ಕೆಂಪೇಗೌಡ ಏರ್ಪೋರ್ಟ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಟ್ಯಾಕ್ಸಿ ಚಾಲಕ ಸಾವು
ಬೆಂಗಳೂರು, ಮಾರ್ಚ್ 31: ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಟ್ಯಾಕ್ಸಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Recommended Video
ಬಾಡಿಗೆ ದೊರೆಯದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಚನ್ನಪಟ್ಟಣ ಮೂಲದ ಪ್ರತಾಪ್ಕುಮಾರ್ (32) ಆತ್ಮಹತ್ಯೆ ಮಾಡಿಕೊಂಡ ಟ್ಯಾಕ್ಸಿ ಚಾಲಕ.
ಲಾಕ್ಡೌನ್ ನಂತರ ಬಾಡಿಗೆ ದರ ಕಡಿಮೆಯಿದ್ದು, ಟ್ಯಾಕ್ಸಿ ಹಾಗೂ ಕ್ಯಾಬ್ಗಳಿಗೆ ಪ್ರಸ್ತುತ ಒಂದು ಕಿ.ಮೀ.ಗೆ 24 ರೂ. ದರ ನಿಗದಿ ಮಾಡಬೇಕು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿತ್ತು.

ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ಸರಿಯಾಗಿ ಬಾಡಿಗೆ ಸಿಗುತ್ತಿರಲಿಲ್ಲ, ಹೀಗಾಗಿ ಖಿನ್ನತೆಗೆ ಒಳಗಾಗಿದ್ದ, ಮನೆಯ ನಿರ್ವಹಣೆ ಹೇಗೆ ಎಂಬ ಚಿಂತೆ ಕಾಡುತ್ತಿತ್ತು, ಏರ್ಪೋರ್ಟ್ ಸಮೀಪ ಟ್ಯಾಕ್ಸಿಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ, ಬಳಿಕ ಬೆಂಕಿ ನಂದಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಫೆ.1ರಂದು ಕ್ಯಾಬ್, ಟ್ಯಾಕ್ಸಿ, ಓಲಾ, ಊಬರ್ಗಳಿಗೂ ಅನ್ವಯವಾಗುವಂತೆ 1 ಕಿ.ಮೀ.ಗೆ 24 ರೂ.ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು . ಸರ್ಕಾರ ನಿಗದಿ ಮಾಡಿದ ದರವನ್ನು ಕೆಎಸ್ಟಿಡಿಸಿ, ಮೆರು ಮತ್ತು ಮೇಘ ಕಂಪನಿಯ ಕ್ಯಾಬ್ ಚಾಲಕರು ಅಳವಡಿಸಿಕೊಂಡಿದ್ದರು. ಜತೆಗೆ ಮೀಟರ್ ಹಾಕುವ ಮೂಲಕ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿತ್ತು.
ಆದರೆ, ಓಲಾ ಮತ್ತು ಉಬರ್ನ ವಾಹನಗಳು ವಿಮಾನ ನಿಲ್ದಾಣದಿಂದ ನಗರಕ್ಕೆ ಒಂದು ಕಿ.ಮೀ.ಗೆ ಕೇವಲ 9 ರೂ. ನಂತೆ ಓಡಿಸುತ್ತಿದ್ದವು. ನಗರದಿಂದ ವಾಪಸ್ ವಿಮಾನ ನಿಲ್ದಾಣಕ್ಕೆ ಬರುವಾಗ ಪ್ರತಿ ಕಿ.ಮೀ.ಗೆ 35ರೂ. ನಿಗದಿ ಮಾಡಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದರು.
ಹೀಗಾಗಿ ಸುಮಾರು 18 ಗಂಟೆ ಕಳೆದರೂ ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ಒಂದು ಬಾಡಿಗೆಯೂ ದೊರೆಯುತ್ತಿರಲಿಲ್ಲ. ಓಲಾ ಮತ್ತು ಊಬರ್ ದರ ಕಡಿಮೆ ಎಂದು ಪ್ರಯಾಣಿಕರು ಅತ್ತ ಹೋಗುತ್ತಿದ್ದರು ಎಂದು ಹೇಳಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications