ಸ್ವಾಮೀಜಿ ಆದೇಶಿಸಿದರೆ ಇದೇ ವೇದಿಕೆಯಲ್ಲಿ ರಾಜೀನಾಮೆ: ಶ್ರೀರಾಮುಲು
Recommended Video
ಬೆಂಗಳೂರು, ಜೂನ್ 25: ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ದಾವಣಗೆರೆಯಿಂದ ಆರಂಭವಾದ ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ ಮಂಗಳವಾರ ಬೆಂಗಳೂರು ತಲುಪಿದೆ.
ವಾಲ್ಮೀಕಿ ಸಮುದಾಯದ ಸಾವಿರಾರು ಜನರು ಈ ಬೃಹತ್ ಪ್ರತಿಭಟನಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಮಂಗಳವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಸಮುದಾಯ ಪ್ರತಿಭಟನೆಯನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರಿಸಿದೆ.
ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ನೀಡುವವರೆಗೂ ನಾನು ಬಿಡುವುದಿಲ್ಲ. ನೀವು ಆದೇಶಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದು ಬಿಜೆಪಿ ಶಾಸಕ ಶ್ರೀರಾಮುಲು ರಾಜನಹಳ್ಳಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಹೇಳಿದರು.
ನಮ್ಮ ಸಮುದಾಯದವರಿಗೆ ಅನ್ಯಾಯ ಆಗುತ್ತಿದೆ. ನ್ಯಾಯ ಸಿಗಬೇಕು. ಅದಕ್ಕಾಗಿ ನಮ್ಮ ರಕ್ತವನ್ನು ಕೊಡಲು ಸಿದ್ಧ. ಇದಕ್ಕಾಗಿ ರಾಜ್ಯದಾದ್ಯಂತ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಅದಕ್ಕಾಗಿ 14 ದಿನಗಳಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದೇವೆ ಎಂದು ಶ್ರೀರಾಮುಲು ಹೇಳಿದರು.

ಸ್ವಾಮೀಜಿ ಕೊಟ್ಟ ಭಿಕ್ಷೆ
ಶಾಸಕ ಸ್ಥಾನದಲ್ಲಿ ಇರಲು ಸ್ವಾಮೀಜಿ ಕಾರಣ. ನಾವು ಬೀದಿಗೆ ಬಂದರೆ ಯಾರ ಮಾತನ್ನೂ ಕೇಳುವುದಿಲ್ಲ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಕೊಟ್ಟ ಭಿಕ್ಷೆಯಿಂದ ನಾವು ಇಂದು ರಾಜಕಾರಣದಲ್ಲಿದ್ದೇವೆ. ಸ್ವಾಮೀಜಿಗಳ ಆಶೀರ್ವಾದದಿಂದ ಇಲ್ಲಿವರೆಗೆ ಬಂದಿದ್ದೇವೆ ಎಂದರು.

ಯಾವುದೂ ಶಾಶ್ವತವಲ್ಲ
ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನಾವು ಸಮಾಜಕ್ಕಾಗಿ ಕೆಲಸ ಮಾಡಬೇಕು. ನಾಳೆ ಬದುಕುತ್ತೇವೆಯೋ ಇಲ್ಲವೋ ಎಂಬ ಖಚಿತತೆ ಇಲ್ಲ. ಬದುಕುವವರೆಗೂ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡೋಣ ಎಂದು ಶ್ರೀರಾಮುಲು ಹೇಳಿದರು.

ಇದೇ ವೇದಿಕೆಯಲ್ಲಿ ರಾಜೀನಾಮೆ
ಸ್ವಾಮೀಜಿಗಳೇ ನೀವು ಶ್ರೀರಾಮುಲುಗೆ ಆದೇಶ ನೀಡಿ. ಶಾಸಕ ಸ್ಥಾನಕ್ಕೆ ಇದೇ ವೇದಿಕೆಯಲ್ಲಿ ರಾಜೀನಾಮೆ ನೀಡುತ್ತೇನೆ. ಸಮುದಾಯದ ಒಳಿತಿಗಾಗಿ ನಾನು ರಾಜೀನಾಮೆ ಕೊಡಲು ಸಿದ್ಧ. ನಮ್ಮ ಸಮುದಾಯದ ಪರವಾಗಿ ಹೋರಾಟಕ್ಕೆ ತೊಡಗಿಸಿಕೊಳ್ಳುತ್ತೇನೆ. ನಮ್ಮ ಸಮುದಾಯದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ವಿಧಾನಸೌದ ನಡುಗಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪಾದಯಾತ್ರೆಯ ವಿವರ
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ದಾವಣಗೆರೆಯ ರಾಜನಹಳ್ಳಿಯಿಂದ ಜೂನ್ 7ರಂದು ಆರಂಭವಾಗಿದ್ದ ಪಾದಯಾತ್ರೆ ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಶಿರಾ, ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕೆಆರ್ಪುರಂ ಮೂಲಕ ಬೆಂಗಳೂರು ತಲುಪಿದೆ.












Click it and Unblock the Notifications