ಬೆದರಿಕೆಯನ್ನೇ ಆತ್ಮಹತ್ಯೆಗೆ ಪ್ರಚೋದನೆ ಎನ್ನಲು ಸಾಧ್ಯವಿಲ್ಲ; ಮಧ್ಯಪ್ರದೇಶ ಹೈಕೋರ್ಟ್
ಭೋಪಾಲ್, ಮಾರ್ಚ್ 18: ಬೆದರಿಕೆಯನ್ನೇ ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಮಧ್ಯಪ್ರದೇಶ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
2020ರಲ್ಲಿನ ಪ್ರಕರಣ ಸಂಬಂಧ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಬೆದರಿಕೆಯೂ ಕಾರಣವಾಗಿರಬಹುದು. ಆದರೆ ಅದನ್ನೇ ಆತ್ಮಹತ್ಯೆಗೆ ಪ್ರಚೋದನೆ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದೆ.
ಟೀ ಮಾಡಲು ನಿರಾಕರಿಸಿದ್ದಕ್ಕೆ ಹೆಂಡತಿ ಮೇಲೆ ಹಲ್ಲೆ; ಬಾಂಬೆ ಹೈಕೋರ್ಟ್ ಹೇಳಿದ್ದೇನು?
2020ರ ಜನವರಿಯಲ್ಲಿ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಹಿಳೆ ಮೇಲೆ ಜಬಲ್ಪುರ ಜಿಲ್ಲೆಯ ಬಾರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮಹಿಳೆಯು ಆ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ತನ್ನನ್ನು ಮದುವೆಯಾಗುವಂತೆ ಆತನಿಗೆ ಒತ್ತಾಯಿಸಿದ್ದರು. ಆ ವ್ಯಕ್ತಿ ಮದುವೆಯಾಗಲು ನಿರಾಕರಿಸಿದ್ದು, ಈ ಸಂದರ್ಭ, ತಮ್ಮನ್ನು ಮದುವೆಯಾಗದೇ ಇದ್ದರೆ, ಆತನ ವಿರುದ್ಧ ದೂರು ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ತನ್ನ ವಿರುದ್ಧದ ಈ ಕ್ರಮ ಪ್ರಶ್ನಿಸಿ ಮಹಿಳೆ ಕೋರ್ಟ್ ಮೊರೆ ಹೋಗಿದ್ದು, ಆತನ ಆತ್ಮಹತ್ಯೆಗೆ ತಾನು ಪ್ರಚೋದನೆ ನೀಡಿಲ್ಲ. ಸಮಸ್ಯೆಯ ನಿವಾರಣೆಗೆ ಬೇರೆ ಮಾರ್ಗಗಳೂ ಇದ್ದುವಲ್ಲವೇ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಮಾರ್ಚ್ 3ರಂದು ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಅಂಜಲಿ ಪಾಲೊ, ಈ ಪ್ರಕರಣದಲ್ಲಿ ಮಹಿಳೆಗೆ ಅಪರಾಧ ಎಸಗುವ ಉದ್ದೇಶವಿರುವುದು ಸಾಬೀತಾದರೆ, ಭಾರತೀಯ ದಂಡಸಂಹಿತೆ 306ರ ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶಿಕ್ಷೆ ನೀಡಬಹುದು. ಆದರೆ ಮಹಿಳೆಯ ಬೆದರಿಕೆಯನ್ನೇ ಆತ್ಮಹತ್ಯೆಗೆ ಪ್ರಚೋದನೆ ಎನ್ನಲು ಸಾಧ್ಯವಿಲ್ಲ ಎಂದು ಹೇಳಿ ಮಹಿಳೆ ವಿರುದ್ಧ ದೂರನ್ನು ವಜಾಗೊಳಿಸಿ ಆರೋಪಮುಕ್ತಗೊಳಿಸಿದ್ದಾರೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]