ವಿಧಾನಸಭಾ ಚುನಾವಣೆ 2018: ಟಿಕೆಟ್ ಕೈ ತಪ್ಪಿದ ಆಕಾಂಕ್ಷಿಗಳ ನಡೆ ಯಾವ ಕಡೆ?
ದೇವನಹಳ್ಳಿ, ಏಪ್ರಿಲ್ 23: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಾ ಮುಂದು, ನಾ ಮುಂದು ಎಂದು ರಾಜಕಾರಣಿಗಳು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಟಿಕೆಟ್ ಗಾಗಿ ಕೆಲ ಕ್ಷೇತ್ರಗಳಲ್ಲಿ ಸ್ಥಳೀಯರು ಫೈಟ್ ನಡೆಸಿದರೆ, ಇನ್ನು ಕೆಲ ಕ್ಷೇತ್ರದಲ್ಲಿ ಹೊರಗಡೆಯಿಂದ ಬಂದಂತಹ ಆಕಾಂಕ್ಷಿಗಳು ಕಾದಾಟ ನಡೆಸುತ್ತಾರೆ. ಕೊನೆಯಲ್ಲಿ ವಿಜಯ ಸಾಧಿಸಿದ ಅಭ್ಯರ್ಥಿಗಳು ಚುನಾವಣೆ ಅಖಾಡಕ್ಕೆ ಸಿದ್ಧರಾಗುತ್ತಾರೆ. ಆದರೆ ಟಿಕೆಟ್ ಕೈ ತಪ್ಪಿದ ಆಕಾಂಕ್ಷಿಗಳ ನಿಲುವು ಬೇರೆಯದೇ ಇರುತ್ತದೆ.
ಕ್ಷೇತ್ರ ಪರಿಚಯ : ತುಂಡು ಭೂಮಿಗಿಲ್ಲಿ ಬಂಗಾರದ ಬೆಲೆ!
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಜೋರಾಗಿಯೇ ಇತ್ತು. ಅದರಲ್ಲೂ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಅಗ್ರ ಸ್ಥಾನ ಪಡೆದುಕೊಂಡಿತ್ತು. ಇದೀಗ ಮೂರೂ ಪಕ್ಷಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. ಕಾಂಗ್ರೆಸ್ನಿಂದ ಮಾಜಿ ಶಾಸಕ ವೆಂಕಟಸ್ವಾಮಿ ಸ್ಪರ್ಧೆಗೆ ಸನ್ನದ್ಧರಾದರೆ, ಬಿಜೆಪಿಯಿಂದ ಎರಡನೇ ಬಾರಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಕೆ.ನಾಗೇಶ್ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಜೆಡಿಎಸ್ ನಲ್ಲಿ 2013 ರಲ್ಲಿ 1942 ಮತಗಳಿಂದ ಗೆಲುವು ಸಾಧಿಸಿದ್ದ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಎರಡನೇ ಬಾರಿಗೆ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ.
ಆಕಾಂಕ್ಷಿಗಳ ದಂಡೇ ಇತ್ತು...
