ಸಿದ್ದು ಔತಣಕೂಟಕ್ಕೆ ಅತೃಪ್ತರು ಗೈರು, ಅರ್ಥವಾಗದ ಲೆಕ್ಕಾಚಾರ!
Recommended Video

ಬೆಂಗಳೂರು, ಜುಲೈ 04: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್ಸಿನ ರೆಬೆಲ್ ಶಾಸಕರು ಈಗ ಸಿದ್ದರಾಮಯ್ಯ ಅವರಿಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದಾರಾ? ಈ ಮಾತಿಗೆ ಪುಷ್ಠಿ ನೀಡುವಂಥ ಘಟನೆ ನಿನ್ನೆ(ಜೂನ್ 03) ನಡೆದಿದೆ.
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೆಲ್ ನಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗಾಗಿಯೇ ಔತಣಕೂಟ ಏರ್ಪಡಿಸಿದ್ದರು. ನಿನ್ನೆ ಸಂಜೆ 7:30 ಕ್ಕೆ ಆಯೋಜನೆಯಾಗಿದ್ದ ಈ ಔತಣಕೂಟಕ್ಕೆ ಮಾಜಿ ಶಾಸಕ ಎಂ ಬಿ ಪಾಟೀಲ ಸೇರಿದಂತೆ ಅತೃಪ್ತ ಬಣದ ಶಾಸಕರೊಬ್ಬರೂ ಹಾಜರಾಗದಿದ್ದುದು ಅತ್ಯಂತ ಕುತೂಹಲ ಕೆರಳಿಸಿದೆ.
ಪ್ರಸ್ತುತ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಕಾಂಗರೆಸ್ಸಿನ ಎಲ್ಲಾ ನಾಯಕರೊಂದಿಗೂ ವಿಶ್ವಾಸ ಇಟ್ಟುಕೊಂಡಿಲ್ಲ ಎಂಬ ಮಾತು ಕೇಳಿಬಂದಿತ್ತು. ಕೆಲವೇ ಶಾಸಕರೊಂದಿಗೆ ಗುರುತಿಸಿಕೊಂಡು ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪವೂ ಇತ್ತು. ಈ ಎಲ್ಲಾ ಆರೋಪವನ್ನೂ ತಣ್ಣಗಾಗಿಸಲು ಸಿದ್ದರಾಮಯ್ಯ ಈ ಔತಣಕೂಟ ಏರ್ಪಡಿಸಿದ್ದರಾ ಎಂಬ ಅನುಮಾನವೂ ಎದ್ದಿದೆ.

ಯಾರ್ಯಾರು ಗೈರು?
ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಮುನಿಸಿಕೊಂಡಿರುವ ಶಾಸಕರಾದ ಎಂ.ಬಿ.ಪಾಟೀಲ, ಎಚ್ ಕೆ ಪಾಟೀಲ್, ರೋಷನ್ ಬೇಗ್, ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ ಇವರ್ಯಾರೂ ಔತಣ ಕೂಟಕ್ಕೆ ಬಾರದೆ ಇದ್ದಿದ್ದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡ ಇವರು ಔತಣ ಕೂಟದಲ್ಲಿ ಪಾಲ್ಗೊಳ್ಳದೆ ಇದ್ದಿದ್ದು ಏಕೆ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಪರಮೇಶ್ವರ್ ಭಾಗಿ?
ಈ ಔತಣಕೂಟಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ. ಜೊತೆಗೆ ಸಂಪುಟದ ಬಹುಪಾಲು ಕಾಂಗ್ರೆಸ್ ಸಚಿವರು, ಶಾಸಕರು ಔತಣ ಕೂಟಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಮೂಲಕ ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ನಾಯಕರಾಗಿ ತಾವು ಕೇವಲ ಅತೃಪ್ತರ ಪರ ಅಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ!

ಅತೃಪ್ತರು ಅಬ್ಸೆಂಟ್ ಆಗಿದ್ದೇಕೆ?
ಅಷ್ಟಕ್ಕೂ ಈ ಅತೃಪ್ತರು ಔತಣ ಕೂಟಕ್ಕೆ ಗೈರಾಗಿದ್ದೇಕೆ? ರಾಜಕೀಯ ಲೆಕ್ಕಾಚಾರ ಬದಲಾಗುತ್ತಿದೆಯಾ? ಕೆಲವು ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅತೃಪ್ತರ ಪರ ಎಂದು ಬಿಂಬಿಸಲಾಗಿದ್ದರಿಂದ ಬೇಕೆಂದೇ ಅತೃಪ್ತರು ಈ ಔತಣ ಕೂಟಕ್ಕೆ ಬಾರದೆ ತಾವು ಸಿದ್ದರಾಮಯ್ಯ ಅವರೊಂದಿಗಿಲ್ಲ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ! ಸಿದ್ದರಾಮಯ್ಯ ಅವರು ಸಹ ಅತೃಪ್ತರನ್ನು ಬೇಕೆಂದೇ ದೂರವಿಟ್ಟಿದ್ದಾರೆ. ಹಾಗಂತ ಅತೃಪ್ತರು ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ಇದು ಹೈಕಮಾಂಡ್ ಮತ್ತು ಕಾಂಗ್ರೆಸ್ಸಿನ ಇತರ ನಾಯಕರೆದುರು ಸಿದ್ದರಾಮಯ್ಯ ಅವರು 'ಎಲ್ಲ ಹಣೆಪಟ್ಟಿಗಳನ್ನೂ ಕಳಚಿಕೊಳ್ಳುವ ಯತ್ನವಾಗಿರಬಹುದು!'

ಸಿದ್ದು-ಎಚ್ಡಿಕೆ ಮುಸುಕಿನ ಗುದ್ದಾಟ
ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಬಣವನ್ನು ದೂರವಿಟ್ಟು, ಈಗಾಗಲೇ ಎಚ್ಡಿಕೆ, ಪರಮೇಶ್ವರ್ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ತಮಗೇ ಅವರಿಗೇ ನಷ್ಟ ಎಂಬುದನ್ನು ಅರಿತ ಸಿದ್ದರಾಮಯ್ಯ, ಎಚ್ಚೆತ್ತುಕೊಂಡು, ತರಾತುರಿಯಲ್ಲಿ ಔತಣ ಕೂಟ ಏರ್ಪಡಿಸಿದಂತಿದೆ.












Click it and Unblock the Notifications