ಮಗ ಮಾತ್ರ ಅಲ್ಲ, ಶಾಸಕನ ಅಪ್ಪನೂ ಹೀಗೆಯೇ ಇದ್ದಿದ್ದು!
ಇಂದೋರ್, ಜೂನ್ 28: ಮಧ್ಯಪ್ರದೇಶದ ಇಂದೋರ್ನ ಬಿಜೆಪಿ ಶಾಸಕ ಆಕಾಶ್ ವಿಜಯ್ವರ್ಗಿಯಾ, ಬುಧವಾರ ಮುನ್ಸಿಪಲ್ ಕಾರ್ಪೊರೇಷನ್ನ ಅಧಿಕಾರಿಯನ್ನು ಭ್ರಷ್ಟಾಚಾರ ಆರೋಪದಡಿ ಕ್ರಿಕೆಟ್ ಬ್ಯಾಟ್ನಿಂದ ಮನಬಂದಂತೆ ಥಳಿಸಿ ಜೈಲುಪಾಲಾಗಿದ್ದಾರೆ. ಈ ವಿವಾದಾತ್ಮಕ ಘಟನೆ ದೇಶದಾದ್ಯಂತ ಚರ್ಚೆಗೆ ಒಳಗಾಗಿದೆ.
ಆಕಾಶ್ ಅವರ ವರ್ತನೆಗೆ ದೇಶದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ, ಅವರು ಎಸಗಿರುವ ಈ ಕೃತ್ಯ ಹೊಸದೇನಲ್ಲ. ಅವರು ತಮ್ಮ ತಂದೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗಿಯಾ ಅವರ ಹಾದಿಯನ್ನೇ ತುಳಿದಿದ್ದಾರಷ್ಟೇ!
ಮುಂಗೋಪ, ದುಡುಕಿನ ವರ್ತನೆಗೆ ಹೆಸರಾದ ಕೈಲಾಶ್ ವಿಜಯ್ವರ್ಗಿಯಾ ಅವರು ಎರಡು ದಶಕಕ್ಕೂ ಹಿಂದೆ ಹೀಗೆಯೇ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದರು ಎಂಬ ಹಳೆಯ ಸುದ್ದಿ ಈಗ ಜೀವ ಪಡೆದುಕೊಂಡಿದೆ.

ಇಂದೋರ್ನಲ್ಲಿ ತಮ್ಮ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಆಗ್ರಹಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆ ವೇಳೆ ಕೈಲಾಶ್ ಅವರು ನಗರದ ಮೇಯರ್ ಮನೆ ಎದುರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಶೂನಿಂದ ಥಳಿಸಿದ್ದರು.
ಕಾಂಗ್ರೆಸ್ ನಾಯಕ ಕೆ.ಕೆ. ಮಿಶ್ರಾ ಅವರು 1994ರಲ್ಲಿ ನಡೆದ ಈ ಘಟನೆಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಇಂದೋರ್ನ ಮೇಯರ್ ಆಗಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಫಳನೀಕರ್ ಅವರ ಎದುರು ಕೈಲಾಶ್ ಅವರು ಶೂ ಹಿಡಿದು ನಿಂತಿರುವುದು ಚಿತ್ರದಲ್ಲಿ ಕಾಣಿಸುತ್ತದೆ.

ಬುಧವಾರ ನಡೆದ ಘಟನೆಯಲ್ಲಿ ಮುನಿಸಿಪಲ್ ಕಾರ್ಪೊರೇಷನ್ನ ವಲಯ ಅಧಿಕಾರಿ ಧೀರೇಂದ್ರ ಬೈಸ್ ಅವರನ್ನು ಆಕಾಶ್ ವಿಜಯ್ವರ್ಗಿಯಾ ಕ್ರಿಕೆಟ್ ಬ್ಯಾಟ್ನಿಂದ ಮನಬಂದಂತೆ ಥಳಿಸಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಬಿಜೆಪಿಯಲ್ಲಿ ನಮಗೆ ಕಲಿಸಿರುವುದು, ಮೊದಲು ಮನವಿ ಮಾಡಿ ಬಳಿಕ ದಾಳಿ ಮಾಡಿ ಎಂದು' ಎಂಬುದಾಗಿ ಹೇಳಿದ್ದರು.
ಆಕಾಶ್ ಅವರಿಂದ ಹಲ್ಲೆಗೊಳಗಾಗಿರುವ ಬೈಸ್ ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications