ಕೆಜಿಎಫ್ ಸಿನಿಮಾ ನೋಡಿ ನಾಯಕನಂತೆ ಹೆಸರು ಮಾಡಲು ನಾಲ್ವರನ್ನು ಕೊಂದ ಯುವಕನ ಬಂಧನ
ಭೋಪಾಲ್, ಸೆಪ್ಟೆಂಬರ್ 2: ಮಧ್ಯಪ್ರದೇಶದಲ್ಲಿ ಸೆಕ್ಯುರಿಟಿ ಗಾರ್ಡ್ಗಳನ್ನು ಹತ್ಯೆ ಮಾಡುತ್ತಿದ್ದ ಹಂತಕನನ್ನು ಬಂಧಿಸಲಾಗಿದೆ. ಹಂತಕನನ್ನು 19 ವರ್ಷ ವಯಸ್ಸಿನ ಶಿವಕುಮಾರ್ ಎಂದು ಗುರುತಿಸಲಾಗಿದೆ. ಹಂತಕ ಹೇಳಿದ ವಿಷಯವನ್ನು ಕೇಳಿ ಮಧ್ಯಪ್ರದೇಶ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಕನ್ನಡದ ಬ್ಲಾಕ್ಬಸ್ಟರ್ ಸಿನಿಮಾ ಕೆಜಿಎಫ್ ಸಿನಿಮಾ ನೋಡಿ ಸ್ಫೂರ್ತಿ ಪಡೆದಿದ್ದು, ಅದೇ ರೀತಿ ತಾನು ಪ್ರಸಿದ್ಧಿಯಾಗಲು ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕೊಲೆ ಮಾಡಿದ ಒಬ್ಬರ ಮೊಬೈಲ್ ಅನ್ನು ಕದ್ದುಕೊಂಡು ಬಂದಿದ್ದ, ಆ ಮೊಬೈಲ್ ಫೋನ್ ಅನ್ನು ಟ್ರೇಸ್ ಮಾಡಿದ ಪೊಲೀಸರು ಆರೋಪಿ ಹಂತಕನನ್ನು ಕೊನೆಗೂ ಬಂಧಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಒಬ್ಬನನ್ನು ಕೊಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಾರ್ಟ್ಸ್ ಮತ್ತು ಶರ್ಟ್ ಧರಿಸಿರುವ ಆರೋಪಿ, ಸೆಕ್ಯುರಿಟಿ ಗಾರ್ಡ್ಗೆ ಮೊದಲು ಬಲವಾಗಿ ಹೊಡೆಯುತ್ತಾನೆ, ನಂತರ ಅವನ ತಲೆಗೆ ಕಲ್ಲಿನಿಂದ ಹೊಡೆಯುವ ದೃಶ್ಯಗಳು ಸೆರೆಯಾಗಿವೆ. ಅವನ ಕೃತ್ಯವನ್ನು ಯಾರೂ ನೋಡಿಲ್ಲ ಎಂದು ಖಚಿತಪಡಿಸಿಕೊಂಡ ನಂತರ, ಆರೋಪಿ ಸ್ಥಳದಿಂದ ದೂರ ಹೋಗುತ್ತಾನೆ.

ಕೆಜಿಎಫ್ ಚಿತ್ರದಿಂದ ಸ್ಫೂರ್ತಿ ಪಡೆದ ಆರೋಪಿ!
ಪೊಲೀಸ್ ಅಧಿಕಾರಿ ತರುಣ್ ನಾಯಕ್ ಹೇಳಿಕೆ ನೀಡಿರುವ ಪ್ರಕಾರ, ಗ್ಯಾಂಗ್ಸ್ಟರ್ ಒಬ್ಬನ ಸುತ್ತ ಸುತ್ತುವ ಕನ್ನಡ ಚಲನಚಿತ್ರ ಕೆಜಿಎಫ್ನಿಂದ ಸ್ಫೂರ್ತಿ ಪಡೆದ ಯುವಕ, ರಾತ್ರಿಯ ಹೊತ್ತಲ್ಲಿ ಕೊಲೆಗಳನ್ನು ಮಾಡಿದ್ದಾನೆ. ಮುಂದೆ ಪೊಲೀಸರನ್ನು ಹತ್ಯೆ ಮಾಡಲು ಯೋಜಿಸಿದ್ದಾಗಿ ಆತ ಪೊಲೀಸರಿಗೆ ಹೇಳಿದ್ದಾನೆ.
ಶಿವಪ್ರಸಾದ್ ಕಳೆದ ರಾತ್ರಿ ಮಧ್ಯಪ್ರದೇಶದ ಸಾಗರ್ನಲ್ಲಿ ಮೂವರು ಮತ್ತು ಭೋಪಾಲ್ನಲ್ಲಿ ಮತ್ತೊಬ್ಬ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಏಕೈಕ ಗುರಿ ಪ್ರಸಿದ್ಧವಾಗುವುದ ಮಾತ್ರವಾಗಿದ್ದರಿಂದ, ಮಲಗುವ ಭದ್ರತಾ ಸಿಬ್ಬಂದಿಯನ್ನು ಮಾತ್ರ ಗುರಿಯಾಗಿಸಿಕೊಂಡು ಕೃತ್ಯ ಎಸಗಿದ್ದಾನೆ.

ಸರಣಿ ಹತ್ಯೆಯಿಂದ ಜನರಲ್ಲಿ ಆತಂಕ
ಒಂದರ ಹಿಂದೊಂದರಂತೆ ನಡೆದ ಸರಣಿ ಕೊಲೆಗಳು ಅಲ್ಲಿನ ನಿವಾಸಿಗಳಲ್ಲಿ ಭಯ ಹುಟ್ಟುಹಾಕಿದ್ದವು. ತಲೆಗೆ ಹೊಡೆದು ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿದ್ದಾನೆ. ಬಂಧನಕ್ಕೂ ಮುನ್ನ ಮಧ್ಯಪ್ರದೇಶ ಪೊಲೀಸರು ಹಂತಕನ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದರು.
ಮೇ ತಿಂಗಳಲ್ಲಿ ಮೇಲ್ಸೇತುವೆ ನಿರ್ಮಾಣ ಸ್ಥಳದಲ್ಲಿ ಕಾವಲುಗಾರನೊಬ್ಬನನ್ನು ಕೊಲೆ ಮಾಡಲಾಗಿದ್ದು, ಆತನ ಮುಖದ ಮೇಲೆ ಶೂ ಇರಿಸಲಾಗಿತ್ತು. ಕೊಲೆ ಮಾಡಿದ ಯಾರ ಬಳಿಯಿಂದ ಆರೋಪಿ ಏನನ್ನೂ ಕಳವು ಮಾಡಿರಲಿಲ್ಲ.

ಭೋಪಾಲ್ನಲ್ಲಿ ಆರೋಪಿಯ ಬಂಧನ
"ಇದೊಂದು ಪೂರ್ವಾಗ್ರಹವಿಲ್ಲದ ಕೊಲೆ. ಆತ ಎರಡನೇ ಅಥವಾ ಮೂರನೇ ವ್ಯಕ್ತಿಯನ್ನು ಕೊಲೆ ಮಾಡಿದ ಸತ್ತ ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಹೊತ್ತೊಯ್ಯುತ್ತಿದ್ದರಿಂದ ಪೊಲೀಸರು ಆತನನ್ನು ಹಿಡಿಯಲು ಸುಲಭವಾಯಿತು. ಫೋನ್ ಸ್ಥಳದ ಆಧಾರದ ಮೇಲೆ ಅವನನ್ನು ಭೋಪಾಲ್ನಲ್ಲಿ ಬಂಧಿಸಲಾಯಿತು" ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಸಾಗರ್ ನಿಂದ ಕೊಲೆ ಸರಣಿ ಆರಂಭ
ಗುರುವಾರ ರಾತ್ರಿ ಅವರು ಸೋನು ವರ್ಮಾ (23) ಎಂಬ ವ್ಯಕ್ತಿಯನ್ನು ಮಾರ್ಬಲ್ ರಾಡ್ ಬಳಸಿ ಕೊಂದಿದ್ದಾನೆ. ಸೋನು ವರ್ಮಾ ಮಾರ್ಬಲ್ ಅಂಗಡಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಭೋಪಾಲ್ನಿಂದ 169 ಕಿಲೋ ಮೀಟರ್ ದೂರದಲ್ಲಿರುವ ಸಾಗರ್ ಸ್ಥಳದಿಂದ ಶಿವಪ್ರಸಾದ್ನ ಹತ್ಯೆಯ ಸರಣಿ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಖಾನೆಯೊಂದರ ಸಿಬ್ಬಂದಿ ಕಲ್ಯಾಣ್ ಲೋಧಿ ಎನ್ನುವಾತನನ್ನು ಆಗಸ್ಟ್ 28 ರಂದು ಕೊಲ್ಲಲಾಯಿತು. ಅವನ ತಲೆಯನ್ನು ಸುತ್ತಿಗೆಯಿಂದ ಒಡೆದು ಹತ್ಯೆ ಮಾಡಲಾಗಿತ್ತು. ಮರುದಿನ ರಾತ್ರಿಯೇ ಕಲಾ ಮತ್ತು ವಾಣಿಜ್ಯ ಕಾಲೇಜಿನ 60 ವರ್ಷದ ಭದ್ರತಾ ಸಿಬ್ಬಂದಿ ಶಂಭು ನಾರಾಯಣ ದುಬೆ ಅವರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದನು.












Click it and Unblock the Notifications