ಈ ಕೆಲಸ ಆಗದಿದ್ದರೆ ಬೆಂಗಳೂರು ಅಭಿವೃದ್ಧಿಯ ಎಂಜಿನ್ ಆಗಿ ಬೆಳೆಯಲ್ಲ: ತೇಜಸ್ವಿ ಸೂರ್ಯ!
ಬೆಂಗಳೂರಿನಲ್ಲಿ ಈ ಬಾರಿ ಎದುರಾಗಿರುವ ರಸ್ತೆ ಗುಂಡಿ ಸಮಸ್ಯೆಯು ಇತ್ತೀಚಿನ ವರ್ಷಗಳಲ್ಲಿ ಎದುರಾದ ದೊಡ್ಡ ಮಟ್ಟದ ಸಮಸ್ಯೆ ಆಗಿ ಬದಲಾಗಿದೆ. ದೇಶದಾದ್ಯಂತ ಈ ಬಾರಿ ರಸ್ತೆಗುಂಡಿಗಳ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ರಸ್ತೆಗುಂಡಿಗಳು ಸೃಷ್ಟಿಯಾಗುವುದು ಇದೆ. ಅದನ್ನು ಬೆಂಗಳೂರು ಆಡಳಿತ ಹಾಗೂ ಸರ್ಕಾರವು ಬೇಗ ಮುಚ್ಚುತ್ತಿತ್ತು. ಆದರೆ, ಈ ಬಾರಿ ಬೆಂಗಳೂರು ನಗರದ ರಸ್ತೆಗುಂಡಿ ಸಮಸ್ಯೆಯು ಸರ್ಕಾರಕ್ಕೆ ಭಾರೀ ಮುಜುಗರ ಹಾಗೂ ಜನರಿಗೆ ಸಂಕಷ್ಟವನ್ನು ತಂದೊಡ್ಡಿದೆ.
ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ತ್ವರಿತವಾಗಿ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವುದಾಗಿ ಹೇಳುತ್ತಿದೆಯಾದರೂ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ರಸ್ತೆಗುಂಡಿ ಸಮಸ್ಯೆಗೆ ಕಡಿವಾಣ ಬಿದ್ದಿಲ್ಲ. ಈ ರೀತಿ ಇರುವಾಗಲೇ ವಿರೋಧ ಪಕ್ಷಗಳು ಕರ್ನಾಟಕ ಸರ್ಕಾರದ ಮೇಲೆ ಮುಗಿಬಿದ್ದಿವೆ. ಈ ನಡುವೆ ಉದ್ಯಮಿಗಳು ಸಹ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ನಮ್ಮ ನಗರ (ಕೆಟ್ಟ) ಆಡಳಿತದ ಸ್ಥಿತಿಗೆ ಈ ಫೋಟೋಗಿಂತಲೂ ಮತ್ತೊಂದು ಒಳ್ಳೆಯ (ಜಾಹೀರಾತು) ದೊಡ್ಡ ಉದಾಹರಣೆ ಇನ್ನೊಂದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ರಸ್ತೆ ಗುಂಡಿ ಸಮಸ್ಯೆ ಪರಿಶೀಲನೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಉನ್ನತ ಅಧಿಕಾರಿಯಾಗಿರುವ ಕರ್ನಾಟಕದ ಮುಖ್ಯ ಕಾರ್ಯದರ್ಶಿಯವರು ರಸ್ತೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದಾರೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡುತ್ತಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು, "ಮಿಷನ್ ಮೋಡ್" ನಲ್ಲಿ ಗುಂಡಿಗಳನ್ನು ಮುಚ್ಚುವುದನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಘೋಷಿಸುತ್ತಾರೆ. ಅಲ್ಲದೇ ಬೆಂಗಳೂರಿನಲ್ಲಿ ದಿನಕ್ಕೆ 1,000 ಗುಂಡಿಗಳನ್ನು ಮುಚ್ಚುವುದನ್ನು ಪ್ರಮುಖ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಆದರೆ ನಾವು ಸ್ಪಷ್ಟವಾಗಿ ಹೇಳೋಣ - ಇವು ಬೆಂಗಳೂರು ಆಡಳಿತ (ಮಹಾನಗರ ಪಾಲಿಕೆ ಹಾಗೂ ಗ್ರೇಟರ್ ಬೆಂಗಳೂರ ಆಡಳಿತ)ದ ಕೆಲಸಗಳಾಗಿವೆ. ಸ್ಥಳೀಯ ಆಡಳಿತದ ಅಧಿಕಾರಿಗಳು ಈ ಕೆಲಸವನ್ನು ನಿರ್ವಹಿಸಬೇಕು. ರಾಜ್ಯದ ಅತ್ಯುನ್ನತ ಅಧಿಕಾರಿಗಳು ಈಗ ಬೆಂಗಳೂರಿನ ಗುಂಡಿಗಳನ್ನು ಮೇಲ್ವಿಚಾರಣೆ ಮಾಡುವ ಹಂತಕ್ಕೆ ಇಳಿದಿದ್ದಾರೆ ಎಂಬ ಅಂಶವು ನಗರ ಆಡಳಿತದ ಕುಸಿತದ ಬಗ್ಗೆ ನಮಗೆ ಎಲ್ಲವನ್ನೂ ಹೇಳುತ್ತದೆ. ಸುಮಾರು ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಚುನಾಯಿತ ಸದಸ್ಯರು ಆಡಳಿತ ನಡೆಸುತ್ತಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಕರ್ನಾಟಕದ ಭವಿಷ್ಯವನ್ನು ರೂಪಿಸಬೇಕಾದ ರಾಜ್ಯ ನಾಯಕರು ಬೆಂಗಳೂರು ಆಡಳಿತ ಅಥವಾ ಆಯುಕ್ತರ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ನಾವು ಬೆಂಗಳೂರು ಪಾಲಿಕೆ ಸಂಸ್ಥೆಗಳನ್ನು ಸಂಸತ್ತು ಮತ್ತು ವಿಧಾನಸಭೆಯಂತೆ ಮುಖ್ಯವಾಗಿಸದಿದ್ದರೆ, ಅವುಗಳಿಗೆ ಅಧಿಕಾರ ಮತ್ತು ಹೊಣೆಗಾರಿಕೆಯೊಂದಿಗೆ ಅಧಿಕಾರ ನೀಡದಿದ್ದರೆ ಮತ್ತು ನಿಯಮಿತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳದ ಹೊರತು, ನಮ್ಮ ನಗರಗಳು ಅಭಿವೃದ್ಧಿಯ ಎಂಜಿನ್ಗಳಾಗಿ ಎಂದಿಗೂ ಬೆಳೆಯುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications