ಸಿದ್ದರಾಮಯ್ಯರಿಂದ ಬಿಜೆಪಿಗೆ ರಾಮರಾಜ್ಯದ ಪಾಠ
ಬೆಂಗಳೂರು, ಮಾರ್ಚ್ 16: ಕರ್ನಾಟಕ ಬಜೆಟ್ 2017ರ ಭಾಷಣದ ಆರಂಭದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮರಾಜ್ಯ ಅಂದರೆ ಏನು ಅಂತ ಹೇಳುವುದಕ್ಕಾಗಿಯೇ ಕೆಲ ನಿಮಿಷ ಮೀಸಲಿಟ್ಟರು. ಅಷ್ಟೇ ಅಲ್ಲ, ಬಿಜೆಪಿಯವರನ್ನು ಗುರಿ ಮಾಡಿಕೊಂಡು ಒಂದಿಷ್ಟು ಬಾಣಗಳನ್ನೂ ತೂರಿಬಿಟ್ಟರು.
ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ನ ವಿಧಾನಸಭೆ ಚುನಾವಣೆ ಫಲಿತಾಂಶ ಈ ಸಲದ ಕರ್ನಾಟಕದ ಬಜೆಟ್ ಮೇಲೆ ಪ್ರಭಾವ ಬೀರಿರುವುದು ಹೌದು. ಜತೆಗೆ 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿಯೇ ತಮ್ಮ ನೇರ ಪ್ರತಿಸ್ಪರ್ಧಿ ಎಂಬುದು ಸಿದ್ದರಾಮಯ್ಯ ಅವರಿಗೆ ಖಾತ್ರಿ ಆದಂತಿದೆ. ಅಂದಹಾಗೆ ಸಿಎಂ ಹೇಳಿದ ರಾಮರಾಜ್ಯದ ವಿವರಣೆ ಏನು ಗೊತ್ತಾ? "ರಾಮರಾಜ್ಯ ಅಂದರೆ ಭ್ರಷ್ಟಾಚಾರಮುಕ್ತ ಸಮಾಜ. ಸರ್ವತೋಮುಖ ಅಭಿವೃದ್ಧಿಯ ಜತೆಗೆ ಹಸಿವುಮುಕ್ತವಾಗಿರಬೇಕು.[ಸಮೀಕ್ಷೆ: 2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನ!]
"ರಾಮರಾಜ್ಯ ಅಂದರೆ ಶೋಷಣೆಮುಕ್ತ ಸಮಾಜ. ಜತೆಗೆ ಅಭಿವೃದ್ಧಿ ಮತ್ತು ಆಳವಾಗಿ ಬೆಳೆದ ಸೌಹಾರ್ದ" ಎಂದರು. ಅಷ್ಟಕ್ಕೆ ಸುಮ್ಮನಾಗದೆ, "ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರಿಂದ ರಾಮರಾಜ್ಯದ ನಿರ್ಮಾಣ ಸಾಧ್ಯವಿಲ್ಲ" ಎಂದು ಟಾಂಗ್ ಕೂಡ ಕೊಟ್ಟರು. ಸಿದ್ದರಾಮಯ್ಯನವರು ಬುಧವಾರ ಬಜೆಟ್ ಮಂಡಿಸಿದರು. "ಇದು ಚುನಾವಣೆ ಬಜೆಟ್" ಎಂಬುದು ಹಲವರ ಅಭಿಪ್ರಾಯ.