ಹೆಲಿಕಾಪ್ಟರ್ ಖರೀದಿಗೆ ಸಾಲ ನೀಡುವಂತೆ ರಾಷ್ಟ್ರಪತಿಗೆ ಬಡ ಮಹಿಳೆಯ ಪತ್ರ: ಕಾರಣ ಇಲ್ಲಿದೆ
ಭೋಪಾಲ್,ಫೆಬ್ರವರಿ 12: ಹೆಲಿಕಾಪ್ಟರ್ ಖರೀದಿಸಲು ಸಾಲ ನೀಡಿ ಹಾಗೂ ಅದರ ಹಾರಾಟಕ್ಕೆ ಅನುಮತಿ ನೀಡಬೇಕೆಂದು ಮಧ್ಯಪ್ರದೇಶದ ಬಡ ಮಹಿಳೆಯೊಬ್ಬರು ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಪತ್ರ ಬರೆದಿದ್ದಾರೆ.
ಅಷ್ಟಕ್ಕೂ ಈ ಮಹಿಳೆ ನಿಜವಾಗಿಯೂ ಹೆಲಿಕಾಪ್ಟರ್ ಖರೀದಿ ಮಾಡ್ತಾರಾ, ಹೆಲಿಕಾಪ್ಟರ್ ಅಗತ್ಯವೇನು, ಹೀಗೆ ಪತ್ರ ಬರೆದಿದ್ದೇಕೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು ಆಕೆ ಹೇಳಿದ್ದು ತಮಾಷೆಯ ಮಾತಲ್ಲ, ಅವರು ಪತ್ರಬರೆದಿದ್ದೂ ನಿಜ ಹಾಗೆ ಕೇಳಿದ್ದೂ ನಿಜ. ಅವರ ಜಮೀನಿಗೆ ಹೋಗುವ ಮಾರ್ಗವನ್ನು ಓರ್ವ ವ್ಯಕ್ತಿ ಹಾಗೂ ಆತನ ಮಕ್ಕಳು ತಡೆದಿದ್ದಾರೆ. ಬೇರೆ ದಾರಿ ಇಲ್ಲ ಅದಕ್ಕೆ ತನ್ನ ಪತಿಯನ್ನು ಹೆಲಿಕಾಪ್ಟರ್ನಲ್ಲಿ ಜಮೀನಿಗೆ ಕಳುಹಿಸುತ್ತೇನೆ ಅನುಮತಿ ಕೊಡಿ ಎಂದು ಕೇಳಿದ್ದಾರೆ.

ತನ್ನ ಭೂಮಿಗೆ ಹೋಗುವ ಮಾರ್ಗವನ್ನು ಒಬ್ಬ ವ್ಯಕ್ತಿ ಮತ್ತು ಆತನ ಇಬ್ಬರು ಪುತ್ರರು ತಡೆದ ನಂತರ ಅಗರ್ ಗ್ರಾಮದ ಬಸಂತಿ ಬಾಯ್ ಲೊಹರ್ ಎಂಬ ಮಹಿಳೆ ಈ ನಿರ್ಧಾರಕ್ಕೆ ಬಂದಿದ್ದಾರೆ.
ರಾಮಕರನ್ ಲೋಹರ್ ಅವರ ಪತ್ನಿ ಬಸಂತಿ ಅವರು ಈ ವಿಷಯವನ್ನು 'ಚೌಪಾಲ್ ನಿಂದ ಭೋಪಾಲ್'ಗೆ (ಗ್ರಾಮ ಪಂಚಾಯಿತಿಯಿಂದ ಭೋಪಾಲ್ನ ಉನ್ನತ ಅಧಿಕಾರಿಗಳಿಗೆ) ಎತ್ತಿದರೂ, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಸಮಸ್ಯೆ ಪರಿಹಾರವಾಗಿಲ್ಲ, ಆದ್ದರಿಂದ ಕೊನೆಯದಾಗಿ ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ.
ಹಿಂದಿಯಲ್ಲಿ ಟೈಪ್ ಮಾಡಿರುವ ಪತ್ರದಲ್ಲಿ ಬಸಂತಿ, ರೈತ ಪರಮಾನಂದ್ ಪಾಟೀದಾರ್ ಮತ್ತು ಆತನ ಮಕ್ಕಳಾದ ಲವ ಮತ್ತು ಖುಷ್ ತನ್ನ ಭೂಮಿಗೆ ಹೋಗುವ ದಾರಿಯನ್ನು ಬಂದ್ ಮಾಡಿದ್ದಾರೆ. ಹೀಗಾಗಿ ಜಮೀನಿಗೆ ಹೋಗಲು ಸಾಧ್ಯವಾಗುವುದಿಲ್ಲ. ಯಾವ ಯಂತ್ರವನ್ನು, ಎತ್ತುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ.












Click it and Unblock the Notifications