ತಗ್ಗಿಲ್ಲ 'ಫೋನಿ' ಅಬ್ಬರ: ಮೃತರ ಸಂಖ್ಯೆ 15 ಕ್ಕೆ ಏರಿಕೆ
ಭುವನೇಶ್ವರ, ಮೇ 04: ಭಾರತದ ಪೂರ್ವ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಿರುವ ಫೋನಿ ಚಂಡಮಾರುತದ ಅಬ್ಬರ ಇನ್ನೂ ತಗ್ಗಿಲ್ಲ. ಈಗಾಗಲೇ ಈ ಚಂಡಮಾರುತದ ಹೊಡೆತಕ್ಕೆ ಬಲಿಯಾದವರ ಸಂಖ್ಯೆ 15 ಕ್ಕೆ ಏರಿಕೆಯಾಗಿದ್ದು, ಹಲವು ಕೋಟಿಯಷ್ಟು ಆಸ್ತಿಪಾಸ್ತಿಯೂ ನಷ್ಟವಾಗಿದೆ.
ಇಂದು ಒಡಿಶಾದಲ್ಲಿ ಫೋನಿ ಪ್ರಭಾವ ಕೊಂಚ ತಗ್ಗಿದೆ. ಆದರೆ ಪಶ್ಚಿಮ ಬಂಗಾಳದತ್ತ ಗಾಳಿ ತನ್ನ ದಿಕ್ಕು ಬದಲಿಸಿದ್ದು, ಗಂಟೆಗೆ 90 ಕಿ.ಮೀ.ವೇಗದಲ್ಲಿ ಬೀಸುತ್ತಿದೆ.
ಇಂದು ಬೆಳಿಗ್ಗೆಯಷ್ಟೇ 'ಫೋನಿ' ಪಶ್ಚಿಮ ಬಂಗಾಳದ ಖರಗ್ಪುರ ಮೂಲಕ ಪ್ರವೇಶಿಸಿದ್ದು, ಕೋಲ್ಕತ್ತಾದಿಂದ ಹೊರಡಬೇಕಿದ್ದ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಒಡಿಶಾ ಮತ್ತು ಕೋಲ್ಕತ್ತಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮೇ 5 ರಂದು ನಡೆಯಬೇಕಿದ್ದ ನೀಟ್ (National Eligibility cum Entrance Test) ಪರೀಕ್ಷೆಯನ್ನೂ ಚಂಡಮಾರುತದ ಕಾರಣಕ್ಕಾಗಿ ಮುಂದೂಡಲಾಗಿದೆ.
"24 ಗಂಟೆಗಳಲ್ಲಿ 12 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅದಕ್ಕಾಗಿ 7000 ಅಡುಗೆ ಕೋಣೆ ಮತ್ತು 9000 ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ. ಅದಕ್ಕಾಗಿ 45 ಸಾವಿರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ" ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.












Click it and Unblock the Notifications