ಮಧ್ಯಪ್ರದೇಶ: ಕಾಂಗ್ರೆಸ್ಸಿಗೆ ಶುರುವಾಯ್ತು ಆಪರೇಷನ್ ಕಮಲ ಭೀತಿ
ಭೋಪಾಲ್, ಜ 16: ಮಧ್ಯ ಪ್ರದೇಶದಲ್ಲಿ ಜಿದ್ದಾಜಿದ್ದಿನ ಪೈಪೋಟಿಯ ನಂತರ ಅಧಿಕಾರಕ್ಕೇರಲು ಶಕ್ತವಾಗಿದ್ದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ಸಿಗೆ ಆಪರೇಷನ್ ಕಮಲದ ಭೀತಿ ಎದುರಾಗಿದೆಯಾ? ಈ ರೀತಿಯ ಚರ್ಚೆ ಮಧ್ಯಪ್ರದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ಈ ರೀತಿಯ ಸಾಧ್ಯತೆಗಳನ್ನು ಕಾಂಗ್ರೆಸ್ ಅಲ್ಲಗಳೆಯುತ್ತಿದ್ದರೂ ಒಳಗೊಳಗೆ ಆತಂಕ ಮನೆಮಾಡಿದೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಮಧ್ಯಪ್ರದೇಶದ ನೂತನ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಲು ಆರಂಭಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
230ಸ್ಥಾನದ ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 114, ಬಿಜೆಪಿ 109 ಸ್ಥಾನವನ್ನು ಗೆದ್ದಿತ್ತು. ನಾಲ್ಕು ಜನ ಪಕ್ಷೇತರರು, ಇಬ್ಬರು ಬಹುಜನ ಸಮಾಜಪಕ್ಷದ ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ರಚಿಸಿತ್ತು.

ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಅಷ್ಟೇನೂ ಅಂತರವಿಲ್ಲದೇ ಇರುವುದರಿಂದ, ಬಿಜೆಪಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಬಹುದು ಎಂದು ರಾಜ್ಯ ಸಚಿವ ಪಿ ಸಿ ಶರ್ಮಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಮಲ್ ನಾಥ್, ಬಿಜೆಪಿ ಮೊದಲು ತನ್ನ ಮನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲಿ, ಆಮೇಲೆ ನಮ್ಮ ವಿಚಾರಕ್ಕೆ ಬರಲಿ. ನನಗೆ, ಕಾಂಗ್ರೆಸ್ ಶಾಸಕರ ಮೇಲೆ ಸಂಪೂರ್ಣ ಭರವಸೆಯಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ.
ಮೂರು ರಾಜ್ಯಗಳನ್ನು ಕಳೆದುಕೊಂಡ ನಂತರ ಬಿಜೆಪಿ ಹತಾಶವಾಗಿದೆ, ಜೊತೆಗೆ ಲೋಕಸಭಾ ಚುನಾವಣೆಯೂ ಹತ್ತಿರ ಬರುತ್ತಿರುವುದರಿಂದ, ಮಧ್ಯಪ್ರದೇಶದ ಸರಕಾರದಲ್ಲಿ ಅಸ್ಥಿರತೆ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವ ಶರ್ಮಾ ಹೇಳಿಕೆಯನ್ನು ನೀಡಿದ್ದರು.












Click it and Unblock the Notifications