Carpool Service: ಏನಿದು ಕಾರ್ಪೂಲ್ ಸೇವೆ? ಬ್ಯಾನ್ ಮಾಡುದ್ರೆ ಬೆಂಗಳೂರು ಟ್ರಾಫಿಕ್ ಮತ್ತಷ್ಟು ಹೆಚ್ಚಾಗುತ್ತೆ: ಯಾಕೆ ಗೊತ್ತಾ?
ಬೆಂಗಳೂರಿನಲ್ಲಿ ಕಾರ್ ಪೂಲ್ ಸೇವೆಯನ್ನು ಬ್ಯಾನ್ ಮಾಡಬೇಕು ಎನ್ನುವ ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ಭಾರಿ ವಿರೋಧ ವ್ಯಕ್ತವಾಗಿದ್ದು, ಬ್ಯಾನ್ ಮಾಡಲ್ಲ ಆದರೆ ಅಗತ್ಯ ಅನುಮತಿ ಪಡೆಯಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಕಾರ್ ಪೂಲ್ ಸೇವೆ ಬ್ಯಾನ್ ಮಾಡಹೊರಟಿದ್ದ ಸರ್ಕಾರದ ನಿರ್ಧಾರ ಬೆಂಗಳೂರಿನ ಉದ್ಯೋಗಿಗಳು ಅದರಲ್ಲೂ ಐಟಿ ಉದ್ಯೋಗಿಗಳ ನಿದ್ದೆಗೆಡಿಸಿತ್ತು. ಕಾರ್ ಪೂಲ್ ಸೇವೆ ನಿಷೇಧಿಸದಂತೆ ಸಾಕಷ್ಟು ಜನ ಒತ್ತಾಯ ಮಾಡಿದ್ದರು, ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್ ಮಾಡಿ, ಇದರಿಂದ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.

ಕರ್ನಾಟಕದ ಸಾರಿಗೆ ಇಲಾಖೆಯು ವಾಣಿಜ್ಯ ಪ್ರಯಾಣದ ಉದ್ದೇಶಗಳಿಗಾಗಿ ವೈಟ್ಬೋರ್ಡ್ ವಾಹನಗಳ ಬಳಕೆಯನ್ನು ಕಾನೂನು ಬಾಹಿರ ಎಂದು ಹೇಳಿತ್ತು. ಕಾರ್ಪೂಲಿಂಗ್ ಸೇವೆಗಳನ್ನು ನಿರ್ವಹಿಸುವುದು ಕಂಡುಬಂದಲ್ಲಿ ರೂ 5,000 ರಿಂದ ರೂ 10,000 ವರೆಗೆ ದಂಡವನ್ನು ವಿಧಿಸಬಹುದು ಎಂದು ಹೇಳಿತ್ತು. ಸದ್ಯ ಈ ಆದೇಶಕ್ಕೆ ಬ್ರೇಕ್ ಬಿದ್ದಿದೆ. ಸೆಪ್ಟೆಂಬರ್ 27 ರಂದು ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಮೆಗಾ ಟ್ರಾಫಿಕ್ ದಟ್ಟಣೆಯ ನಂತರ ಕಾರ್ ಪೂಲಿಂಗ್ ವಿಚಾರ ಮುನ್ನಲೆಗೆ ಬಂದಿತ್ತು.
ಬ್ಲಾಬ್ಲಾ ಕಾರ್, ಕ್ವಿಕ್ರೈಡ್, ರೈಡ್ಶೇರ್, ಕಮ್ಯೂಟ್ ಈಸಿ ಮತ್ತು ಕಾರ್ಪೂಲ್ ಅಡ್ಡಾದಂತಹ ಅಪ್ಲಿಕೇಶನ್ಗಳು ಕಾರ್ಪೂಲ್ ಸೇವೆಗಳನ್ನು ನೀಡುತ್ತಿವೆ, ಅವರು ಸಂಪೂರ್ಣ ಕ್ಯಾಬ್ ಅನ್ನು ಬುಕ್ ಮಾಡಿದ್ದರೆ ಅವರು ಪಾವತಿಸುವ ಹಣದ ಒಂದು ಭಾಗಕ್ಕೆ ಪ್ರಯಾಣಿಕರಿಗಾಗಿ ರೈಡ್ ಹಂಚಿಕೊಳ್ಳಲು ಸಿದ್ಧರಿದ್ದಾರೆ.
ಏನಿದು ಕಾರ್ಪೂಲ್ ಸೇವೆ?
