ಗಂಡನಿಗೆ ಕೊರೊನಾ ಎಂದು ಕಥೆ ಕಟ್ಟಿ ಕಿಡ್ನಾಪ್ ಮಾಡಿಸಿದ ಹೆಂಡತಿ!
ಬೆಂಗಳೂರು, ಡಿಸೆಂಬರ್ 06: ನಿವೇಶನ ಖರೀದಿಸಲು ಕೂಡಿಟ್ಟಿದ್ದ 40 ಲಕ್ಷ ರೂಪಾಯಿ ಹಣಕ್ಕಾಗಿ ಗಂಡನಿಗೆ ಕೊರೊನಾ ಬಂದಿರುವುದಾಗಿ ಹೇಳಿ ಸಹಚರರ ಮೂಲಕ ಪತ್ನಿಯೇ ಕಿಡ್ನಾಪ್ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪತ್ನಿ ಸೇರಿ ಐವರ ಮೇಲೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತ್ಯಾಗರಾಜನಗರ ನಿವಾಸಿ ಸೋಮಶೇಖರ್ ನೀಡಿದ ದೂರಿನ ಮೇರೆಗೆ ಪತ್ನಿ ಸುಪ್ರಿಯಾ, ಲತಾ, ಗಗನ್, ಬಾಲಾಜಿ ತೇಜಸ್, ಕಿರಣ್ ಕುಮಾರ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ.
ಕೊರೊನಾ ಬಂದಿದೆ ಎಂದು ಆಂಬುಲೆನ್ಸ್ ಹತ್ತಿಸಿಕೊಂಡು ಹೋದರು
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸೋಮಶೇಖರ್ ಬೆಂಗಳೂರಿನಲ್ಲಿ ನಿವೇಶನ ಖರೀದಿಸಲು 40 ಲಕ್ಷ ಹಣ ಕೂಡಿಟ್ಟಿದ್ದರು. ಈ ಹಣ ಲಪಟಾಯಿಸಲು ಮುಂದಾದ ಪತ್ನಿ ಸುಪ್ರಿಯಾ, ಸಂಬಂಧಿಕರ ಮೂಲಕ ಅಪಹರಿಸಲು ಮುಂದಾಗಿ ಜೈಲು ಪಾಲಾಗಿದ್ದಾಳೆ. ಕಳೆದ ನ.1ರಂದು ಗಂಡನಿಗೆ ಕರೆ ಮಾಡಿ ಹೊಟ್ಟೆ ನೋವಾಗುತ್ತಿದೆ. ಮಾತ್ರೆ ತೆಗೆದುಕೊಂಡು ಬರುವಂತೆ ಪತ್ನಿ ಸುಪ್ರಿಯಾ ಹೇಳಿದ್ದಳು. ಇದರಂತೆ ಸೋಮಶೇಖರ್, ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ಖರೀದಿಸಿ ನಡೆದುಕೊಂಡು ಹೋಗುವಾಗ ಆಂಬುಲೆನ್ಸ್ ನಲ್ಲಿ ಕಾಯುತ್ತಿದ್ದ ಗಗನ್ ಸಹಚರರು, ಇವರಿಗೆ ಕೊರೊನಾ ಬಂದಿದೆ, ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಸುಳ್ಳು ಹೇಳಿ ಬಲವಂತವಾಗಿ ಗಾಡಿ ಹತ್ತಿಸಿದ್ದರು. ಅಲ್ಲಿಂದ ಅಪಹರಿಸಿ ಚಾಮರಾಜನಗರ ತೋಟದ ಮನೆಯೊಂದಕ್ಕೆ ಕರೆತಂದಿದ್ದಾರೆ.
ಸೋಮಶೇಖರ್ ಮೇಲೆ ಹಲ್ಲೆ
ಸೈಟಿಗಾಗಿ ಕೂಡಿಟ್ಟಿರುವ 40 ಲಕ್ಷ ರೂಪಾಯಿ ನೀಡುವಂತೆ ಬಲವಂತ ಮಾಡಿ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಸ್ನೇಹಿತರಿಗೆ ಕರೆ ಮಾಡಿ 10 ಲಕ್ಷ ಹಣವನ್ನು ಸುಪ್ರಿಯಾಗೆ ನೀಡುವಂತೆ ಸೋಮಶೇಖರ್ ಮೂಲಕ ಅಪಹರಣಕಾರರು ಬೆದರಿಸಿದ್ದರು. ಸ್ನೇಹಿತರೊಬ್ಬರಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ನೀಡುವಂತೆ ಸೋಮಶೇಖರ್ ಮೂಲಕ ಹೇಳಿಸಿದ್ದರು. ಇದರಿಂದ ಸಂಶಯಗೊಂಡ ಸೋಮಶೇಖರ್ ಮಿತ್ರರು ಸುಪ್ರಿಯಾ ಮನೆಗೆ ಹೋಗಿ ವಿಚಾರಿಸಿದ್ದಾರೆ.
ಸೋಮಶೇಖರ್ ಸ್ನೇಹಿತರಿಂದ ದೂರು
ಗಂಡನಿಗೆ ಕೊರೊನಾ ಬಂದಿದೆ. ಸಂಬಂಧಿ ಗಗನ್ ಎಂಬುವರು ಮಾಗಡಿ ರೋಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸುಳ್ಳು ಹೇಳಿದ್ದರು. ಇದನ್ನು ನಂಬದ ಸ್ನೇಹಿತರು ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸುಪ್ರಿಯಾ ಮನೆಗೆ ಹೋಗಿ ವಿಚಾರಿಸಿದ್ದರು. ಈ ವಿಷಯ ಗಗನ್ ಸಹಚರರಿಗೆ ತಿಳಿದು ಆತಂಕಕ್ಕೆ ಒಳಗಾಗಿ ಸೋಮಶೇಖರ್ ನನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ. ಈ ಸಂದರ್ಭ ಸೋಮಶೇಖರ್ ಸ್ನೇಹಿತರು ಗಗನ್ ಹಾಗೂ ತಾಯಿ ಲತಾ ಇಬ್ಬರನ್ನು ಹಿಡಿದು ಬಾಗಲಗುಂಟೆ ಪೊಲೀಸರಿಗೆ ಒಪ್ಪಿಸಿದ್ದರು.
Recommended Video
ಕೊರೊನಾ ಸೋಂಕಿತ ಎಂದು ಸುಳ್ಳು ಪ್ರಮಾಣಪತ್ರ
ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದ ಲತಾ, ಸೋಮಶೇಖರ್ ಗೆ ಕೊರೊನಾ ಬಂದಿದೆ ಎಂದು ಹೇಳಿ ಕೊರೊನಾ ವೈದ್ಯಕೀಯ ಹೊರಗುತ್ತಿಗೆ ಕೆಲಸ ಮಾಡುವ ಕಿರಣ್ ಕುಮಾರ್ ನನ್ನು ಪುಸಲಾಯಿಸಿ ಸೋಮಶೇಖರ್ ಸೋಂಕಿತ ಎಂದು ಪ್ರಮಾಣಪತ್ರ ತೆಗೆದುಕೊಂಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಮೂಲಕ ಆತನನ್ನು ವಶದಲ್ಲಿಟ್ಟುಕೊಂಡು ಹಣ ವಸೂಲಿಗೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.