ಸೂಟ್ ಕೇಸ್ ತಗೊಳ್ತಿದ್ದವರೀಗ ಪಕ್ಷ ಬಿಟ್ಟಿದ್ದಾರೆ: ಎಚ್ ಡಿಕೆ
ಬೆಂಗಳೂರು, ಜುಲೈ 10: ಜೆಡಿಎಸ್ ನಲ್ಲಿ ಸೂಟ್ ಕೇಸ್ ತಗೊಳ್ತಿದ್ದವರು ಇದ್ದರು. ಅವರು ಮುಂಚೂಣಿಯಲ್ಲೇ ಕೂರುತ್ತಿದ್ದರು. ಆದರೆ ಅವರೀಗ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾರೆ.
ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿಯಿದೆ ಎಂಬ ಪ್ರಜ್ವಲ್ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪ್ರಜ್ವಲ್ ನನ್ನ ಹೆಸರೇನೂ ಹೇಳಿಲ್ಲ. ಅವನು ಕ್ಷಮೆ ಕೇಳುವ ಅಗತ್ಯವೂ ಇಲ್ಲ. ಪ್ರಜ್ವಲ್ ಯಾವ ಅರ್ಥದಲ್ಲಿ ಹೇಳಿದನೋ ಗೊತ್ತಿಲ್ಲ ಎಂದು ಮೊದಲಿಗೆ ಹೇಳಿದ್ದಾರೆ.

ಆ ನಂತರ ಜೆಡಿಎಸ್ ನ ಭಿನ್ನಮತೀಯ ಶಾಸಕರಿಗೆ ಟಾಂಗ್ ಕೊಡುವಂತೆ ಪ್ರತಿಕ್ರಿಯಿಸಿರುವ ಅವರು, ಸೂಟ್ ಕೇಸ್ ತಗೊಳ್ತಿದ್ದದ್ದು, ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದದ್ದು ನಿಜ. ಅವರೆಲ್ಲ ಈಗ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಉತ್ತರ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗಿದ್ದನ್ನು ಗಮನಿಸಿದ್ದೇನೆ. ಆ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದು ಕೂಡ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನ ಹುಣಸೂರಿನಲ್ಲಿ ಈಚೆಗೆ ನಡೆದ ಜೆಡಿಎಸ್ ಸಮಾವೇಶದಲ್ಲಿ ಪ್ರಜ್ವಲ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications