ರಾಹುಲ್ ಗಾಂಧಿ ಹತಾಶ ರಾಜಕಾರಣಿ: ಶಿವರಾಜ್ ಸಿಂಗ್ ಚೌವ್ಹಾಣ್
ಭೋಪಾಲ್, ಮೇ 22: ಲಂಡನ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ನೀಡಿದ್ದ ಹೇಳಿಕೆ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭೋಪಾಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಹುಲ್ ಗಾಂಧಿ ದೇಶದ ವಿಫಲ, ನಿರಾಶೆಗೊಂಡ ಮತ್ತು ಹತಾಶ ರಾಜಕಾರಣಿ. ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ದೇಶದ ವಿರುದ್ಧ ಮಾತನಾಡಿದ್ದಾರೆ, ಇನ್ಯಾವುದೇ ರಾಜಕಾರಣಿಗಳು ಈ ಕೆಲಸ ಮಾಡುವುದಿಲ್ಲ" ಎಂದರು.
"ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ನಾನು ಅಮೆರಿಕಾ ಪ್ರವಾಸದಲ್ಲಿದ್ದೆ. ಅಲ್ಲಿನ ಪತ್ರಕರ್ತರು ನನ್ನನ್ನು ಭಾರತದ ಪ್ರಧಾನಿ ಕಡಿಮೆ ಸಾಧಕರೇ ಎಂದು ಪ್ರಶ್ನೆ ಮಾಡಿದರು, ಅವರು ಕಾಂಗ್ರೆಸ್ನ ಪ್ರಧಾನಿ ಅಲ್ಲ ಭಾರತದ ಪ್ರಧಾನಿ ಎಂದು ಹೇಳಿದ್ದೆ, ಭಾರತದ ಪ್ರಧಾನಿ ಆಗುವುದು ಕಡಿಮೆ ಸಾಧನೆಯಲ್ಲ ಎಂದಿದ್ದೆ" ಎಂದು ಹೇಳಿದರು.

"ವಿದೇಶದಲ್ಲಿದ್ದಾಗ ನಾವು ಭಾರತವನ್ನು ಟೀಕಿಸಲೇ ಇಲ್ಲ" ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಹೇಳಿಕೆ ಏನು?; ಲಂಡನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಡೆದ 'ಐಡಿಯಾಸ್ ಫಾರ್ ಇಂಡಿಯಾ' ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದರು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, "ದೇಶವು ಪರಿಸ್ಥಿತಿ ಉತ್ತಮವಾಗಿಲ್ಲ, ಬಿಜೆಪಿ ದ್ವೇಷವನ್ನು ಹರಡುತ್ತಿದೆ, ಬಿಜೆಪಿ ದೇಶದಾದ್ಯಂತ ದ್ವೇಷವೆಂಬ ಸೀಮೆ ಎಣ್ಣೆ ಎರಚಿದೆ, ಒಂದೇ ಒಂದು ಕಿಡಿ ಹಚ್ಚಿದರೆ ಸಾಕು, ದೇಶವೇ ಹೊತ್ತಿ ಉರಿಯುತ್ತದೆ" ಎಂದು ಹೇಳಿದ್ದರು.
"ಜನರು, ಸಮುದಾಯಗಳು, ರಾಜ್ಯಗಳು ಮತ್ತು ಧರ್ಮಗಳನ್ನು ಒಗ್ಗೂಡಿಸುವುದು ವಿರೋಧ ಪಕ್ಷ ಕಾಂಗ್ರೆಸ್ನ ಜವಾಬ್ದಾರಿಯಾಗಿದೆ ಎಂದು ಭಾವಿಸುತ್ತೇನೆ. ಭಾರತದ ವಿದೇಶಾಂಗ ನೀತಿಯೂ ಸಂಪೂರ್ಣವಾಗಿ ಬದಲಾಗಿದೆ. ಅಲ್ಲಿನ ಅಧಿಕಾರಿಗಳು ಯಾರ ಮಾತನ್ನು ಕೇಳುವುದಿಲ್ಲ, ಅಹಂಕಾರದಿಂದ ನಡೆದುಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಯಾರ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ, ಅವರು ಮೊದಲು ಎಲ್ಲರ ಮಾತು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು" ಎಂದು ತಿಳಿಸಿದ್ದರು.
"ಭಾರತೀಯ ವಿದೇಶಾಂಗ ಸೇವೆ ಸಂಪೂರ್ಣ ಬದಲಾಗಿದೆ. ಅವರು ದುರಹಂಕಾರಿಗಳು ಎಂದಿದ್ದ ರಾಹುಲ್ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಜೈ ಶಂಕರ್ ಸಹ ತಿರುಗೇಟು ನೀಡಿದ್ದರು. "ಹೌದು ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ. ಅವರು ಸರ್ಕಾರದ ಆದೇಶಗಳನ್ನು ಮಾತ್ರ ಅನುಸರಿಸುತ್ತಾರೆ. ಹೌದು, ಅವರು ಇತರರ ವಾದಗಳನ್ನು ವಿರೋಧಿಸುತ್ತಾರೆ. ಅದನ್ನು ದುರಹಂಕಾರ ಎಂದು ಕರೆಯಲಾಗದು. ಅದನ್ನು ವಿಶ್ವಾಸ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸುವುದು ಎನ್ನಲಾಗುತ್ತದೆ " ಎಂದು ತಿರುಗೇಟು ನೀಡಿದ್ದರು.












Click it and Unblock the Notifications