ಕುಡುಕ ಪತಿಯ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ ಪತ್ನಿ ಪದ್ಮಾವತಿ!
ಬೆಂಗಳೂರು, ಫೆಬ್ರವರಿ 12: ಕುಡಿತದಿಂದ ಇಡೀ ಕುಟುಂಬವೇ ಸರ್ವನಾಶ ಎಂಬುದು ಮಹಾತ್ಮ ಗಾಂಧಿ ಹೇಳಿದ ಮಾತು. ಕುಡಿತದ ಚಟ ಪೌರ ಕಾರ್ಮಿಕ ಕುಟುಂಬವನ್ನೇ ಸರ್ವನಾಶ ಮಾಡಿದೆ. ಗಂಡನ ಕುಡಿತದ ಚಟ ಬಡಿಸಲು ನಾನಾ ಸಾಹಸ ಮಾಡಿದ ಪತ್ನಿ ಕೊಲೆಗೆ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರೇ ತೆಗೆದಿದ್ದಾಳೆ. ಕುಡಕ ಪತಿ ಸತ್ತು ಸ್ಮಶಾನ ಸೇರಿದರೆ, ಕೊಲೆ ಮಾಡಿದ ಆರೋಪ ಹೊತ್ತು ಪತ್ನಿ ಜೈಲು ಸೇರುವಂತಾಗಿದೆ.
ಮೋಹನ್ (41) ಕೊಲೆಯಾದ ವ್ಯಕ್ತಿ. ಪದ್ಮಾವತಿ ಕೊಲೆ ಮಾಡಿದ ಆರೋಪಿತ ಪತ್ನಿ. ಈ ಸಂಬಂಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪತಿಯ ಕುಡಿತದ ಚಟ ಬಿಡಿಸಲು ನಾನಾ ಕಸರತ್ತು ಮಾಡುವ ಪತ್ನಿ ಕೊನೆಗೆ ಪತಿಯನ್ನೇ ಹತ್ಯೆ ಮಾಡಿ ಬಂಧನಕ್ಕೆ ಒಳಗಾಗಿದ್ದಾಳೆ.
ಮೋಹನ್ ಬಿಬಿಎಂಪಿಯ ಕಸ ವಿಲೇವಾರಿ ಮಾಡುವ ಆಟೋ ಚಾಲಕನಾಗಿದ್ದ. ಪತ್ನಿ ಪದ್ಮಾವತಿ ಕೂಡ ಪೌರ ಕಾರ್ಮಿಕಳಾಗಿ ಕೆಲಸ ನಿರ್ವಹಿಸುತ್ತಿದ್ದಳು. ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಕುಡಿತದ ಚಟಕ್ಕೆ ಅಂಟಿಕೊಂಟಿದ್ದ ಮೋಹನ್ ಮತ್ತು ಪತ್ನಿ ಪದ್ಮಾವತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಗಂಡನ ಕುಡಿತದಿಂದ ಇಡೀ ಕುಟುಂಬವೇ ಕಂಗಾಲಾಗಿತ್ತು. ಅನೇಕ ಸಲ ಜಗಳ ಕೂಡ ಆಗಿತ್ತು. ಗಂಡನ ಕುಡಿತದ ಚಟದಿಂದ ತಲೆ ಕೆಡಿಸಿಕೊಂಡಿದ್ದ ಪತ್ನಿ ಪದ್ಮಾವತಿ ಆರು ತಿಂಗಳ ಹಿಂದೆ ಮೋಹನ್ ನನ್ನು ಮದ್ಯ ವ್ಯಸನಮುಕ್ತ ಕೇಂದ್ರಕ್ಕೆ ಹಾಕಿ ಟ್ರೀಟ್ ಮೆಂಟ್ ಕೊಡಿಸಿದ್ದಳು. ಚಿಕಿತ್ಸೆಗಾಗಿ ಪದ್ಮಾವತಿ ಹಣವನ್ನು ವ್ಯಯಿಸಿದ್ದಳು. ಚಿಕಿತ್ಸೆ ಮುಗಿದ ಬಳಿಕ ಮನೆಗೆ ಬಂದ ಮೋಹನ್ ಮತ್ತೆ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ಇದರಿಂದ ಪತ್ನಿ ರೋಸಿ ಹೋಗಿದ್ದಳು.
ಬೆಳಗಿನ ಜಾವ ಹತ್ಯೆ: ಕಂಠಪೂರ್ತಿ ಕುಡಿದು ಬಂದಿದ್ದ ಮೋಹನ್ ಮತ್ತು ಪತ್ನಿ ಪದ್ಮಾವತಿ ನಡುವೆ ಎಳನೀರು ತರುವ ವಿಚಾರವಾಗಿ ಬೆಳಗಿನ ಜಾವ ಜಗಳ ಆಗಿದೆ. ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಲು ಯತ್ನಿಸಿದ ಪತಿಯನ್ನು ಪದ್ಮಾವತಿ ಕೆಳಗೆ ತಳ್ಳಿದ್ದಾಳೆ. ಕೆಳಗೆ ಬಿದ್ದ ಪತಿಯ ಕುತ್ತಿಗೆ ಮೇಲೆ ಕಾಲಿಟ್ಟಿ ಉಸಿರು ಗಟ್ಟಿಸಿದ್ದಾಳೆ. ಮೊದಲೇ ಮತ್ತಿನಲ್ಲಿ ತೂರಾಡ್ತಿದ್ದ ಮೋಹನ್ ಕೋಮಾಗೆ ಹೋಗಿದ್ದಾನೆ. ಪಕ್ಕದ ಮನೆಯವರ ನೆರವಿನಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನಂತರ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಮೋಹನ್ ಸಾವನ್ನಪ್ಪಿರುವ ಸಂಗತಿ ಹೊರ ಬಿದ್ದಿದೆ. ವಿಷಯ ಜೆ.ಜೆ. ನಗರ ಪೊಲೀಸರಿಗೆ ಮುಟ್ಟಿಸಿದ್ದು ಜೆ.ಜೆ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Recommended Video
ಪೌರ ಕಾರ್ಮಿಕರು ಈ ಕಸದ ವಾಸನೆಯಲ್ಲಿ ಕೆಲಸ ಮಾಡಬೇಕಾದರೆ ಕುಡಿತ ಅನಿವಾರ್ಯ. ಆ ಕುಡಿತದಿಂದ ಸ್ವಂತ ಕುಟುಂಬಗಳೇ ಸರ್ವನಾಶ ಆಗುವುದು ಮತ್ತೊಂದು ವಿಪರ್ಯಾಸ. ಕುಡಿತಕ್ಕೆ ಗಂಡ ಬಲಿಯಾದರೆ, ಹೆಂಡತಿ ಗಂಡನಿಗೆ ಬುದ್ದಿ ಕಲಿಸಲು ಹೋಗಿ ಜೈಲು ಪಾಲಾಗಿದ್ದಾರೆ. ಇನ್ನು ಉಳಿದಿರುವ ಮೂರು ಮಕ್ಕಳು ಬೀದಿಗೆ ಬಿದ್ದಂತಾಗಿದೆ.