ಪಾಕ್ ಸೇನಾ ಮುಖ್ಯಸ್ಥರ ಅಪ್ಪುಗೆಯೇ ಇದಕ್ಕೆ ಕಾರಣ!: ಬೆನ್ನು ತಟ್ಟಿಕೊಂಡ ಸಿಧು
ಭೋಪಾಲ್, ನವೆಂಬರ್ 23: ಪಾಕಿಸ್ತಾನದ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡ ಗಳಿಗೆಯೇ ಕರ್ತಾರ್ಪುರ ಗುರುದ್ವಾರ ದರ್ಬಾರ್ ಸಾಹಿಬ್ ಕಾರಿಡಾರ್ ನಿರ್ಮಾಣಕ್ಕೆ ಪಾಕಿಸ್ತಾನ ಕೂಡ ಸಹಮತಿ ಸೂಚಿಸಲು ಕಾರಣ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಶ್ರೇಯಸ್ಸನ್ನು ತಾವೇ ಹೇಳಿಕೊಳ್ಳುವ ಮೂಲಕ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ನೇಮಕವಾದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿಧು ವಿಶೇಷ ಆಹ್ವಾನಿತರಾಗಿ ತೆರಳಿದ್ದರು.
ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರನ್ನು ಅಪ್ಪಿಕೊಂಡಿದ್ದು ತೀವ್ರ ಚರ್ಚೆಗೆ ಒಳಗಾಗಿತ್ತು.
ನಿರಂತರ ದಾಳಿ ನಡೆಸಿ ಸೈನಿಕರನ್ನು ಸಾಯಿಸುತ್ತಿರುವ ಮತ್ತು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಪರವಾಗಿ ಸಿಧು ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

15-16 ಕೋಟಿ ಜನರಿಗೆ ಒಳಿತು
ಮಧ್ಯಪ್ರದೇಶದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಧು, ನನ್ನ ಅಪ್ಪುಗೆಯು 15-16 ಕೋಟಿ ಜನರಿಗೆ ಒಳಿತನ್ನು ಉಂಟುಮಾಡಿದೆ. ಕೇಂದ್ರ ಸರ್ಕಾರವು ಈಗ ಅಂತಾರಾಷ್ಟ್ರೀಯ ಗಡಿಯಿಂದ ಗುರುದ್ವಾರ ಕರ್ತಾರ್ಪುರ ಸಾಹಿಬ್ವರೆಗೆ ಕಾರಿಡಾರ್ ನಿರ್ಮಿಸಲು ಮುಂದಾಗಿದೆ. ಕಡೇಪಕ್ಷ ಇದೊಂದು ಒಪ್ಪಂದ ರಫೇಲ್ ಡೀಲ್ನಂತಿಲ್ಲ ಎಂದು ಹೇಳಿದ್ದಾರೆ.

ಕಾರ್ತಾರ್ಪುರ ಕಾರಿಡಾರ್ ನಿರ್ಮಾಣ
ಪಾಕಿಸ್ತಾನದೊಂದಿಗಿನ ಅಂತಾರಾಷ್ಟ್ರೀಯ ಗಡಿಯವರೆಗೂ ಕರ್ತಾರ್ಪುರ ಕಾರಿಡಾರ್ಅನ್ನು ವಿಸ್ತರಿಸುವ ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ಭಾರತ ಗುರುವಾರ ಘೋಷಿಸಿತ್ತು.
ಪಂಜಾಬ್ನ ಗುರುದಾಸಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಸ್ಥಳದಿಂದ ಕಾರಿಡಾರ್ ಆರಂಭವಾಗಲಿದ್ದು, ಭಾರತದ ಕಡೆಗಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಅಂತ್ಯಗೊಳ್ಳಲಿದೆ.
ಕರ್ತಾರ್ಪುರದ ಗುರುದ್ವಾರ ದರ್ಬಾರ್ ಸಾಹಿಬ್ ವರೆಗೂ ತನ್ನ ನೆಲೆಯಲ್ಲಿ ಇದೇ ರೀತಿ ಕಾರಿಡಾರ್ ನಿರ್ಮಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಕೋರುವುದಾಗಿ ಸರ್ಕಾರ ತಿಳಿಸಿತ್ತು. ಈ ಯೋಜನೆಗೆ ನರೇ<�ದ್ರ ಮೋದಿ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದೆ.
|
ಹೃದಯಪೂರ್ವಕ ಧನ್ಯವಾದ
ಭಾರತ ಸರ್ಕಾರಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಕರ್ತಾರ್ಪುರ ಕಾರಿಡಾರ್ ಯೋಜನೆಗಾಗಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮನವಿ ಮಾಡುತ್ತೇನೆ ಎಂದು ನವಜೋತ್ ಸಿಂಗ್ ಸಿಧು ಗುರುವಾರ ಟ್ವೀಟ್ ಮಾಡಿದ್ದರು.

ದೇಶ ದ್ರೋಹದ ಆರೋಪಿ
ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ್ದ ಸಿಧು, ಅಲ್ಲಿ ಪಾಕ್ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡು ವಿವಾದ ಸೃಷ್ಟಿಸಿತ್ತು. ಸಿಧು ಅವರದು ದೇಶ ದ್ರೋಹಿ ನಡೆ ಎಂದು ಆರೋಪಿಸಲಾಗಿತ್ತು.
ನಮ್ಮ ಜನರನ್ನು ಕೊಂದು ಹಾಕಿದ ಸೇನೆಯ ಮುಖ್ಯಸ್ಥರನ್ನು ಅಲ್ಲಿಗೆ ಹೋಗಿ ಅಪ್ಪಿಕೊಂಡಿದ್ದಾರೆ. ಈ ಮೂಲಕ ಗಡಿಯಲ್ಲಿ ಕಾವಲು ನಿಲ್ಲುವ ನಮ್ಮ ಲಕ್ಷಾಂತರ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.












Click it and Unblock the Notifications