ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ; ಹಾಸ್ಯ ಕಲಾವಿದನಿಗೆ ಮೂರನೇ ಬಾರಿ ಜಾಮೀನು ನಿರಾಕರಿಸಿದ ಕೋರ್ಟ್
ಇಂದೋರ್, ಜನವರಿ 28: ದೇಶದಲ್ಲಿ ಸಾಮರಸ್ಯ ಹಾಗೂ ಸಹೋದರತ್ವವನ್ನು ಉತ್ತೇಜಿಸುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಕರ್ತವ್ಯ ಎಂದು ಹೇಳಿರುವ ಮಧ್ಯಪ್ರದೇಶ ಹೈಕೋರ್ಟ್ ಇಂದೋರ್ ನ್ಯಾಯಪೀಠ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬಂಧಿತರಾಗಿದ್ದ ಹಾಸ್ಯ ಕಲಾವಿದ ಮುನಾವರ್ ಫಾರುಖ್ ಗೆ ಮೂರನೇ ಬಾರಿ ಜಾಮೀನು ನಿರಾಕರಿಸಿದೆ.
ಮಧ್ಯ ಪ್ರದೇಶದ ಮೊನ್ರೋ ಕೆಫೆಯಲ್ಲಿ ಜನವರಿ 1ರಂದು ಮುನಾವರ್ ಹಾಸ್ಯ ಕಾರ್ಯಕ್ರಮ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಹಾಸ್ಯದ ನೆಪದಲ್ಲಿ ಫಾರುಖ್ ಹಿಂದೂ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳನ್ನು ಅವಮಾನಿಸಿದ್ದಾರೆ. ಗೃಹ ಸಚಿವ ಅಮಿತ್ ಶಾಗೂ ಅವಮಾನ ಮಾಡಿದ್ದಾರೆ ಎಂದು ಇಂದೋರ್ ನ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಮಗ ಏಕಲವ್ಯ ಗೌರ್ ದೂರು ದಾಖಲಿಸಿದ್ದರು. ಆನಂತರ ಇಂದೋರ್ ಪೊಲೀಸರು ಹಾಸ್ಯ ಕಲಾವಿದ ಫಾರುಖ್ ಹಾಗೂ ಎಡ್ವಿನ್ ಆಂಥೊನಿ, ಪ್ರಖರ್ ವ್ಯಾಸ್, ಪ್ರಿಯಂ ವ್ಯಾಸ್, ನಳಿನ್ ಯಾದವ್ ಅವರನ್ನು ಜನವರಿ 2ರಂದು ಬಂಧಿಸಿದ್ದರು.

ಫಾರುಖ್ ಈ ಮುನ್ನ ಎರಡು ಬಾರಿ ಜಾಮೀನಿಗೆ ಮನವಿ ಮಾಡಿದ್ದರು. ಜನವರಿ 14ರಂದು ಮಧ್ಯಪ್ರದೇಶ ಹೈಕೋರ್ಟ್ ನಲ್ಲಿ ಎರಡನೇ ಅರ್ಜಿ ಸಲ್ಲಿಸಿದ್ದರು. ಆಗಲೂ ಜಾಮೀನು ನಿರಾಕರಣೆಯಾಗಿ ಜನವರಿ 27ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ರೋಹಿತ್ ಆರ್ಯ, "ಧಾರ್ಮಿಕ ವಿಚಾರಗಳಿಂದ ಏಕೆ ಲಾಭ ಪಡೆದುಕೊಳ್ಳುತ್ತೀರ? ನಿಮ್ಮ ಮನಸ್ಥಿತಿಗೆ ಏನಾಗಿದೆ? ನಿಮ್ಮ ವ್ಯವಹಾರಕ್ಕಾಗಿ ಇಂಥ ಕೆಲಸಗಳನ್ನು ಹೇಗೆ ಮಾಡುತ್ತೀರ? ಎಂದು ಪ್ರಶ್ನಿಸಿದ್ದರು.
ಇದೀಗ ಮತ್ತೊಮ್ಮೆ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.












Click it and Unblock the Notifications