ಕಾಂಗ್ರೆಸ್ ಸರ್ಕಾರ ಉರುಳಿಸುವ ಯತ್ನ ಮಾಡಿಲ್ಲ: ಶಿವರಾಜ್
ಭೋಪಾಲ್, ಮಾರ್ಚ್ 10: ಮಧ್ಯಪ್ರದೇಶದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎಲ್ಲಾ ಸಂಪುಟ ದರ್ಜೆ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಈ ನಡುವೆ ಬಂಡಾಯವೆದ್ದಿರುವ ಜ್ಯೋತರಾದಿತ್ಯ ಸಿಂಧಿಯಾ ನಾಟ್ ರೀಚಬಲ್ ಆಗಿದ್ದಾರೆ. ಇದೆಲ್ಲ ಬಿಜೆಪಿ ನಡೆಸಿರುವ ಆಟ ಎಂದು ಕಮಲ್ ನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇದು ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟ ಇದರಲ್ಲಿ ಬಿಜೆಪಿ ಪಾತ್ರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೇನು ಪತನದ ಅಂಚಿನಲ್ಲಿದೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಸಂಪುಟ ಸಭೆ ನಡೆಸಿದ ಸಿಎಂ ಎಲ್ಲ ಸಚಿವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದ್ದಾರೆ. ನಂತರದಲ್ಲಿ ರಾಜ್ಯ ಸಂಪುಟವನ್ನು ಪುನರ್ ರಚಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಮಂಗಳವಾರದಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿತ ಶಾಸಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನವನ್ನು ನೀಡುವ ಸಾಧ್ಯತೆಗಳಿವೆ. ರಾಜ್ಯಸಭೆಗೆ ಪ್ರವೇಶ ಬಯಸಿರುವ ಜ್ಯೋತಿರಾದಿತ್ಯ ಸಿಂಧಿಯಾ ಮುಂದಿನ ನಡೆ ಮಾತ್ರ ನಿಗೂಢವಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಅಹ್ಮದ್ ಪಟೇಲ್ ಸೇರಿದಂತೆ ಹಲವು ನಾಯಕರು ಶಾಸಕರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ.

ದಿಗ್ವಿಜಯ್ ಸಿಂಗ್ ಆರೋಪ
ಗುರುಗ್ರಾಮಕ್ಕೆ ಶಾಸಕರನ್ನು ಕರೆದೊಯ್ದು ಪ್ರತಿ ಶಾಸಕರಿಗೆ 25 ರಿಂದ 30 ಕೋಟಿ ರು ಆಫರ್ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಈ ಹಿಂದೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಮುಖ್ಯಸ್ಥ ಶರ್ಮ, ಕಮಲ್ ನಾಥ್, ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ದಿಗ್ವಿಜಯ ಸಿಂಗ್ ನಡುವೆ ಆಂತರಿಕ ಕಲಹವಿರುವುದು ಗುಟ್ಟಾದ ವಿಷಯವೇನಲ್ಲ, ಈ ಎಪಿಸೋಡಿನಲ್ಲಿ ನಮ್ಮ ಪಾತ್ರವಿಲ್ಲ, ಇಂಥ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡುತ್ತಿಲ್ಲ, ತಮ್ಮ ಸರ್ಕಾರ ಅಸ್ಥಿರಗೊಳ್ಳುತ್ತಿರುವುದನ್ನು ತಡೆಯಲು ಆಗದೆ ಕಮಲ್ ನಾಥ್ ಈ ರೀತಿ ಹೇಳುತ್ತಿದ್ದಾರೆ ಎಂದಿದ್ದಾರೆ

ಶಿವರಾಜ್ ಸಿಂಗ್ ಪ್ರತಿಕ್ರಿಯೆ
ಕಾಂಗ್ರೆಸ್ ಆಂತರಿಕ ಕಿತ್ತಾಟದಿಂದ ಸರ್ಕಾರ ಪತನವಾಗುವ ಸ್ಥಿತಿಯಲ್ಲಿದೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಕುದುರೆ ವ್ಯಾಪಾರ ಮಾಡುವ ಗತಿ ನಮಗೆ ಬಂದಿಲ್ಲ, ಬಿಜೆಪಿ ಅಧಿಕಾರಕ್ಕಾಗಿ ಕಾದು ಕುಳಿತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೂ ಸೂಕ್ತ ಅವಕಾಶವಿದೆ. ಆದರೆ, ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕಾಂಗ್ರೆಸ್ನ ನಡೆಯಿಂದಾಗಿ ಹಲವು ಬೆಳವಣಿಗೆ ನಡೆಯಲಿದೆ" ಎಂದಿದ್ದಾರೆ.

ಕಮಲ್ ನಾಥ್ ಆಕ್ರೋಶ
'ತಮ್ಮ ಶಾಸಕರಿಗೆ ಆಮಿಷವೊಡ್ಡಿ ಅವರನ್ನು ಸೆಳೆದುಕೊಳ್ಳುವ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಅವರ ತಂತ್ರಗಳಿಗೆ ಬಲಿಯಾಗಲು ನಮ್ಮ ರಾಜ್ಯ ಕರ್ನಾಟಕವಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ. ಆದರೆ, ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಮಧ್ಯಪ್ರದೇಶದಲ್ಲಿ ಸರ್ಕಾರ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದ್ದು, ಮುಖ್ಯಮಂತ್ರಿ ಕಮಲ್ ನಾಥ್ ಆತಂಕ ಮುಂದುವರೆದಿದೆ. ಜ್ಯೋತಿರಾದಿತ್ಯಾ ಸಿಂದಿಯಾ ಕಡೆಗಣಿಸಿದ್ದರಿಂದ ಕನಿಷ್ಠ 17 ಶಾಸಕರು ಬಂಡಾಯವೆದ್ದಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಬಲಾಬಲ
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಕಾಂಗ್ರೆಸ್ 114, ಬಿಜೆಪಿ 107ಶಾಸಕರ ಬಲವನ್ನು ಹೊಂದಿವೆ. 4 ಪಕ್ಷೇತರರು, ಇಬ್ಬರು ಬಿಎಸ್ಪಿ ಶಾಸಕರು, ಒಬ್ಬರು ಸಮಾಜವಾದಿ ಪಕ್ಷದ ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. 2 ಸ್ಥಾನಗಳು ಖಾಲಿಯಿವೆ.

ಕಾಂಗ್ರೆಸ್ ಸರ್ಕಾರರಿಂದ ಹೊರಗುಳಿಯಲು ಬಯಸಿದವರು
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಸಚಿವ ನರೋತ್ತಮ್ ಮಿಶ್ರಾ, ಭೂಪೇಂದ್ರ ಸಿಂಗ್ ಹಾಗೂ ರಾಮ್ ಪಾಲ್ ಸಿಂಗ್ ಅವರು 8 ಮಂದಿ ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಶಾಸಕ ಬಿಸಾಹುಲಾಲ್ ಸಿಂಗ್ ಅವರನ್ನು ಕರೆದೊಯ್ದಿದ್ದಾರೆ ಎಂಬ ಮಾಹಿತಿಯಿದೆ. ಮಧ್ಯಪ್ರದೇಶದ 6 ಸಚಿವರು, 10 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. 20 ಸಚಿವರು ಸದ್ಯ ರಾಜೀನಾಮೆ ನೀಡಿದ್ದು, ಸಂಪುಟ ಪುನರ್ ರಚನೆ ಮಾಡುವ ಸಾಧ್ಯತೆಯಿದೆ.












Click it and Unblock the Notifications