ಮದ್ಯದಂಗಡಿ ಮೇಲೆ ಸಗಣಿ ಎಸೆದು ಬಿಜೆಪಿ ನಾಯಕಿ ಉಮಾ ಭಾರತಿ ಪ್ರತಿಭಟನೆ
ಭೋಪಾಲ್, ಜೂನ್ 15: ಬಿಜೆಪಿಯ ಹಿರಿಯ ನಾಯಕಿ, ಮಾಜಿ ಮುಖ್ಯಮಂತ್ರಿ ಉಮಾಭಾರತಿ ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಓರ್ಚಾ ಪಟ್ಟಣದ ಮದ್ಯದ ಅಂಗಡಿಯೊಂದಕ್ಕೆ ಹಸುವಿನ ಸಗಣಿ ಎಸೆದಿದ್ದಾರೆ, ತಮ್ಮದೇ ಪಕ್ಷ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಿಂದ 330 ಕಿ. ಮೀ. ದೂರದಲ್ಲಿರುವ ರಾಮರಾಜ ಮಂದಿರಕ್ಕೆ ಪ್ರಸಿದ್ಧವಾಗಿರುವ ಧಾರ್ಮಿಕ ಪಟ್ಟಣವಾದ ಓರ್ಚಾದಲ್ಲಿ ಮಂಗಳವಾರ ಸಂಜೆ ಉಮಾಭಾರತಿ ಮದ್ಯದಂಗಡಿಗೆ ಹಸುವಿನ ಸಗಣಿ ಎಸೆದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಡುಕರು ಖುಷಿಪಡೋ ಸುದ್ದಿ: ಬುಕ್ ಮಾಡಿದರೆ 10 ನಿಮಿಷದಲ್ಲೇ ಮನೆ ಬಾಗಿಲಿಗೆ ಮದ್ಯ!
ಘಟನೆಯ ನಂತರ ಉಮಾಭಾರತಿ ಟ್ವೀಟ್ನಲ್ಲಿ ಅಂಗಡಿ ಇರುವ ಸ್ಥಳದಲ್ಲಿ ಅಂಗಡಿಯನ್ನು ತೆರೆಯಲು ಅನುಮತಿ ನೀಡಿಲ್ಲ ಮತ್ತು ಪವಿತ್ರ ಪಟ್ಟಣವಾದ ಓರ್ಚಾದಲ್ಲಿ ಅಂತಹ ಮದ್ಯದಂಗಡಿ ತೆರೆಯುವುದು ಅಪರಾಧ ಎಂದು ಹೇಳಿದ್ದಾರೆ. ಆದರೆ, ಉಮಾ ಭಾರತಿ ಆರೋಪಕ್ಕೆ ಉತ್ತರ ನೀಡಿರುವ ಪೊಲೀಸರು ಮದ್ಯದಂಗಡಿ ಮಂಜೂರಾದ ಸ್ಥಳದಲ್ಲಿಯೇ ಇದೆ ಎಂದು ತಿಳಿಸಿದ್ದಾರೆ.
ಮದ್ಯಪ್ರಿಯರಿಗೆ ಮೋಜಿನ ಸುದ್ದಿ; ಕಡಿಮೆ ರೇಟಲ್ಲಿ ಎಣ್ಣೆ ಬೇಕಾ, ಈ ರಾಜ್ಯಕ್ಕೆ ಬನ್ನಿ!
ವಿಡಿಯೋದಲ್ಲಿ ಉಮಾಭಾರತಿ ವಿಡಿಯೋ ಚಿತ್ರೀಕರಣ ಮಾಡುವ ವ್ಯಕ್ತಿಗೆ "ನೋಡಿ, ನಾನು ದನದ ಸಗಣಿ ಎಸೆದಿದ್ದೇನೆ ಮತ್ತು ಕಲ್ಲು ಎಸೆದಿಲ್ಲ" ಎಂದು ಹೇಳುವುದನ್ನು ಕೇಳಬಹುದಾಗಿದೆ. 2022ರ ಮಾರ್ಚ್ನಲ್ಲಿ ಉಮಾ ಭಾರತಿ ಭೋಪಾಲ್ನ ಮದ್ಯದ ಅಂಗಡಿಯೊಂದಕ್ಕೆ ಕಲ್ಲು ತೂರಿದ್ದರು.
|
ಅಕ್ರಮವಾಗಿ ಅಂಗಡಿ ಸ್ಥಾಪಿಸಲಾಗಿದೆ ಎಂದು ಆರೋಪ
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಉಮಾಭಾರತಿ, "ಓರ್ಚಾದ ಮುಖ್ಯ ದ್ವಾರದಲ್ಲಿರುವ ಅಂಗಡಿಯನ್ನು ಅದರ ಪ್ರಸ್ತುತ ಸ್ಥಳಕ್ಕೆ ಅನುಮತಿ ನೀಡಿಲ್ಲ. ಈಗಿರುವ ಸ್ಥಳದಿಂದ ದೂರದಲ್ಲಿರುವ ಹಳ್ಳಿಯಲ್ಲಿ ತೆರೆಯಲು ಅನುಮತಿ ನೀಡಲಾಗಿದೆ, ಆದರೆ ಅಕ್ರಮವಾಗಿ ಇಲ್ಲಿ ಅಂಗಡಿ ತೆರೆಯಲಾಗಿದೆ. ಜನರು ಮತ್ತು ನಮ್ಮ ಸಂಘಟನೆಯ ಸದಸ್ಯರು ಇದರ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತೇವೆ" ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಜನರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ ಮತ್ತು ಈ ಅಂಗಡಿಯನ್ನು ಬೇರೆಡೆ ಸ್ಥಳಾಂತರಿಸುವಂತೆ ಸ್ಥಳೀಯ ಆಡಳಿತಕ್ಕೆ ಪದೇ ಪದೇ ಮನವಿ ಮಾಡಿದ್ದಾರೆ. ಪವಿತ್ರ ನಗರ ಎನಿಸಿಕೊಳ್ಳುವ ಓರ್ಚಾದಲ್ಲಿ ಮದ್ಯದಂಗಡಿ ಇರಬಾರದು, ಇದು ದೊಡ್ಡ ಕಳಂಕ ಎಂದು ಹೇಳಿದ್ದಾರೆ.
