ಜ್ಯೋತಿರಾಧಿತ್ಯ ಸಿಂಧಿಯಾ ಭದ್ರಕೋಟೆಗೆ ಲಗ್ಗೆ ಇಡಲಿದ್ದಾರೆ ಪೈಲೆಟ್!
ಭೋಪಾಲ್, ಅಕ್ಟೋಬರ್ 26 : ಮಧ್ಯಪ್ರದೇಶದ 28 ಕ್ಷೇತ್ರಗಳ ಉಪ ಚುನಾವಣೆ ಕಣ ಮಂಗಳವಾರದಿಂದ ರಂಗೇರಲಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಸಚಿನ್ ಪೈಲೆಟ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ನವೆಂಬರ್ 3ರಂದು ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಜ್ಯಸಭಾ ಸದಸ್ಯರಾದ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಪ್ರಭಾವವಿದೆ.
ಗ್ವಾಲಿಯರ್ ಕಣಿವೆ ಪ್ರದೇಶದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸಚಿನ್ ಪೈಲೆಟ್ ಕಾಂಗ್ರೆಸ್ನ ಸ್ಟಾರ್ ಪ್ರಚಾರಕರು. ಸಚಿನ್ ಪೈಲೆಟ್ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಭಾವ ಇರುವ ಕ್ಷೇತ್ರಗಳಲ್ಲಿ 2 ದಿನ ಪ್ರಚಾರ ಮಾಡಲಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಆಹ್ವಾನದಂತೆ ಸಚಿನ್ ಪೈಲೆಟ್ ಗ್ವಾಲಿಯರ್ ಕಣಿವೆಯಲ್ಲಿ ಅಕ್ಟೋಬರ್ 27 ಮತ್ತು 28ರಂದು ಪ್ರಚಾರ ನಡೆಸಲಿದ್ದಾರೆ. ಇಬ್ಬರು ಯುವ ನಾಯಕರ ಪ್ರಭಾವ ಚುನಾವಣೆಯಲ್ಲಿ ಹೇಗೆ? ಫಲ ನೀಡಲಿದೆ ಕಾದು ನೋಡಬೇಕಿದೆ.
ಮಾರ್ಚ್ನಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜೊತೆ ರಾಜೀನಾಮೆ ನೀಡಿದ ಶಾಸಕರ ಕ್ಷೇತ್ರದಲ್ಲಿಯೇ ಉಪ ಚುನಾವಣೆ ನಡೆಯುತ್ತಿದೆ. ಶಾಸಕರ ರಾಜೀನಾಮೆ ಕೊಡಿಸಿ ಕಮಲನಾಥ್ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದ ಸಿಂಧಿಯಾ ಅವರಿಗೆ ತಕ್ಕಪಾಠ ಕಲಿಸಲು ಸಚಿನ್ ಪೈಲೆಟ್ ಕರೆಸಲಾಗುತ್ತಿದೆ.
ಗ್ವಾಲಿಯರ್ ಕಣಿವೆ ಪ್ರದೇಶಗಳು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಗಡಿಯಲ್ಲಿವೆ. ಸಚಿನ್ ಪೈಲೆಟ್ ಅವರ ಗುಜ್ಜಾರ್ ಸಮುದಾಯದ ಜನರು ಹೆಚ್ಚಾಗಿ ಈ ಪ್ರದೇಶದಲ್ಲಿ ಇದ್ದಾರೆ. ಆದ್ದರಿಂದ, ಉಪ ಚುನಾವಣೆ ಪ್ರಚಾರಕ್ಕೆ ಅವರನ್ನು ರಾಜ್ಯ ಕಾಂಗ್ರೆಸ್ ಘಟಕ ಕರೆಸುತ್ತಿದೆ.
ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ, ಉಪ ಮುಖ್ಯಮಂತ್ರಿಯೂ ಆಗಿದ್ದ ಸಚಿನ್ ಪೈಲೆಟ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದರು. ಅವರು ಬಿಜೆಪಿ ಸೇರಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಹೈಕಮಾಂಡ್ ನಾಯಕರ ಸಂಧಾನದ ಬಳಿಕ ಅವರು ಕಾಂಗ್ರೆಸ್ನಲ್ಲಿಯೇ ಮುಂದುವರೆದಿದ್ದಾರೆ.












Click it and Unblock the Notifications