ಯಡಿಯೂರಪ್ಪ ಶ್ರೀರಾಮಚಂದ್ರ ಇದ್ದಂತೆ, ಕೊಟ್ಟ ಮಾತಿಗೆ ತಪ್ಪುವವರಲ್ಲ: ನಿಡುಮಾಮಿಡಿ ಸ್ವಾಮೀಜಿ
ಬೆಂಗಳೂರು, ಜನವರಿ 29: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪುವವರಲ್ಲ. ಅವರು ಶ್ರೀರಾಮಚಂದ್ರನಿದ್ದಂತೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕೊಂಡಾಡಿದರು.
ನಗರದ ಬಸವನಗುಡಿ ಸಮೀಪದ ನಿಡುಮಾಮಿಡಿ ಮಠದಲ್ಲಿ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.
'ವೀರಶೈವ ಸಮಾಜ ಹೆಚ್ಚು ಹಚ್ಚಿಕೊಂಡ ಸಿಎಂ ಯಾರು'?
'ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿಯೊಬ್ಬರು ಕೊಟ್ಟ ಮಾತಿಗೆ ತಪ್ಪಿದವರು ಎಂಬ ಕಪ್ಪುಚುಕ್ಕೆ ಅಂಟಿಕೊಂಡಿದೆ. ಅವರ ಸಾಲಿಗೆ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸೇರಿಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಅಧಿಕಾರ ನಡೆಸಲು ಕೇಂದ್ರ ಮತ್ತು ರಾಜ್ಯಮಟ್ಟದ ನಾಯಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಎಲ್ಲರಿಗೂ ಸಚಿವ ಸ್ಥಾನ ಸಿಗುವುದಿಲ್ಲ
ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಹಲವು ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರ ಹಂಚಿಕೆ ಎನ್ನುವುದು ಕಷ್ಟದ ಕೆಲಸ. ಶಾಸಕರಾಗಿ ಗೆದ್ದ ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತದೆ. ಆದರೆ ಸಂಪುಟದಲ್ಲಿ ಎಲ್ಲ ಆಕಾಂಕ್ಷಿಗಳಿಗೂ ಅವಕಾಶ ನೀಡುವುದು ಕಷ್ಟವಾಗುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ ಸಚಿವ ಸ್ಥಾನಗಳನ್ನು ಎರಡು ಹಂತದಲ್ಲಿ ಹಂಚಿಕೆ ಮಾಡಲು ಅವಕಾಶವಿದೆ. ಶಾಸಕರು ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಪರ ಬ್ಯಾಟ್ ಬೀಸಿದರು.
ಯಡಿಯೂರಪ್ಪರಂತ ನಾಯಕ ಇಲ್ಲ
ರಾಜ್ಯದಲ್ಲಿ ವೀರಶೈವ, ಲಿಂಗಾಯತ ಸಮುದಾಯದ ಅನೇಕ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಆದರೆ ಆ ಸಮುದಾಯವು ತಮ್ಮ ರಾಜಕೀಯ ನಾಯಕನೆಂದು ಒಪ್ಪಿಕೊಂಡಿದ್ದು ಯಡಿಯೂರಪ್ಪ ಅವರನ್ನ ಮಾತ್ರ. ಎಲ್ಲ ಸಮುದಾಯಗಳ ಏಳಿಗೆಗಾಗಿ ಯಡಿಯೂರಪ್ಪ ಅವರಂತೆ ದುಡಿಯುವ ಮತ್ತೊಬ್ಬ ನಾಯಕರು ಇಲ್ಲ ಎಂದರು.
ಪಂಚಮಸಾಲಿ ಸ್ವಾಮೀಜಿ ವಿರುದ್ಧ ಕನಲಿದ ಬಿಎಸ್ವೈ: ರಾಜೀನಾಮೆ ಕೊಡುವ ಮಾತು
ಆರ್. ಅಶೋಕ್ ಸಿಎಂ ಆಗುತ್ತಾರೆ
ಕಂದಾಯ ಸಚಿವ ಆರ್, ಅಶೋಕ್ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ನಿಡುಮಾಮಿಡಿ ಸ್ವಾಮೀಜಿ ಭವಿಷ್ಯ ನುಡಿದರು. ಅಶೋಕ್ ಅವರು ಜನರ ಜತೆ ಇರುವವರು. ಹೀಗಾಗಿ ಇಂದಲ್ಲ ನಾಳೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿದೆ. ವಿ. ಸೋಮಣ್ಣ ಅವರಿಗೂ ಆ ದೇವರು ಅನುಗ್ರಹ ನೀಡಲಿ ಎಂದು ಅವರು ಹಾರೈಸಿದರು.
ಮಠಕ್ಕೆ ಮೂರು ಕೋಟಿ ರೂ ಅನುದಾನ
ನಿಡುಮಾಮಿಡಿ ಮಠಕ್ಕೆ ಮೂರು ಕೋಟಿ ರೂ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಘೋಷಿಸಿದರು. ನಿಡುಮಾಮಿಡಿ ಮಠದ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ 3 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗುವುದು. 2018ರಲ್ಲಿ ಸರ್ಕಾರ ಮಠಕ್ಕೆ ನೀಡಿರುವ ಎರಡು ಎಕರೆ ಜಮೀನು ಹಸ್ತಾಂತರಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಲು ಕಂದಾಯ ಸಚಿವರ ಜತೆ ಚರ್ಚಿಸಿದ್ದೇನೆ. ಮಠದ ಶಿಕ್ಷಣ ಸಂಸ್ಥೆಗಳಿಗೆ ಮುಂದೆ ಕೂಡ ಸಹಕಾರ ನೀಡಲಾಗುವುದು ಎಂದು ಹೇಳಿದರು.