ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಭಾಷಣ ಮಾಡುತ್ತಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆ ಈಗ ಸಿಡಿ ರೂಪದಲ್ಲಿ ಸುದ್ದಿ ವಾಹಿನಿಗಳ ಮುಂದಿಡಲಾಗಿದೆ.
ಬೆಂಗಳೂರು, ಫೆಬ್ರವರಿ 13: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾನುವಾರದಂದು ಕಾರ್ಯಕಾರಿಣಿ ಸಭೆ ನಡೆಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಭಾಷಣ ಮಾಡುತ್ತಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆ ಈಗ ಸಿಡಿ ರೂಪದಲ್ಲಿ ಸುದ್ದಿ ವಾಹಿನಿಗಳ ಮುಂದಿಡಲಾಗಿದೆ. ಈ ಸಂಭಾಷಣೆಯಲ್ಲಿ ಏನಿದೆ? ಇದು ನಿಜಕ್ಕೂ ಕಪ್ಪ ಕಾಣಿಕೆ ವಿಷಯಕ್ಕೆ ಸಂಬಂಧಿಸಿದ್ದೇ? ಮುಂದೆ ಓದಿ..
ಬಿಜೆಪಿ ಹೈಕಮಾಂಡ್ ಗೆ ಕಪ್ಪ ನೀಡಿರುವ ವಿಚಾರವನ್ನು ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಡಿ ಇಲ್ಲಿದೆ ಎಂದು ವಿಎಸ್ ಉಗ್ರಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಬಿಡುಗಡೆಗೊಳಿಸಿದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಬಂಡವಾಳ 'ಡೈರಿ' ಯಲ್ಲಿ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಾಂಬ್ ಸಿಡಿಸಿದ ಬಳಿಕ, ಕಾಂಗ್ರೆಸ್ ಪ್ರತಿ ಬಾಂಬ್ ಸಿಡಿಸಿದೆ.

ಆದರೆ, ಎರಡು ಕೂಡಾ ಹೆಚ್ಚಿನ ಪ್ರಮಾಣದ ಹಾನಿ ಉಂಟು ಮಾಡದೆ ತೋರಿಕೆಯ ತಂತ್ರಗಾರಿಕೆಯಾಗಿರುವುದು ವಿಪರ್ಯಾಸ. ಸಾವಿರಾರು ಕೋಟಿ ರು ಅವ್ಯವಹಾರ ಬಯಳಿಗೆಳೆಯುತ್ತೇನೆ ಎಂದು ಘೋಷಿಸಿದ್ದ ಯಡಿಯೂರಪ್ಪ ಅವರು ಕೊನೆಗೆ 65 ಕೋಟಿ ರು ಮೊತ್ತಕ್ಕಿಳಿದರು. ಎಲ್ಲಾ ಡಿಟೈಲ್ಸ್ ಎಂಎಲ್ಸಿ ಗೋವಿಂದರಾಜುಗೆ ಗೊತ್ತು. ಐಟಿ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಎಲ್ಲವೂ ಇದೆ ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ವಿಎಸ್ ಉಗ್ರಪ್ಪ, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿಯನ್ನು ಬಿಡುಗಡೆ ಮಾಡಿದರು.
ಸಂಭಾಷಣೆಯಲ್ಲಿ ಏನಿದೆ?:
ಅನಂತ್ ಕುಮಾರ್: ಅವರೂ ಕೊಟ್ಟಿದ್ದಾರೆ, ನಾನೂ ಕೊಟ್ಟಿದ್ದೀನಿ ಅಂದ ಹಾಗೆ ಆಯ್ತು ಸಿಎಂ.
ಬಿಎಸ್ ಯಡಿಯೂರಪ್ಪ: (ನಗು)
ಅನಂತ್ ಕುಮಾರ್: ನೀವು ನಾವಿದ್ದಾಗ ಹೈಕಮಾಂಡಿಗೆ ಕೊಟ್ಟಿದ್ದೀರಿ. ನಾನೂ ಕೊಟ್ಟಿದ್ದೀನಿ. ಆದರೆ, ಸಾವಿರ ಕೋಟಿ ಎಲ್ಲ ಕೊಟ್ಟಿಲ್ಲ ಅಂತೆ. (ಇಬ್ಬರೂ ಜೋರಾಗಿ ನಗು)
ಅನಂತ್ ಕುಮಾರ್: ನೀವು ಆಗ ಕೊಟ್ಟಿದ್ರಲ್ಲ, ಅದಕ್ಕೆ ಇವರೂ ಕೊಡ್ತಿದ್ದಾರಂತೆ. (ಇಬ್ಬರೂ ಜೋರಾಗಿ ನಗು)
ಅನಂತ್ ಕುಮಾರ್: ಆದ್ರೆ ಕೊಟ್ಟಿರೋದನ್ನ ಒಪ್ಪಿಕೊಂಡಾಯ್ತಲ್ಲ.
ಯಡಿಯೂರಪ್ಪ: ಆದ್ರೆ ಕೊಟ್ಟಿರೋದ್ನ ಯಾರಾದ್ರೂ ಬರ್ಕೊಂಡಿರ್ತಾರಾ? (ನಗುತ್ತಾ)
ಅನಂತ್ ಕುಮಾರ್: (ಜೋರಾಗಿ ನಗುತ್ತಾ) ಹೆಸರಿಗೆ ಕಲ್ಲು ಬಿಸಾಡಿದ್ರೆ ಹತ್ತುಕೊಳ್ಳುತ್ತೆ. ಸಿಎಂ ಸಾವಿರ ಕೋಟಿ ಕೊಟ್ಟಿಲ್ಲಾಂತ ಈಗ ಯಾರೂ ಒಪ್ಪಕೊಳ್ಳಲ್ಲ. ಎಲ್ಲರೂ ಸಿಎಂ ಹಣ ಕೊಟ್ಟಿದ್ದಾನೆ ಅಂತನೇ ತಿಳ್ಕೊತಾರೆ.
ಯಡಿಯೂರಪ್ಪ: ಡೈರಿ ಆಚೆ ಬರಲಿ. ಅನಂತ್: ಚುನಾವಣೆ ತನಕ ಹೀಗೆ ಉತ್ತರ ಕೊಡುತ್ತಾ ತಿರುಗಾಡಲಿ.











Click it and Unblock the Notifications