ಪ್ರಾಣ ಒತ್ತೆಯಿಟ್ಟು ಹೋರಾಡುವ ಸೈನಿಕರಿಗಾಗಿ 'ಯೋಧ ನಮನ' ಸಿಡಿ
ಪ್ರಾಣ ಒತ್ತೆಯಿಟ್ಟು ದೇಶದ ಜನರನ್ನು ಕಾಪಾಡುವ ಭಾರತೀಯ ಯೋಧರಿಗೆ ನಮನ ಸಲ್ಲಿಸಲೆಂದು 'ಯೋಧ ನಮನ' ಎಂಬ ವಿಶೇಷ ಆಲ್ಬಮ್ ಅನ್ನು ಜನವರಿ 19, 2019 ಶನಿವಾರದಂದು, ಬೆಂಗಳೂರಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಸಾಧನಕೇರಿ ಪ್ರತಿಷ್ಠಾನ ಹೊರತರುತ್ತಿದೆ.
ಈ ಆಲ್ಬಮ್'ನಲ್ಲಿ ಮೂಡಿಬಂದಿರುವ ಒಂಬತ್ತು ಹಾಡುಗಳ ಹಿಂದೆ ಹಲವಾರು ಪ್ರತಿಷ್ಠಿತ ಹಾಡುಗಾರರ ತಂಡವೇ ಇದೆ. ಅವರುಗಳು ರತ್ನಮಾಲಾ ಪ್ರಕಾಶ್, ಗುರುರಾಜ ಹೊಸಕೋಟೆ, ಜೋಗಿ ಸುನೀತಾ, ಸುಪ್ರಿಯಾ ರಘುನಂದನ್, ಪ್ರಧನ್ಯ ಮರತೇ, ಸುಮೇಧ ವಡ್ಲಪುಡಿ, ಸೋಮಶೇಖರ ಮತ್ತು ರಾಮ ಪ್ರಸಾದ್.
ಸಿಡಿ ಮಾರಾಟದಿಂದ ಬರುವ ಎಲ್ಲ ಹಣವನ್ನು ದೇಶಕ್ಕಾಗಿ ಮಡಿದ ಯೋಧರ ಪತ್ನಿಯರಿಗೆ ಸಹಾಯಾರ್ಥವಾಗ ದಾನ ಮಾಡಲಾಗುವುದು.

ಹಾಡುಗಳ ಬಗ್ಗೆ ಪರಿಚಯ ನೀಡಿರುವವರು ಮಾಲತಿ ಶರ್ಮ.
ರಚನಕಾರರು : ವತ್ಸಲಾ ಸುರೇಶ, ಡಾ|ಶಿವಕುಮಾರ ಮಲಿಪಾಟೀಲ, ಕೃಷ್ಣಪ್ರಸಾದ್, ಶಿವಾನಂದ ಬಡಿಗೇರ, ಪ್ರಸಾದ್ ನಾಯ್ಕ್ ಮತ್ತು ಪಾಲಾಕ್ಷ.
ಸಂಗೀತ ನಿರ್ದೇಶನ : ರಾಮ್ ಪ್ರಸಾದ್
ಹಾಡುಗಳ ಬಗೆಗೆ ನನ್ನ ಅನಿಸಿಕೆಗಳು ಹೀಗಿವೆ:
01. ಹೋಗಿ ಬಾ ಗೆಳೆಯ ಮತ್ತೆ ಹುಟ್ಟಿ ಬಾ - ಶುಭ ವಿದಾಯ ಹೇಳುವ ಈ ಹಾಡು ಕೇಳುಗರ ಹೃದಯ ಭಾರವಾಗಿಸುತ್ತದೆ. ಇಂದು ನಾವು ಸುಖ ಸಂತೋಷದಿಂದ ಹೊಸವರ್ಷಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ, ಇತರೆ ಹಬ್ಬಗಳನ್ನು ಆಚರಿಸುತ್ತಿದ್ದೇವೆ ಎಂದರೆ ಸೈನಿಕರು ಪ್ರಾಣ ಒತ್ತೆಯಿಟ್ಟು ಕಾಪಾಡುತ್ತಿರುವುದೇ ಕಾರಣ ಎನ್ನಬಹುದು. ಇವರುಗಳು ಸೇವೆ ಇಂದಿಗೂ, ಎಂದಿಗೂ ಚಿರಸ್ಮರಣೀಯ.
02. ಹೊಸತೊಂದು ಹುಟ್ಟು ಮತ್ತೆ ಸಿಗಲಿ - ಹಿಮರಾಶಿಯಾಗಲಿ, ಮರುಭೂಮಿಯಾಗಲಿ, ಸಾಗರದ ಮೇಲಾಗಲಿ ಅಥವಾ ಅಡಿಯಲ್ಲಾಗಲಿ ಇವರ ಸೇವೆ ಅನನ್ಯ. ಭಾಷೆಯಾಗಲಿ, ವೇಷವಾಗಲಿ ಇವರ ಸೇವೆಗೆ ಅಡ್ಡಿಯಾಗಿಲ್ಲ, ಆಗುವುದೂ ಇಲ್ಲ.

