ಮಹಾತ್ಮ ಗಾಂಧಿ ವೇಷದಲ್ಲಿ ಸ್ಲಂ ಜನರಿಗೆ ಮಾಸ್ಕ್ ವಿತರಿಸಿದ ವ್ಯಕ್ತಿ
ಭುವನೇಶ್ವರ, ಏಪ್ರಿಲ್ 14: ಕೊರೊನಾ ವೈರಸ್ ತಡೆಯಲು ಮಾಸ್ಕ್ ಬಳಕೆ ಮಾಡುವುದು ಮುಖ್ಯವಾಗಿದೆ. ಅದನ್ನು ಹೇಳಿದರೂ ಕೆಲವರು ಪಾಲನೆ ಮಾಡುತ್ತಿಲ್ಲ. ಇನ್ನು ಕೆಲವರಿಗೆ ಅವನ್ನು ಕೊಂಡುಕೊಳ್ಳುವಷ್ಟು ಹಣ ಇರುವುದಿಲ್ಲ. ಅಂತಹವರಿಗೆ ಒಡಿಶಾದಲ್ಲಿ ಮಾಸ್ಕ್ ವಿತರಣೆ ಮಾಡಲಾಗಿದೆ.
ವಿಶೇಷ ಎಂದರೆ, ಮಹಾತ್ಮ ಗಾಂಧಿ ವೇಷ ತೊಟ್ಟು ವ್ಯಕ್ತಿ ಮಾಸ್ಕ್ ವಿತರಣೆ ಮಾಡಿದ್ದಾರೆ. ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಸ್ಲಂಗಳಿಗೆ ತೆರಳಿ, ಅಲ್ಲಿನ ಬಡ ಜನರಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ್ದಾರೆ.
ಶ್ರೀರಾಮ್ ಎನ್ನುವವರು ಈ ಕೆಲಸವನ್ನು ಮಾಡಿದ್ದಾರೆ. ಈಗ ಅವರನ್ನು ಜನ ಸಿಲ್ವರ್ ಗಾಂಧಿ ಎಂದೇ ಜನ ಕರೆಯುತ್ತಿದ್ದಾರೆ. ಈ ವ್ಯಕ್ತಿ ಒಂದು ವಾರದ ಹಿಂದೆ ಈ ಕೆಲಸ ಮಾಡಲು ಶುರು ಮಾಡಿದ್ದು, ಕಾಲು ನಡಿಗೆಯಲ್ಲಿಯೇ 150 ಕಿಲೋ ಮೀಟರ್ ದೂರ ಸಾಗಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಮಾಸ್ಕ್, ಸ್ಯಾನಿಟೈಸರ್ ಖರೀದಿ ಮಾಡಿ, ಬಡವರಿಗೆ ನೀಡುತ್ತಿದ್ದಾರೆ.

''ಜನರು ನನ್ನನ್ನು ಸಿಲ್ವರ್ ಗಾಂಧಿ ಎಂದು ಕರೆಯುತ್ತಿದ್ದಾರೆ. ಜನರಿಗೆ ಜಾಗೃತಿ ಮೂಡಿಸಲು ನಾನು ಕಾಲ್ನಡಿಗೆಯಲ್ಲಿ ನಡೆಯುತ್ತಿದ್ದೇನೆ. ಇದಕ್ಕಾಗಿ ನನ್ನ ಹಣವನ್ನು ಬಳಸಿಕೊಂಡಿದ್ದೇನೆ.'' ಎಂದು ಶ್ರೀರಾಮ್ ತಮ್ಮ ಪ್ರಯಾಣದ ಬಗ್ಗೆ ಹೇಳಿದ್ದಾರೆ.
ಜನರಿಗೆ ಮಾಸ್ಕ್ ನೀಡುವುದರ ಜೊತೆಗೆ ಕೊರೊನಾ ಹರಡದಂತೆ ಹೇಗೆ ಇರಬೇಕು ಎಂದು ಅರಿವು ಮೂಡಿಸುತ್ತಿದ್ದಾರೆ. ಸಾಮಾಜಿಕ ಅಂತರದ ಬಗ್ಗೆ ಶ್ರೀರಾಮ್ ತಿಳಿ ಹೇಳುತ್ತಿದ್ದಾರೆ.












Click it and Unblock the Notifications