ಯಾರೀತ ಡಿಕೆ ಶಿವಕುಮಾರ್ ಆಪ್ತ ದ್ವಾರಕನಾಥ್ ಗುರೂಜಿ?
ಬೆಂಗಳೂರು, ಆಗಸ್ಟ್ 02: ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಆಸ್ತಿ ಪಾಸ್ತಿ ಮೇಲೆ 20ಕ್ಕೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ ಸುದ್ದಿ ಈಗ ಎಲ್ಲರಿಗೂ ತಿಳಿದಿದೆ.
ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?
ಕರ್ನಾಟಕ ಪೊಲೀಸ್ ಪಡೆ ಬಳಸದೆ, ಸಿಆರ್ ಪಿಎಫ್ ಪಡೆ ಬಳಸಿ ದಾಳಿ ನಡೆಸಿದ್ದು ಎಲ್ಲರ ಹುಬ್ಬೇರಿಸಿತು. ಜತೆಗೆ ಡಿಕೆ ಶಿವಕುಮಾರ್ ಆಪ್ತ ದ್ವಾರಕನಾಥ್ ಗುರೂಜಿ ಮನೆ ಮೇಲೂ ದಾಳಿ ನಡೆಯಿತು. ಯಾರೀತ ದ್ವಾರಕನಾಥ್ ಮುಂದೆ ಓದಿ...
ಬೆಂಗಳೂರು, ಕನಕಪುರ, ಮೈಸೂರು, ದೆಹಲಿ, ಈಗಲ್ಟನ್ ರೆಸಾರ್ಟ್, ಡಿಕೆಶಿ ಒಡೆತನದ ಕಂಪನಿಗಳು, ಶಾಲೆ-ಕಾಲೇಜುಗಳ ಮೇಲೆ ದಾಳಿ ಜತೆಗೆ ಡಿಕೆಶಿ ಆಪ್ತ ದ್ವಾರಕನಾಥ್ ಗುರೂಜಿ ಮನೆ ಮೇಲೆ ದಾಳಿ ನಡೆಸಲಾಯಿತು. ಡಿಕೆ ಶಿವಕುಮಾರ್ ಅವರ ಸೋದರ ಡಿಕೆ ಸುರೇಶ್, ಡಿಕೆಶಿ ಅವರ ಕಾರು ಚಾಲಕ ನಾಗರಾಜು, ಆಪ್ತ ವಲಯದ ಪರಿಷತ್ ಸದಸ್ಯ ಎಸ್ ರವಿ, ಡಿಕೆಶಿ ಮಾವ ತಿಮ್ಮಪ್ಪ ಸೇರಿದಂತೆ ಡಿಕೆಶಿ ಬಳಗೆ ಬೆಳೆಯುತ್ತಲೇ ಇದೆ.
ದಾಳಿ ಬಗ್ಗೆ ಗುರೂಜಿಗೂ ಸುಳಿವಿರಲಿಲ್ಲ
ಬೆಂಗಳೂರಿನ ಆರ್ಟಿ ನಗರದಲ್ಲಿ ವಾಸವಿರುವ ದ್ವಾರಕನಾಥ್ ಗುರೂಜಿ ಸುಮಾರು 30 ವರ್ಷಗಳಿಂದ ಡಿಕೆ ಶಿವಕುಮಾರ್ ಅವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಡಿಕೆಶಿಗೆ ಸಲಹೆ ಸೂಚನೆ ನೀಡುತ್ತಿದ್ದ ಗುರೂಜಿಗೆ ಇವತ್ತು ತಮ್ಮ ಮನೆ ಮೇಲೆ ದಾಳಿಯಾಗುವುದು ತಿಳಿಯಲೇ ಇಲ್ಲ. ಡಿಕೆ ಶಿವಕುಮಾರ್ ಗೂ ಯಾವುದೇ ಸುಳಿವಿರಲಿಲ್ಲ. 80ಕ್ಕೂ ಅಧಿಕ ಅಧಿಕಾರಿಗಳು ಏಕಕಾಲಕ್ಕೆ 40ಕ್ಕೂ ಅಧಿಕ ಕಡೆ ದಾಳಿ ಮಾಡಿದರು.
