ನೆಹರೂ ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ ಕಮಲ್ ನಾಥ್
ನೆಹರೂ ಮತ್ತು ಗಾಂಧಿ ಕುಟುಂಬದೊಡನೆ ದಶಕಗಳ ಕಾಲ ಹತ್ತಿರದ ಸಂಬಂಧ ಹೊಂದಿರುವ 72 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಮೂವತ್ತೆಂಟು ವರ್ಷಗಳಿಂದ ರಾಜಕೀಯದಲ್ಲಿ ಸಾಕಷ್ಟು ನೀರು ಕುಡಿದಿರುವ, ನಿಷ್ಠಾವಂತ ಸೇವಕನಾಗಿ ಕಾಂಗ್ರೆಸ್ ಪಕ್ಷದ ಸೇವೆ ಮಾಡಿರುವ ಅವರು ನಲವತ್ತೇಳು ವರ್ಷದ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರೊಂದಿಗೆ ಮುಖ್ಯಮಂತ್ರಿ ಗಾದಿಗಾಗಿ ಸಾಕಷ್ಟು ಸೆಣಸಾಡಬೇಕಾಯಿತು.
ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದರೂ (1946, ನವೆಂಬರ್ 18), ಅಧ್ಯಯನವನ್ನು ಕೋಲ್ಕತಾದಲ್ಲಿ ನಡೆಸಿದರೂ, ನೆಲೆ ಕಂಡುಕೊಂಡಿದ್ದು ಮಧ್ಯ ಪ್ರದೇಶದಲ್ಲಿ. ನೆರಹೂ ಮತ್ತು ಗಾಂಧಿ ಕುಟುಂಬದೊಡನೆ ಬಾಲ್ಯದಿಂದಲೂ ಅವರು ಸಂಪರ್ಕ ಹೊಂದಿದ್ದರು. ಡೆಹ್ರಾಡೂನ್ ನ ಪ್ರತಿಷ್ಠಿತ ಡೂನ್ ಬೋರ್ಡಿಂಗ್ ಶಾಲೆಯಲ್ಲಿ, ಇಂದಿರಾ ಗಾಂಧಿ ಅವರ ಮಗ ಸಂಜಯ್ ಗಾಂಧಿ ಅವರ ಸಹಪಾಠಿಯಾಗಿದ್ದರು ಕಮಲ್ ನಾಥ್.

1980ರಲ್ಲಿ 7ನೇ ಲೋಕಸಭೆಗೆ ಮೊದಲ ಬಾರಿ ಆಯ್ಕೆಯಾದ ಅವರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರ ಜವಳಿ ಸಚಿವರಾಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ, ನಗರಾಭಿವೃದ್ಧಿ ಸಚಿವರಾಗಿ, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಮಲ್ ನಾಥ್ ಅವರು ಅಪಾರ ಅನುಭವ ಹೊಂದಿದ್ದಾರೆ. ಅವರು ಪ್ರಸ್ತುತ ಮಧ್ಯ ಪ್ರದೇಶದ ಚಿಂದವಾರಾ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಸಿಖ್ ದಂಗೆಯ ಕಳಂಕ : 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ಮರುದಿನ ನವೆಂಬರ್ 1ರಂದು ಭುಗಿಲೆದ್ದ ಸಿಖ್ ವಿರೋಧಿ ದಂಗೆಯಲ್ಲಿ 3000ಕ್ಕೂ ಹೆಚ್ಚು ಸಿಖ್ ರನ್ನು ಹತ್ಯೆಗೈಯಲಾಗಿತ್ತು. ರಾಕಬ್ ಗುಂಜ್ ಗುರುದ್ವಾರಾದ ಎದುರು ಇಬ್ಬರು ಸಿಖ್ ರನ್ನು ಜೀವಂತವಾಗಿ ಸುಟ್ಟಾಗ ಆಗ ಕಮಲ್ ನಾಥ್ ಅವರು ಅಲ್ಲೇ ಇದ್ದರು ಎಂಬುದು ಅವರ ಮೇಲಿರುವ ಆರೋಪ. ಮುಂದೆ ನಾನಾವತಿ ಕಮಿಷನ್ ನಡೆಸಿದ ತನಿಖೆಯಲ್ಲಿ ಕಮಲ್ ವಿರುದ್ಧ ಪ್ರಬಲ ಸಾಕ್ಷಿ ದೊರೆಯದಿದ್ದರಿಂದ ಅವರನ್ನು ದೋಷಮುಕ್ತರನ್ನಾಗಿ ಮಾಡಲಾಗಿದೆ.












Click it and Unblock the Notifications