ರಾಗಿಗೆ ಜಾಗತಿಕ ಮನ್ನಣೆ: ಸಂತಸಗೊಂಡ ಯಡಿಯೂರಪ್ಪ
ಬೆಂಗಳೂರು, ಮೇ 15: ಆರ್ಥಿಕ ಪ್ಯಾಕೇಜ್ ಮೂರನೇ ಹಂತದ ವಿವರಣೆಯನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದರು. ಕೃಷಿಯ ಬಗ್ಗೆಯ ಕೇಂದ್ರ ಸರ್ಕಾರದ ಈ ಹೊಸ ಯೋಜನೆಗಳ ಬಗ್ಗೆ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
''ಎಪಿಎಂಸಿ ಕಾಯ್ದೆ ತಿದ್ದುಪಡಿ ತರುವ ಕೇಂದ್ರ ಕ್ರಮದಿಂದ ಹೆಚ್ಚಿನ ರೈತರಿಗೆ ಲಾಭವಾಗಲಿದೆ. ರೈತರು ತಮ್ಮ ಉತ್ಪಾದನೆಗಳಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಇಟ್ಟ ನಡೆಗೆ ಕೇಂದ್ರ ಬೆಂಬಲ ಸೂಚಿಸಿದಂತಾಗಿದ್ದು, ರೈತಪರ ನೀತಿಗೆ ಮುದ್ರೆ ಒತ್ತಿದಂತಾಗಿದೆ.'' ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೃಷಿ ವಲಯಕ್ಕೆ ಸಂಬಂಧಪಟ್ಟ ಕಾನೂನುಗಳನ್ನು ಸರಳೀಕರಣಗೊಳಿಸಲು ಕೇಂದ್ರ ಉದ್ದೇಶಿಸಿದ್ದು, ಇದರಿಂದ ಶೇಕಡ 85 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚಿನ ಲಾಭವಾಗಲಿದೆ.'' ಎಂದಿದ್ದಾರೆ.

''ಕೃಷಿ ವಲಯದಲ್ಲಿ ರಾಗಿಗೆ ಗ್ಲೋಬಲ್ ಬ್ರಾಂಡಿಂಗ್ ದೊರಕಿಸಿಕೊಡಲು ನಿರ್ಧರಿಸಿರುವುದರಿಂದ ರಾಜ್ಯದಲ್ಲಿ ರಾಗಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ರಾಗಿ ಹಾಗೂ ಮತ್ತಿತರ ಬೆಳೆಗಳ ಬಗ್ಗೆ ಕೇಂದ್ರ ತೆಗೆದುಕೊಂಡ ಕ್ರಮದಿಂದ ಸಾವಯವ ಕೃಷಿ ಮತ್ತು ದೇಶೀಯ ಬೆಳೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ'' ಎಂದು ಅವರು ಹೇಳಿದ್ದಾರೆ.
''ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡುವ ಸಲುವಾಗಿ ಒಂದು ಲಕ್ಷ ಕೋಟಿ ರೂ. ಒದಗಿಸಿದ್ದು, ಇದರಿಂದ ರೈತರಿಗೆ ಅದರಲ್ಲಿಯೂ ತೋಟಗಾರಿಕ ಬೆಳೆಗಳನ್ನು ಬೆಳೆಯುವ ರೈತರಿಗೆ ಹೆಚ್ಚಿನ ಲಾಭವಾಗಲಿದೆ.''' ಎಂದಿರುವ ಯಡಿಯೂರಪ್ಪ ಕೇಂದ್ರ ಸರ್ಕಾರದ ಕೃಷಿ ಯೋಜನೆಗಳನ್ನು ಸಂತಸದಿಂದ ಸ್ವಾಗತ ಮಾಡಿದ್ದಾರೆ.












Click it and Unblock the Notifications