03. ಮರಳಿ ನನ್ನ ಗೂಡಿಗೆ - ತಾ ಹುಟ್ಟಿ ಬೆಳೆದ ಊರಿನ ಮತ್ತು ಜನರ ಪರಿಚಯವನ್ನು ಗೆಳೆಯೆಯನಿಗೆ ಪರಿಚಯ ಮಾಡಿಕೊಡುತ್ತಾ, ಊರಿಗೆ ಹೋಗಿ ಬರೋಣಾ ಬಾ ಗೆಳೆಯ ಎಂದು ಹೇಳುವಾಗ 'ಭಾಗ್ಯದ ಬಳೆಗಾರ' ನೆನಪಾಗದೆ ಇರಲಾರದು.
04. ಸರಹದ್ದಿನಲ್ಲಿ ಸಮರದ ಕಹಳೆ - ದುಃಸ್ವಪ್ನ ಕಂಡ ತಾಯಿಯ ಕರೆಯ ಈ ಹಾಡು, ಅಂತ:ಕರಣ ಕಲಕುತ್ತದೆ. ಕಾಯುವಿಕೆಯ ಕಷ್ಟದ ಅರಿವು ಮಾಡಿಸುತ್ತದೆ. ಮಗುವಾಗಿ ಮತ್ತೊಮ್ಮೆ ಬಂದುಬಿಡು ಎಂಬ ಕೋರಿಕೆಯನ್ನು ನಯವಾಗಿ ನಿರಾಕರಿಸುವ ಮಗ, ಸೈನಿಕ ಧರ್ಮವನ್ನು ಹೇಗೆ ಪಾಲಿಸುತ್ತಾನೆ ಎಂಬುದನ್ನು ತೋರಿಸುತ್ತದೆ.
05. ಹೇಗೋ ಕಳಿಸಲಿ ಪೆಟ್ಟಿಗೆಯಲ್ಲಿ - ಯುದ್ಧಭೂಮಿಯಲ್ಲಿರುವ ಮಗನೋ, ಸಹೋದರನೋ, ಗಂಡನೋ ವಾಪಸ್ ಬರುವರೆಂಬ ನಿರೀಕ್ಷೆಯಲ್ಲಿರುವ ಮನೆಯ ಮಂದಿಗೆ ಹೇಗೆ ಪೆಟ್ಟಿಗೆಯಲ್ಲಿ ಹೆಣವನ್ನು ಕಳಿಸುವುದು ಎಂಬ ಜಿಜ್ಞಾಸೆಯನ್ನು ಸೊಗಸಾಗಿ ಹೇಳಲಾಗಿದೆ.

06. ನಮಿಸಿದೆ ಹಿಂದೂಸ್ತಾನ - ಯೋಧರಿಗೆ ಜಾತಿ ಮತದ ಭೇದವಿಲ್ಲದೆ ನಮಿಸುವ ಈ ಹಾಡು ಕೂಡ ಅಷ್ಟೇ ಸೊಗಸಾಗಿ ಮೂಡಿದೆ.
07. ಭೂಮಿಗೆ ಬಿತ್ತಿದ ಬೀಜ ಬೆಳೆಯಾಗತೈತಿಲ್ಲೋ ಗೊತ್ತಿಲ್ಲ, ಗಡಿ ಕಾಯೋ ಮಗ ತಿರುಗಿ ಬರ್ತಾನಿಲ್ಲೋ ಗೊತ್ತಿಲ್ಲ - ಈ ಹಾಡಿನ ಬಗ್ಗೆ ಇನ್ನೇನು ಹೇಳೋದಿದೆ . . ಭೂಮಿಯನುಳುವ ರೈತ ಭೂಮಿಯ ಕಾಯ್ವ ಯೋಧನ ಬಗ್ಗೆ ಆಡೋ ಮಾತು ಯೋಧನ ಸೇವೆಯನ್ನು ಎತ್ತಿಹಿಡಿದೆ.
08. ಹೇಗಿರಲಿ ನಾ ನೋಡದೆ ನಿನ್ನ - ಯುದ್ಧಭೂಮಿಯಲ್ಲಿರೋ ಗಂಡನ ಬಗ್ಗೆ ಹಾಡುತ್ತಿರುವ ಹೆಂಡತಿಯ ಬವಣೆಯ ಚಿತ್ರಣ ನೀಡಿದೆ.
09. ಗಡಿಯಲ್ಲಿರುವ ಯೋಧರು ಗುಡಿಗುಡಿಗಳ ದೇವರು - ಯೋಧರನ್ನು ಯಾವ ಸ್ಥಾನದಲ್ಲಿಟ್ಟು ಪೂಜಿಸಬೇಕು ಎಂಬುದರ ಸಾಂಕೇತಿಕ ಹಾಡಿದು.

ಆಲ್ಬಮ್ ಅನ್ನು ಜನತೆಗೆ ಬಿಡುಗಡೆ ಮಾಡಿ, ಸಿಡಿಯ ಮಾರಾಟದಿಂದ ಬಂದ ಹಣವನ್ನು ಸಂಪೂರ್ಣವಾಗಿ, ದೇಶಕ್ಕಾಗಿ ದುಡಿದು ಪ್ರಾಣ ಅರ್ಪಿಸಿದ ಯೋಧರ ಪತ್ನಿಯರ ಅನುಕೂಲ ಒದಗಿಸುವ ಕಾರ್ಯಗಳಿಗೆ ವಿನಿಯೋಗಿಸಲಾಗುವುದು.
ಇಂಥಾ ಒಂದು ಉತ್ತಮ ಕಾರ್ಯಕ್ಕೆ ಕೈಹಚ್ಚಿರುವ ಇಡೀ 'ಯೋಧ ನಮನ' ತಂಡಕ್ಕೆ ಶುಭ ಹಾರೈಸುತ್ತ, ನಿಮ್ಮ ಕೈಲಾದಷ್ಟೂ ಸಹಾಯ ಮಾಡಿ ಎಂದೂ ಈ ಬರಹದ ಮೂಲಕ ಕೇಳಿಕೊಳ್ಳುತ್ತೇನೆ.












Click it and Unblock the Notifications