ಮೈತ್ರಿಯಾ ಗೌಡ ಕೌಟುಂಬಿಕ ಕೋರ್ಟಿಗೆ ಕಾಲಿಟ್ಟಿದ್ದೇಕೆ?
ಬೆಂಗಳೂರು, ಅ.10: ನಟಿ ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ಅವರ ಪ್ರೇಮ-ವಿವಾಹ ಪ್ರಕರಣದಲ್ಲಿ ಮತ್ತೊಮ್ಮೆ ಕಾನೂನು ಸಮರ ಆರಂಭವಾಗಿದೆ. ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರಿಗೆ ಶುಕ್ರವಾರ ಕೌಟುಂಬಿಕ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದೆ. ಇಷ್ಟಕ್ಕೂ ಮೈತ್ರಿಯಾ ಹೈಕೋರ್ಟ್ ಮೆಟ್ಟಿಲೇರುವ ಬದಲು ಫ್ಯಾಮಿಲಿ ಕೋರ್ಟಿನಲ್ಲಿ ಕಾಣಿಸಿಕೊಂಡಿದ್ದೇಕೆ ಎಂಬ ಕುತೂಹಲ ಮೂಡಿದೆ.
ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ಪತ್ನಿ ಡಾಟಿ ಅವರ ಅನುಮತಿ ಸಿಗದ ಕಾರಣ ಅವರ ಪುತ್ರ ಕಾರ್ತಿಕ್ ಗೌಡ ಹಾಗೂ ನಾನು ಆತುರಾತುರವಾಗಿ ಮದುವೆಯಾಗಿದ್ದೇವೆ. ಮಂಗಳೂರಿನ ಅವರ ನಿವಾಸದಲ್ಲಿ ದೇವರ ಎದುರಿನಲ್ಲಿ ಕಾರ್ತಿಕ್ ನನಗೆ ಅರಿಶಿನ ಕೊಂಬು ಕಟ್ಟುವ ಮೂಲಕ ಪತ್ನಿ ಎಂದು ಸ್ವೀಕರಿಸಿದ್ದಾನೆ. ಹಿಂದೂ ಧರ್ಮದ ಪ್ರಕಾರ ವಿವಾಹ ಸಂಪನ್ನವಾಗಿದ್ದು, ಈಗ ನಾನು ನನ್ನ ಪತಿಯೊಟ್ಟಿಗೆ ಜೀವಿಸಲು ಇಚ್ಛಿಸಿದ್ದೇನೆ.
ಕಾರ್ತಿಕ್ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಂಡು ಪತ್ನಿಗೆ ಸೇರುವ ಎಲ್ಲಾ ಹಕ್ಕುಗಳನ್ನು ನೀಡತಕ್ಕದ್ದು, ಅಲ್ಲದೆ ಕಾರ್ತಿಕ್ ಅವರು ಬೇರೆ ಯಾವುದೇ ಯುವತಿ ಜೊತೆ ಮದುವೆಯಾಗುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇಂಥ ಪ್ರಯತ್ನಕ್ಕೆ ತಡೆ ಒಡ್ಡಬೇಕು ಎಂದು ಮೈತ್ರಿಯಾ ಅವರು ಹಳೆ ಪುರಾಣವನ್ನು ಹೊಸದಾಗಿ ಫ್ಯಾಮಿಲಿ ಕೋರ್ಟಿಗೆ ನೀಡಿರುವ ಮನವಿಯಲ್ಲಿ ಹೇಳಿಕೊಂಡಿದ್ದಾರೆ. ಅರ್ಜಿ ಸ್ವೀಕರಿಸಿದ ಕೋರ್ಟ್ ಕಾರ್ತಿಕ್ ಗೌಡ ಅವರಿಗೆ ಈ ಬಗ್ಗೆ ಸ್ಪಷ್ಟನೆ ಕೋರಿ ನೋಟಿಸ್ ಜಾರಿ ಮಾಡಿದೆ. [ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು]

ಆದರೆ, ಇದೆಲ್ಲ ಕಥೆ ಎಲ್ಲರಿಗೂ ಗೊತ್ತೇ ಇದೆ. ಅತ್ಯಾಚಾರ, ವಂಚನೆ ಆರೋಪ ಹೊತ್ತು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಕಾರ್ತಿಕ್ ಗೌಡ ಅವರಿಗೆ ಸೆಷನ್ಸ್ ನ್ಯಾಯಾಲಯ ಸೆ.8ರಂದು ಸಂಜೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಸೆಷನ್ಸ್ ಕೋರ್ಟಿನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಮೈತ್ರಿಯಾ ಪರ ವಕೀಲ ರಾಜು, ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ, ಹೈಕೋರ್ಟಿಗೆ ಅರ್ಜಿ ಹಾಕಲಾಗುವುದು. ಕಾರ್ತಿಕ್ ಅವರು ಮೊದಲು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿ ಎಂದಿದ್ದರು. [ಸದಾನಂದ ಗೌಡ ಕುಟುಂಬದವರ ಪೋನ್ ಟ್ಯಾಪ್]
ಕಾರ್ತಿಕ್ ಶಿಸ್ತಿನಿಂದ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಶಾಸ್ತ್ರ ಮುಗಿಸಿಕೊಂಡು ಬಂದರು. ಈ ನಡುವೆ ಮಾಧ್ಯಮ ಪ್ರತಿನಿಧಿಗಳ ಮೈಕ್ ಮುಂದೆ ನಿಂತು 'ನಾನೇನು ತಪ್ಪು ಮಾಡಿಲ್ಲ. ಮೈತ್ರಿಯಾರನ್ನು ನಾನು ಮದುವೆಯಾಗಿಲ್ಲ' ಎಂದು ಘೋಷಿಸಿಯೂ ಬಿಟ್ಟರು. ನಂತರ ಡಿವಿಎಸ್ ಫ್ಯಾಮಿಲಿ ಸಂಕಷ್ಟ ನಿವಾರಣೆಗಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿಕೊಂಡು ಬಂದ ಬೆನ್ನಲ್ಲೇ ಕಾರ್ತಿಕ್ ಅವರಿಗೆ ನೋಟಿಸ್ ಜಾರಿಯಾಗಿದೆ. [ತಿಮ್ಮಪ್ಪನಿಗೆ ಡಿವಿಎಸ್ ಮೊರೆ]