ರಾಮನವಮಿಯಂದೂ ಮದ್ಯ ಮಾರಾಟ
"ಎಲ್ಲಾ ರೀತಿಯಿಂದಲೂ, ಈ ಅಂಗಡಿಯ ವಿರುದ್ಧ ಜನರು ಪ್ರತಿಭಟನೆ ಮಾಡುವುದನ್ನು, ದಾಳಿ ಮಾಡುವುದನ್ನು ಅಪರಾಧ ಎಂದು ಕರೆಯಲಾಗುವುದಿಲ್ಲ, ಏಕೆಂದರೆ ಧಾರ್ಮಿಕ ಸ್ಥಳದಲ್ಲಿ ಮದ್ಯದ ಅಂಗಡಿ ತೆರೆಯುವುದು ದೊಡ್ಡ ಅಪರಾಧ" ಎಂದು ಅವರು ಹೇಳಿದರು.
ಓರ್ಚಾದಲ್ಲಿ ಆಯೋಜಿಸಲಾದ 'ದೀಪೋತ್ಸವ' ಕಾರ್ಯಕ್ರಮದ ಅಡಿಯಲ್ಲಿ ರಾಮ ನವಮಿಯಂದು (ಈ ವರ್ಷದ ಏಪ್ರಿಲ್ನಲ್ಲಿ) ಐದು ಲಕ್ಷ ದೀಪಗಳನ್ನು ಬೆಳಗಿಸಿದ ಈಸಂದರ್ಭದಲ್ಲಿ ಈ ಮದ್ಯದಂಗಡಿ ತೆರೆದಿತ್ತು ಎಂಬ ಮಾಹಿತಿ ನನಗೆ ಸಿಕ್ಕಿತು ಎಂದು ಉಮಾಭಾರತಿ ಹೇಳಿದ್ದಾರೆ. ಓರ್ಚಾವನ್ನು ಅಯೋಧ್ಯೆಯಂತೆಯೇ ಪವಿತ್ರವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಹಸುವಿನ ಸಗಣಿ ಎಸೆದು ಆಕ್ರೋಶ
"ಅದಕ್ಕಾಗಿಯೇ ನಾನು ಪವಿತ್ರ ಗೋಶಾಲೆಯಿಂದ ಸ್ವಲ್ಪ ಹಸುವಿನ ಸಗಣಿಯನ್ನು ಮದ್ಯದ ಅಂಗಡಿಯ ಮೇಲೆ ಎರಚಿದೆ" ಎಂದು ಅವರು ಹೇಳಿದರು. ಸಂಘಟನೆಗಳ ಪ್ರತಿಭಟನೆಯ ನಡುವೆಯೂ ಅಂಗಡಿ ತೆರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಉಮಾಭಾರತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್ನಲ್ಲಿ ಉಮಾಭಾರತಿ ಅವರು ಭೋಪಾಲ್ನ ಆಜಾದ್ ನಗರ ಪ್ರದೇಶದ ಮದ್ಯದಂಗಡಿಗೆ ನುಗ್ಗಿ ಅಲ್ಲಿನ ಕಪಾಟಿನಲ್ಲಿಟ್ಟಿದ್ದ ಮದ್ಯದ ಬಾಟಲಿಗಳ ಮೇಲೆ ಕಲ್ಲು ಎಸೆದಿದ್ದರು.
ಮದ್ಯದಂಗಡಿ ಕಾನೂನು ಬದ್ದವಾಗಿದೆ ಎಂದ ಪೊಲೀಸರು
ಇತನ್ಮಧ್ಯೆ, ಓರ್ಚಾ ಪೊಲೀಸ್ ಠಾಣೆ ಪ್ರಭಾರಿ ಅಭಯ್ ಸಿಂಗ್, ಮದ್ಯದಂಗಡಿ ಪರವಾನಗಿ ಪಡೆದ ಸ್ಥಳದಲ್ಲಿದೆ. ಹಸುವಿನ ಸಗಣಿ ಎರಚಿದ ನಂತರ ಮದ್ಯದಂಗಡಿ ಗುತ್ತಿಗೆದಾರರು ಅಂಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿದರು ಎಂದು ಮಾಹಿತಿ ನೀಡಿದ್ದಾರೆ.
2022ರ ಹಣಕಾಸು ವರ್ಷದಲ್ಲಿ, ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ತನ್ನ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಹೋಮ್ ಬಾರ್ಗಳನ್ನು ಸ್ಥಾಪಿಸಲು ಅನುಮತಿ ನೀಡಿದೆ ಮತ್ತು ಮದ್ಯದ ಚಿಲ್ಲರೆ ಬೆಲೆಯನ್ನು ಶೇಕಡಾ 20 ರಷ್ಟು ಕಡಿಮೆ ಮಾಡಿದೆ.