕಾರ್ಯದಿಂದ ನೈಜ ತೃಪ್ತಿ

ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯವರಾದ ಮಿಶ್ರಾ ಅವರು 2012ರಿಂದ ಮಾಲ್ಕಂಗಿರಿ ಜಿಲ್ಲೆಯ ಕುಗ್ರಾಮಗಳಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. 'ಇಂತಹ ಸಂಕಷ್ಟದ ಸಂದರ್ಭದಲ್ಲಿ ಶ್ರಮವಹಿಸಿ ಒಂದು ಜೀವವನ್ನು ಉಳಿಸುವುದು ವೈದ್ಯರಿಗೆ ಸಿಗುವ ನಿಜವಾದ ತೃಪ್ತಿ. ಅದು ಖುಷಿಯ ಮತ್ತು ಉತ್ಸಾಹ ನೀಡುವ ಸಂಗತಿ' ಎಂದು ಹೇಳಿದ್ದಾರೆ.

ಸಿಎಂ ನವೀನ್ ಪಟ್ನಾಯಕ್ ಪ್ರಶಂಸೆ

ಸಿಎಂ ನವೀನ್ ಪಟ್ನಾಯಕ್ ಪ್ರಶಂಸೆ

ಮಿಶ್ರಾ ಅವರ ಕಾರ್ಯವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶ್ಲಾಘಿಸಿದ್ದಾರೆ. 'ಅಸ್ವಸ್ಥ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲು ದುರ್ಗಮವಾದ ಹಾದಿಯಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಹೋದ ಆಯುಷ್ ವೈದ್ಯ ಶಕ್ತಿ ಪ್ರಸಾದ್ ಮಿಶ್ರಾ ಅವರ ಅನುಕರಣೀಯ ಸೇವಾ ಬದ್ಧತೆಯನ್ನು ಕಂಡು ಹೃದಯತುಂಬಿ ಬಂತು. ಕರ್ತವ್ಯದ ಕರೆಯಾಚೆ, ರೋಗಿಯೊಬ್ಬನ ಜೀವ ಉಳಿಸಲು ಅವರು ಕೈಗೊಂಡ ಮಾನವೀಯತೆಯ ನಡೆಯು ಶ್ಲಾಘನಾರ್ಹ ಎಂದು ನವೀನ್ ಪಟ್ನಾಯಕ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+