ಮೈತ್ರಿಯಾ ಯೋಜನೆ ಏನು?: ಹೇಗಾದರೂ ಕಾರ್ತಿಕ್ ನನ್ನನ್ನು ಪತ್ನಿ ಎಂದು ಒಪ್ಪಿಕೊಂಡರೆ ಸಾಕು, ನಾನು ಆಸ್ತಿ ಪಾಸ್ತಿ ಏನೂ ಬೇಡ. ನಾನು ಆತನನ್ನು ತುಂಬಾ ಪ್ರೀತಿಸಿದ್ದೇನೆ ಎಂದು ಕನ್ನಡದ ಎಲ್ಲಾ ಚಾನೆಲ್ ಗಳ ಮುಂದೆ ಕಂಠ ಶೋಷಣೆ ಮಾಡಿಕೊಂಡಿದ್ದ ಮೈತ್ರಿಯಾ ಅವರು ಹೈಕೋರ್ಟ್ ಬಿಟ್ಟು ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಲು ಇದೆ ಕಾರಣ.
ಹೈಕೋರ್ಟ್ ಗೆ ಹೋದರೆ ಇದು ಫ್ಯಾಮಿಲಿ ಮ್ಯಾಟರ್ ಕೌಟುಂಬಿಕ ನ್ಯಾಯಾಲಯಕ್ಕೆ ಏಕೆ ಹೋಗಿಲ್ಲ ಎಂದು ಪ್ರಶ್ನಿಸಬಹುದು. ಆರೋಪಿಗೆ ಶಿಕ್ಷೆಯಾಗುವುದಕ್ಕಿಂತ ಆರೋಪಿ ಕಾರ್ತಿಕ್ ಅವರು ಮೈತ್ರಿಯಾರನ್ನು ಒಪ್ಪಿಕೊಳ್ಳುವುದು ಇಲ್ಲಿ ಮುಖ್ಯವೆನಿಸಿದೆ. ಅಲ್ಲದೆ. ಈ ಮೊದಲೇ ಫ್ಯಾಮಿಲಿ ಕೋರ್ಟಿಗೆ ಏಕೆ ಕಾಲಿಡಲಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ. [ದೈಹಿಕ ಸಂಪರ್ಕ ಮಾಡಿದ್ದು ಯಾರು?]
ಪ್ರಾಯಶಃ ಇದುವರೆವಿಗೂ ಸಿಗದ ಸಾಕ್ಷ್ಯಧಾರಗಳು ಮೈತ್ರಿಯಾ ಅವರಿಗೆ ಸಿಕ್ಕಿರಬಹುದು. ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತು ಎನ್ನಲು ವೈದ್ಯಕೀಯ ವರದಿ ಬಂದಿರಬಹುದು.ಫ್ಯಾಮಿಲಿ ಕೋರ್ಟಿನಲ್ಲಿ ಮದುವೆ ಪತಿ ಪತ್ನಿ ಎಂದು ಊರ್ಜಿತ ಮಾಡಲು ಮದುವೆಯಾಗಿರುವುದಕ್ಕೆ ಸೂಕ್ತ ಸಾಕ್ಷಿಗಳು ಬೇಕಾಗುತ್ತದೆ. ಇದೆಲ್ಲದಿದ್ದರೆ ಹಿಂದೂ ವಿವಾಹ ಕಾಯ್ದೆ 1955 ಅಥವಾ ವಿಶೇಷ ವಿವಾಹ ಕಾಯ್ದೆ ನಿಯಮಗಳಿಗೆ ಒಳಪಟ್ಟಿರಬೇಕು. ಅಲ್ಲದೆ, ಇಲ್ಲಿ ತನಕ ಇವರ ವಿವಾಹ ನೋಂದಣಿಯಾಗಿರುವ ಬಗ್ಗೆ ಎಲ್ಲೂ ಯಾರೂ ಬಾಯ್ಬಿಟ್ಟಿಲ್ಲ. ಮುಂದೇನಾಗುವುದೋ ಕಾದು ನೋಡೋಣ












Click it and Unblock the Notifications