ವಾಟ್ಸಪ್ ಸ್ಟೇಟಸ್ ಹಾಕಿ 1 ವರ್ಷದ ಬಳಿಕ ಸಿಕ್ಕಿಬಿದ್ದ ಕಳ್ಳಿ!
ಬೆಂಗಳೂರು, ಆಗಸ್ಟ್ 05 : ಕೆಲಸ ಮಾಡುವ ಮನೆಯಲ್ಲಿ ಚಿನ್ನಕದ್ದ ಮಹಿಳೆ ಒಂದು ವರ್ಷದಿಂದ ಆರಾಮಾಗಿ ಇದ್ದಳು. ಕೆಲವು ದಿನಗಳ ಹಿಂದೆ ವಾಟ್ಸಪ್ ಸ್ಟೇಟಸ್ ಹಾಕಿ ಈಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ.
ಬೆಂಗಳೂರು ಪೊಲೀಸರು ಕವಿತಾ ಬಾಯಿ ಎಂಬುವವರನ್ನು ಬಂಧಿಸಿ 150 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಬಂಧಿಸಲು ದಾರಿ ಮಾಡಿಕೊಟ್ಟಿದ್ದು ವಾಟ್ಸಪ್ ಸ್ಟೇಟಸ್...!
ಮದ್ದೂರು: ಪಾಲೀಶ್ ನೆಪದಲ್ಲಿ ಚಿನ್ನ ದೋಚುತ್ತಿದ್ದರ ಸೆರೆ
ಪ್ರಕರಣದ ವಿವರ : ಕವಿತಾ ಬಾಯಿ ಶ್ರೀರಾಂಪುರದ ಸತ್ಯನಾರಾಯಣ ರಾವ್ ಅವರ ಮನೆಯಲ್ಲಿ 15 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡಿಕೊಂಡಿದ್ದಳು. ಸತ್ಯನಾರಾಯಣ ರಾವ್ ಅವರು ಪತ್ನಿಯ ಜೊತೆ ವಾಸವಾಗಿದ್ದರು.
2017ರ ಮೇ 10ರಂದು ಸತ್ಯನಾರಾಯಣ ರಾವ್ ಅವರ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕವಿತಾ ಬಾಯಿ ಆಸ್ಪತ್ರೆಯಿಂದ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಳು. ಸತ್ಯನಾರಾಯಣ ರಾವ್ ಅವರ ಮನೆಗೆ ಹೋಗಿ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ದೋಚಿದ್ದಳು.
ಮೇ 10ರಂದು ಆಕೆ ಮನೆಯ ವಾಲ್ ರೋಬ್ ಕೀಗಳನ್ನು ನಕಲು ಮಾಡಿಟ್ಟುಕೊಂಡಳು. ಮನೆಗೆ ಅಪರಿಚಿತರು ನುಗ್ಗಿದ್ದಾರೆ ಎಂದು ನಂಬಿಸಲು ಬಾಲ್ಕನಿ ಬಾಗಿಲನ್ನು ತೆರೆದಿಟ್ಟಿದ್ದಳು.
ಸತ್ಯನಾರಾಯಣ ರಾವ್ ಅವರು ಎರಡು ದಿನ ಬಿಟ್ಟು ಮನೆಗೆ ಬಂದಾಗ ಕಳ್ಳತನ ನಡೆದ ವಿಚಾರ ಬೆಳಕಿಗೆ ಬಂದಿತ್ತು. ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಕವಿತಾ ಬಾಯಿ ಕಳವು ಮಾಡಿದ್ದಾರೆ ಎಂಬ ಅನುಮಾನ ಬಂದಿರಲಿಲ್ಲ.
ಕೆಲವು ದಿನಗಳ ಬಳಿಕ ಸತ್ಯನಾರಾಯಣ ರಾವ್ ಪತ್ನಿ ತೀರಿಕೊಂಡಿದ್ದರು. ಕವಿತಾ ಬಾಯಿ ಕೆಲಸ ಬಿಟ್ಟಿದ್ದರು. ಆದರೆ, ಪೊಲೀಸರು ಕವಿತಾ ಬಾಯಿ ಚಲನವಲನದ ಮೇಲೆ ಗಮನವಿಟ್ಟಿದ್ದರು.
ಮೂರು ದಿನಗಳ ಹಿಂದೆ ಕವಿತಾ ಬಾಯಿ ಚಿನ್ನಾಭರಣಗಳನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡು ವಾಟ್ಸಪ್ ಡಿಪಿ ಹಾಕಿದ್ದರು. ವಾಟ್ಸಪ್ ಸ್ಟೇಟಸ್ಗಳಲ್ಲಿಯೂ ಚಿನ್ನಭರಣ ಹಾಕಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ.