ಕಾಂಗ್ರೆಸ್ ತೊರೆದ ಜ್ಯೋತಿರಾಧಿತ್ಯಾಗೆ ಬಿಜೆಪಿ ಕೊಡುತ್ತಿರುವ ಕೊಡುಗೆ ಏನು?
ಭೋಪಾಲ್, ಮಾರ್ಚ್ 11: ಸತತ 18 ವರ್ಷ ಕಾಂಗ್ರೆಸ್ನಲ್ಲಿದ್ದ ಮಧ್ಯಪ್ರದೇಶದ ಹೆಸರಾಂತ ರಾಜಕಾರಣಿ ಜ್ಯೋತಿರಾಧಿತ್ಯಾ ಸಿಂಧಿಯಾ ಅವರು ಬುಧವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ಕಾಂಗ್ರೆಸ್ನಲ್ಲಿದ್ದು ಸತತ ನಾಲ್ಕು ಬಾರಿ ಸಂಸದರಾಗಿದ್ದ ಸಿಂಧಿಯಾ ಅವರಿಗೆ ಈಗ ಬಿಜೆಪಿ ಏನು ಹುದ್ದೆ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಸಿಂಧಿಯಾ ಅವರನ್ನು ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ, ಮುಂದಿನ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಲಿದ್ದಾರೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.
ಮಧ್ಯಪ್ರದೇಶ; ಬಿಜೆಪಿ ಸೇರಲಿರುವ ಜ್ಯೋತಿರಾಧಿತ್ಯಾ ಸಿಂಧಿಯಾ
ಮಾರ್ಚ್ 26 ರಂದು ಮಧ್ಯಪ್ರದೇಶದಿಂದ ರಾಜ್ಯಸಭಾದ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
9 ಜನರಿಗೆ ಬಿಜೆಪಿ ಟಿಕೆಟ್
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಬುಧವಾರ ವಿವಿಧ ರಾಜ್ಯಗಳಲ್ಲಿನ ರಾಜ್ಯಸಭಾ ಚುನಾವಣೆಗೆ 9 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯಾ ಸಿಂಧಿಯಾ, ಅಸ್ಸಾಂ ಭುವನೇಶ್ವರ ಕಾಳಿತಾ, ಬಿಹಾರ್ ವಿವೇಕ ಠಾಕೂರ್, ಗುಜರಾತ್ ಅಭಯ್ ಭಾರದ್ವಾಜ್, ಝಾರ್ಖಂಡ್ ದೀಪಕ್ ಪ್ರಕಾಶ್, ಮಣಿಪುರ ಲಿಯಸೆಂಬಾ ಮಹಾರಂಜ್, ಮಹಾರಾಷ್ಟ್ರ ಉದಯನ್ ಭೋಸ್ಲೆ, ರಾಜಸ್ತಾನಕ್ಕೆ ರಾಜೇಂದ್ರ ಗೇಹ್ಲೋಟ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಶಾಸಕರರ ಕರೆ ತರಲು ಯತ್ನ
ಇತ್ತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 22 ಕಾಂಗ್ರೆಸ್ ಶಾಸಕರನ್ನು ಕರೆತರಲು ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಆದರೆ, ವಿಶ್ವಾಸಮತ ಸಾಬೀತಪಡಿಸುತ್ತೇವೆ ಎಂದು ಸಿಎಂ ಕಮಲನಾಥ್ ಹೇಳಿದ್ದಾರೆ.
ಸಿಂಧಿಯಾ ಬಣ ಸೇರಿದ್ದಾರೆ
ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್ನ 22 ಶಾಸಕರಲ್ಲಿ 19 ಶಾಸಕರ ರಾಜೀನಾಮೆ ಪತ್ರಗಳು ಸ್ಪೀಕರ್ ಪ್ರಜಾಪತಿ ಅವರ ಕೈ ಸೇರಿವೆ. ಈ ಎಲ್ಲ 22 ಕಾಂಗ್ರೆಸ್ ಶಾಸಕರು ಜ್ಯೋತಿರಾಧಿತ್ಯಾ ಸಿಂಧಿಯಾ ಅವರ ಬಣ ಸೇರಿದ್ದಾರೆ. ಇದರಿಂದ ಕಮಲನಾಥ್ ನೇತೃತ್ವದ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ.
ವಿಧಾನಸಭೆ ಬಲಾಬಲ 206 ಕ್ಕೆ
ಮದ್ಯಪ್ರದೇಶದಲ್ಲಿ ಕಾಂಗ್ರೆಸ್ ಇತರ ಪಕ್ಷೇತರ ಶಾಸಕರನ್ನು ನಂಬಿ ಸರ್ಕಾರ ರಚಿಸಿದೆ. 230 ಬಲದ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 109, ಕಾಂಗ್ರೆಸ್ 114 ಹಾಗೂ ಇತರರು 7 ಜನ ಸ್ಥಾನ ಪಡೆದಿದ್ದರು. ಬಹುಮತಕ್ಕೆ 116 ಸ್ಥಾನಗಳ ಅಗತ್ಯತೆ ಇದೆ. ಆದರೆ, ಈಗ 22 ಶಾಸಕರ ರಾಜೀನಾಮೆಯಿಂದ ವಿಧಾನಸಭೆ ಬಲಾಬಲ 206 ಕ್ಕೆ ಕುಸಿದಿದ್ದು, ಕಾಂಗ್ರೆಸ್ನ 96 ಅಲ್ಪಮತಕ್ಕೆ ಕುಸಿದಿದೆ.