ಮೋದಿ ಎಚ್ಚರಿಕೆ ನೀಡಿದ್ದರಿಂದಲೇ ಅಭಿನಂದನ್ ಬಿಡುಗಡೆ : ಯಡಿಯೂರಪ್ಪ
ಬೆಂಗಳೂರು, ಮಾರ್ಚ್ 02 : ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ಪಾಕಿಸ್ತಾನಕ್ಕೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎಚ್ಚರಿಕೆ ಕೊಟ್ಟ ನಂತರವೇ ಬಿಡುಗಡೆ ಮಾಡಿದ್ದು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ವಿಶ್ವದ ಎಲ್ಲೆಡೆಯಿಂದ ಒತ್ತಡ ಬರುತ್ತಿತ್ತು, ಯುದ್ಧಕೈದಿಯಲ್ಲದಿದ್ದರೂ ಅವರನ್ನು ಬಂಧಿಸಿ ಪಾಕಿಸ್ತಾನ ಜಿನೀವಾ ಒಪ್ಪಂದವನ್ನು ಉಲ್ಲಂಘನೆ ಮಾಡಿತ್ತು. ಅಲ್ಲದೆ, ಭಾರತ ದಾಳಿ ಮಾಡಿದ್ದು ಉಗ್ರರ ಮೇಲೆಯೇ ಹೊರತು ಪಾಕ್ ಸೈನಿಕರ ಮೇಲಲ್ಲ. ಈ ಹಲವಾರು ಕಾರಣಗಳಿಂದ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಲೇಬೇಕಿತ್ತಾದರೂ, ಬಿಡುಗಡೆಗೆ ಹಿಂದೆ ಮುಂದೆ ನೋಡುತ್ತಿತ್ತು.
ಆಗ, ಅಭಿನಂದನ್ ಅವರನ್ನು ಕೂಡಲೆ ಬಿಡುಗಡೆ ಮಾಡದಿದ್ದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ನಂತರವೇ, ಅವರು ಭಾರತೀಯ ವಾಯು ಸೇನೆಯ ಪೈಲಟ್ ನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು ಎಂದು ಯಡಿಯೂರಪ್ಪನವರು ಪಕ್ಷದ ಸಭೆಯೊಂದರಲ್ಲಿ ಹೇಳಿದ್ದಾರೆ.

ಅಭಿನಂದನ್ ಅವರನ್ನು ನಿಜಕ್ಕೂ ಮೆಚ್ಚಬೇಕು. ಅವರ ಪ್ಯಾರಾಶೂಟ್ ಪಾಕಿಸ್ತಾನದಲ್ಲಿ ಇಳಿದ ನಂತರ, ಕೆಲ ಪ್ರಮುಖ ದಾಖಲೆಗಳು ಪಾಕಿಸ್ತಾನದ ಸೈನಿಕರಿಗೆ ದೊರೆಯದಂತೆ ಅವರು ಅವರನ್ನು ನುಂಗಿದ್ದು ಶ್ಲಾಘನೀಯ. ಇದು ಭಾರತೀಯ ಮತ್ತು ಪೈಲಟ್ ನ ದೇಶಭಕ್ತಿಯ ಸಂಕೇತ. ಒಬ್ಬ ದೇಶಭಕ್ತ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅವರು ಇಡೀ ದೇಶಕ್ಕೆ ತೋರಿಸಿದ್ದಾರೆ ಎಂದು ಯಡಿಯೂರಪ್ಪನವರು ಮುಕ್ತಕಂಠದಿಂದ ಹೊಗಳಿದ್ದಾರೆ.
ನರೇಂದ್ರ ಮೋದಿ ಅವರ ತಂತ್ರಗಾರಿಕೆಯಿಂದ ಇಡೀ ವಿಶ್ವದ ಮುಂದೆ ಪಾಕಿಸ್ತಾನ ಬೆತ್ತಲಾಗಿದೆ, ಅದನ್ನು ಎಲ್ಲ ರಾಷ್ಟ್ರಗಳು ದೂರವಿಟ್ಟಿವೆ. ಚೀನಾ ಕೂಡ ಪಾಕಿಸ್ತಾನವನ್ನು ಬೆಂಬಲಿಸುತ್ತಿಲ್ಲ. ಕಳೆದ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೈನಿಕರು ಪಾಕಿಸ್ತಾನದೊಳಗೆ ನುಗ್ಗಿ ನಮ್ಮ ಶಕ್ತಿಯೇನೆಂದು ತೋರಿಸಿದ್ದಾರೆ. ನಮ್ಮ ಸೇನೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನರೇಂದ್ರ ಮೋದಿಯವರು ಕೊಟ್ಟಿದ್ದರಿಂದಲೇ ಇದೆಲ್ಲ ಸಾಧ್ಯವಾಗುತ್ತಿರುವುದು ಎಂದು ಯಡಿಯೂರಪ್ಪನವರು ಮೋದಿಯನ್ನು ಪ್ರಶಂಸಿಸಿದರು.
ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತೀಯ ವಾಯು ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದೆ ತರಬೇತಿ ನೆಲೆಗಳನ್ನು ಧ್ವಂಸಗೊಳಿಸಿದ್ದಾರೆ. ನೂರಾರು ಉಗ್ರರನ್ನು ಹತ್ಯೆಗೈದಿದ್ದಾರೆ. ಅವರು ಪ್ರತಿದಾಳಿ ನಡೆಸಲು ಯತ್ನಿಸಿದರಾದರೂ ಯಶಸ್ವಿಯಾಗಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಬಗ್ಗೆ ಗೌರವ ವಿಶ್ವದಾದ್ಯಂತ ನೂರಾರು ಪಟ್ಟು ಜಾಸ್ತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕೊಂಡಾಡಿದರು.
ಇದೇ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಭಾರತದ ವಾಯು ಸೇನೆ ನಡೆಸಿದ ಏರ್ ಸ್ಟ್ರೈಕ್ ನಿಂದಾಗಿ ದೇಶದಾದ್ಯಂತ ನರೇಂದ್ರ ಮೋದಿಯವರ ಅಲೆ ಭಾರತದಲ್ಲಿ ಇನ್ನೂ ಹೆಚ್ಚಾಗಿದ್ದು, ಇದರಿಂದ ಕರ್ನಾಟಕದಲ್ಲಿ 22 ಲೋಕಸಭೆ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗುತ್ತದೆ ಎಂದು ಮಾಧ್ಯಮದವರ ಮುಂದೆ ಹೇಳಿ, ಯಡಿಯೂರಪ್ಪನವರು ವಿವಾದ ಎಬ್ಬಿಸಿದ್ದರು. ಇದು ಬಿಜೆಪಿ ಹೈಕಮಾಂಡನ್ನೂ ಮುಜುಗರಕ್ಕೆ ಈಡು ಮಾಡಿತ್ತು.












Click it and Unblock the Notifications