ಕಮಲ್ ನಾಥ್ ದೆಹಲಿಗೆ! ಬೀಳುವ ಅಪಾಯದಲ್ಲಿ ಮಧ್ಯಪ್ರದೇಶ ಸರ್ಕಾರ!
ಭೋಪಾಲ್, ಜೂನ್ 06: ಲೋಕಸಬೆ ಚುನಾವಣೆಯ ಫಲಿತಾಂಶದ ನಂತರ ಮಧ್ಯಪ್ರದೇಶದಲ್ಲಿ ಸರ್ಕಾರ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದ್ದು, ಮುಖ್ಯಮಂತ್ರಿ ಕಮಲ್ ನಾಥ್ ಆತಂಕದಲ್ಲಿದ್ದಾರೆ.
ಮೂರು ದಿನಗಳ ದೆಹಲಿ ಭೇಟಿಗೆಂದು ಬುಧವಾರ ತೆರಳಿರುವ ಕಮಲ್ ನಾಥ್ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ ಸರ್ಕಾರದ ಅಳಿವು, ಉಳಿವಿನ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯ ನಂತರ ಕಮಲ್ ನಾಥ್ ಮಧ್ಯಪ್ರದೇಶವನ್ನು ಬಿಟ್ಟು ಎಲ್ಲಿಯೂ ತೆರಳಿರಲಿಲ್ಲ. ಕಾಮಗ್ರೆಸ್ ಹೈಕಮಾಂಡ್ ಸಹ ಎಲ್ಲಿಯೂ ತೆರಳದಂತೆ ಕಮಲ್ ನಾಥ್ ಅವರಿಗೆ ಸೂಚನೆ ನೀಡಿತ್ತು. ಆದ್ದರಿಂದಲೇ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಗೂ ಅವರು ತೆರಳಿರಲಿಲ್ಲ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಎರಡು ಬಣಗಳಾಗಿ ಒಡೆಯಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಅವರು ಮೈಎಲ್ಲಾ ಕಣ್ಣಾಗಿಸಿಕೊಂಡು ಶಾಸಕರನ್ನು ಕಾದಿದ್ದರು.

ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ 114 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಬಹುಮತಕ್ಕೆ ಅಗತ್ಯವಿದ್ದ ಮ್ಯಾಜಿಕ್ ಸಂಖ್ಯೆ 115 ನ್ನು ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್ಸಿಗೆ ಬಿಎಸ್ಪಿಯ ಇಬ್ಬರು ಶಾಸಕರು ಬೆಂಬಲ ಸೂಚಿಸಿದ್ದರಿಂದ 116 ಸಂಖ್ಯೆ ತಲುಪಿ ಕಾಂಗ್ರೆಸ್ ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ಕಮಲ್ ನಾಥ್ ಮುಖ್ಯಮಂತ್ರಿಯಾದರು.
ಆದರೆ 109 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಬಿಜೆಪಿ ನಾಲ್ವರು ಪಕ್ಷೇತರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು, ಬಿಸ್ಪಿಯ ಇಬ್ಬರು ಶಾಸಕರೂ ಯಾವುದೇ ಕ್ಷಣದಲ್ಲಿ ಕಾಂಗ್ರೆಸ್ ಗೆ ನೀಡಿದ ಬೆಂಬಲ ವಾಪಸ್ ಪಡೆದು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿದ್ದು, ಹಾಗಾದರೆ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಗ್ಯಾರಂಟಿ. ಹಾಗಾಗದಂತೆ ತಡೆಯುವ ಉದ್ದೇಶದಿಂದ ಕಮಲ್ ನಾಥ್ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ, ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ.












Click it and Unblock the Notifications