ಇದೊಂದು ರೀತಿಯ ಸಾರಿಗೆ ವ್ಯವಸ್ಥೆಯಾಗಿದೆ. ಅನೇಕ ವ್ಯಕ್ತಿಗಳು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಅಥವಾ ಸಾಮಾನ್ಯ ಗಮ್ಯಸ್ಥಾನಕ್ಕೆ ಪ್ರಯಾಣಿಸಲು ಒಂದೇ ವಾಹನವನ್ನು ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ರಸ್ತೆಯಲ್ಲಿ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಲು, ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು ಮತ್ತು ಪ್ರಯಾಣಿಕರಲ್ಲಿ ಹಂಚಿಕೆಯ ಸವಾರಿಗಳನ್ನು ಉತ್ತೇಜಿಸುವ ಮೂಲಕ ಪರಿಸರದ ಪ್ರಭಾವವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.
ಕಾರ್ಪೂಲಿಂಗ್ ಅನ್ನು ಕಾರ್ಪೂಲ್ ಅಪ್ಲಿಕೇಶನ್ಗಳು, ಆನ್ಲೈನ್ ಪ್ಲಾಟ್ಫಾರ್ಮ್ಗಳು ಅಥವಾ ಸ್ನೇಹಿತರು ಅಥವಾ ಸಹೋದ್ಯೋಗಿಗಳ ನಡುವಿನ ಅನೌಪಚಾರಿಕ ಒಪ್ಪಂದಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಆಯೋಜಿಸಬಹುದು.
ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಇದು ವರದಾನವಾಗಿದೆ. ಆಟೋ, ಒಲಾ, ಉಬರ್, ಟ್ಯಾಕ್ಸಿ ದರ ಹೆಚ್ಚಿರುವ ಕಾರಣ, 4-5 ಉದ್ಯೋಗಿಗಳು ಒಂದು ಕಾರಿನಲ್ಲಿ ವೆಚ್ಚವನ್ನು ಭರಿಸಿಕೊಂಡು ಪ್ರಯಾಣ ಮಾಡುತ್ತಾರೆ. ಟ್ರಾಫಿಕ್ ಕಡಿಮೆ ಮಾಡಲು ಕೂಡ ಇದು ಸಹಕಾರಿಯಾಗಿದೆ.
ಕಾರ್ಪೂಲ್ ಯಾಕೆ ಮುಖ್ಯ
ಐಟಿ ಅಥವಾ ಇನ್ಯಾವುದೇ ವಲಯದ ಉದ್ಯೋಗಿಗಳು ಹಣ ಮತ್ತು ಸಮಯ ಉಳಿತಾಯ ಮಾಡಲು ಕಾರ್ ಪೂಲ್ ಸೇವೆಯನ್ನು ಹೆಚ್ಚಾಗಿ ಬಳಸುತ್ತಾರೆ. ಹಲವರು ಹೇಳುವ ಪ್ರಕಾರ, ಆಟೋ, ಕ್ಯಾಬ್ ಬಾಡಿಗೆ ದರ ಗಗನಕ್ಕೇರಿದ್ದು, ಒಂದಕ್ಕೆ ಎರಡರಷ್ಟು ಕೇಳುವುದು, ಓಲಾ, ಉಬರ್ ಗಳಲ್ಲಿ ರೈಡ್ ಕ್ಯಾನ್ಸಲ್ ಮಾಡುವುದು, ಮಳೆ ಸಂದರ್ಭದಲ್ಲಿ ದುಪ್ಪಟ್ಟು ಬಾಡಿಗೆ ಇನ್ನೂ ಹಲವು ವಿಚಾರಗಳಿಂದ ಇಂದು ಕಾರ್ ಪೂಲ್ ಅನ್ನುವ ಬಳಸಲು ಕಾರಣವಾಗಿದೆ.
ಕಾರ್ಪೂಲಿಂಗ್ಗೆ ಯಾವುದೇ ನಿಷೇಧವಿಲ್ಲ ಎಂದು ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದರೂ, ಟೈಮ್ಸ್ ನೌ ವರದಿ ಮಾಡಿರುವ ಪ್ರಕಾರ, ಆ್ಯಪ್ಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಅಗತ್ಯ ಅನುಮತಿಗಳನ್ನು ಪಡೆಯಬೇಕೆಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ ಪೂಲಿಂಗ್ ಅಪ್ಲಿಕೇಶನ್ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಕ್ಯಾಬ್ಗಳು ಮತ್ತು ಆಟೋ ಅಸೋಸಿಯೇಷನ್ಗಳು ಒತ್ತಾಯ ಮಾಡಿದ್ದವು.












Click it and Unblock the Notifications