ರಮ್ಯಾ ಸೊಸೆಯಾಗಬೇಕಿತ್ತು
ಮಾಜಿ ಸಂಸದೆ ಕಮ್ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನರನ್ನು ತಮ್ಮ ಮನೆ ಸೊಸೆ ಮಾಡಿಕೊಳ್ಳಲು ದ್ವಾರಕನಾಥ್ ಬಯಸಿದ್ದರು. ತಮ್ಮ ಮಗ ಡಾಕ್ಟರ್ ಗುಹಾ ಜತೆ ರಮ್ಯಾ ಮದುವೆ ಪ್ರಸ್ತಾಪವನ್ನು ರಮ್ಯಾ ಅವರ ತಂದೆ ಆರ್ ಟಿ ನಾರಾಯಣ್ ಅವರ ಮುಂದಿಟ್ಟಿದ್ದರು. ಆದರೆ, ನಾರಾಯಣ್ ಅವರ ನಿಧನದಿಂದಾಗಿ ಈ ವಿಷಯ ಅಲ್ಲಿಗೆ ನಿಂತು ಹೋಯಿತು.
ದ್ವಾರಕನಾಥ್ ಮೇಲೆ ಐಟಿ ಕಣ್ಣು
ದ್ವಾರಕನಾಥ್ ಅವರ ಮಕ್ಕಳಿಬ್ಬರು ಡಾಕ್ಟರ್ ಗಳಾಗಿದ್ದು ಹೊಸದಾಗಿ ಸೂಪರ್ ಸ್ಪೆಷಾಲಿಟಿ ಡಯಾಬಿಟಿಕ್ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಆಸ್ಪತ್ರೆ ನಿರ್ಮಾಣಕ್ಕೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಯಥೇಚ್ಛವಾಗಿ ಬಂಡವಾಳ ಹೂಡಿಕೆ ಮಾಡಿದ್ದರು. ದ್ವಾರಕನಾಥ್ ಅವರ ಪುತ್ರಿ ಈ ಹಿಂದೆ ರಾಜೀವ್ ಗಾಂಧಿ ವಿವಿಯ ಅಂಕಪಟ್ಟಿ ಹಗರಣದಲ್ಲಿ ಸಿಲುಕಿ ಅಮಾನತುಗೊಂಡಿದ್ದರು.
ಗಣ್ಯಾತಿಗಣ್ಯರಿಗೆ ಗುರೂಜಿ
ದಿವಂಗತ ಮುಖ್ಯಮಂತ್ರಿ ದೇವರಾಜ ಅರಸ್ ಅವರಿಗೂ ಆಪ್ತರಾಗಿದ್ದ ದ್ವಾರಕನಾಥ್ ಅವರು ಈ ಹಿಂದೆ ಕರಕುಶಲ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಗರಣದಲ್ಲಿ ಸಿಲುಕಿ ಅಮಾನತಾದ ಬಳಿಕ ಜ್ಯೋತಿಷಿಯಾಗಿ ಬಿಟ್ಟರು.ಇಂದಿರಾಗಾಂಧಿ, ವಿಲಾಸ್ ರಾವ್ ದೇಶ್ ಮುಖ್, ಸುಶೀಲ್ ಕುಮಾರ್ ಶಿಂಧೆ, ಅಮರೀಂದರ್ ಸಿಂಗ್, ನಟವರ್ ಸಿಂಗ್ ಮುಂತಾದವರು ದ್ವಾರಕನಾಥ್ ಅವರ ಸಲಹೆ ಪಡೆದುಕೊಳ್ಳುತ್ತಿದ್ದರು. ದೇವರಾಜ್ ಅರಸ್ ಅವರು ಇದೇ ದ್ವಾರಕನಾಥ್ ಮನೆಯಲ್ಲಿ ನಿಧನರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.