ಪ್ರತಿ ವರ್ಷ ದೇವನಹಳ್ಳಿ ವಿಧಾನಸಭಾ ಎಸ್ಸಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ನಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳ ದಂಡು ಹುಟ್ಟಿಕೊಳ್ಳುತ್ತದೆ. ಈ ಬಾರಿ ಅಖಾಡಕ್ಕೆ ಇಳಿಯಲು ಕೆಪಿಸಿಸಿಯಲ್ಲಿ 18 ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ವೆಂಕಟಸ್ವಾಮಿ ಮತ್ತು ಮಾರುತಿ ಹೆಸರನ್ನು ಶಾರ್ಟ್ ಲಿಸ್ಟ್ ನಲ್ಲಿ ಇಡಲಾಗಿತ್ತು. ಇದರಲ್ಲಿ ಮಾಜಿ ಶಾಸಕ ಮುನಿ ನರಸಿಂಹಯ್ಯ ಅವರು ಸಹ ತೆರೆಮರೆಯಲ್ಲಿ ಟಿಕೆಟ್ ಗೆ ಕಸರತ್ತು ನಡೆಸುತ್ತಿದ್ದರು. ಕಾಂಗ್ರೆಸ್ ಹೈಕಮಾಂಡ್ ಇದೀಗ ವೆಂಕಟಸ್ವಾಮಿಗೆ ಟಿಕೇಟ್ ನೀಡಿದೆ. ಇದರಿಂದ ಮುನಿಸಿಕೊಂಡಿರುವ ಛಲವಾದಿ ನಾರಾಯಣಸ್ವಾಮಿ 40 ವರ್ಷದ ಕಾಂಗ್ರೆಸ್ ಪ್ರಯಾಣಕ್ಕೆ ವಿರಾಮ ಹೇಳಿ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಕಾಂಗ್ರೆಸ್ ನ ಇಬ್ಬರು ಅಭ್ಯರ್ಥಿಗಳ ನಡೆ ನಿಗೂಢ
ಛಲವಾದಿ ನಾರಾಯಣಸ್ವಾಮಿ ದೇವನಹಳ್ಳಿ ಕ್ಷೇತ್ರಕ್ಕೆ ಒಂದು ವರ್ಷದ ಹಿಂದೆ ಆಗಮಿಸಿ ಟಿಕೆಟ್ ಲಾಬಿ ನಡೆಸುವುರೊಂದಿಗೆ ಅವರದ್ದೇ ಆದಂತಹ ಬಣ ಹೊಂದಿದ್ದರು. ಇದೀಗ ಅವರ ಬಣದ ಮುಖಂಡರು ಕಾಂಗ್ರೆಸ್ನಲ್ಲಿ ಮುಂದುವರಿಯುತ್ತಾರೋ ಅಥವಾ ಬಿಜೆಪಿಗೆ ಬೆಂಬಲ ನೀಡುತ್ತರೋ ನೋಡಬೇಕಾಗಿದೆ. ಎಸ್ಸಿ ಸಮುದಾಯದ ಬಲ ಜನಾಂಗದಲ್ಲಿ ನಾರಾಯಣಸ್ವಾಮಿ ಪ್ರಬಲ ನಾಯಕರಾಗಿದ್ದು, ಕ್ಷೇತ್ರದಲ್ಲಿ ಬಲ ಜನಾಂಗದ ಮತಗಳು ಹೆಚ್ಚಾಗಿವೆ. ಇದರಿಂದ ಕಾಂಗ್ರೆಸ್ ಗೆ ಸ್ವಲ್ಪ ಮಟ್ಟಿಗೆ ಹೊಡೆತ ಬೀಳಬಹುದು.
ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಹ ಕಾಂಗ್ರೆಸ್ ಆಕಾಂಕ್ಷಿಗಳ ಲಿಸ್ಟ್ ನಲ್ಲಿ ಬಲಿಷ್ಠವಾಗಿದ್ದರು. ಇವರ ತಾಯಿ ತಾಲೂಕು ಪಂಚಾಯಿತಿ ಸದಸ್ಯರು ಹೌದು. ಹಾಗಾಗಿ ಟಿಕೆಟ್ ಕೈ ತಪ್ಪಿದರೂ ಕಾಂಗ್ರೆಸ್ನಲ್ಲೇ ಮುಂದುವರಿಯುವುದು ಗೋಚರಿಸುತ್ತಿದೆ. ಬಂಡಾಯ ಹೊಗೆಯಿಂದ ದೂರ ಉಳಿದು ಪಕ್ಷದ ಅಭ್ಯರ್ಥಿಗೆ ಸಹಾಯ ಮಾಡುತ್ತಾರೆ ಎಂಬುದು ಮುಖಂಡರ ಮಾತು.
ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು, ಎರಡು ಬಾರಿ ಸೋಲು ಅನುಭವಿಸಿದ್ದ ಮಾಜಿ ಶಾಸಕ ಮುನಿನರಸಿಂಹಯ್ಯ ಸಹ ಟಿಕೆಟ್ ಗಾಗಿ ಓಡಾಟ ನಡೆಸಿದ್ದರು. ಶಾಸಕ ಸ್ಥಾನದಲ್ಲಿದ್ದಂತಹ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಕ್ಷೇತ್ರದಲ್ಲಿ ಎಸ್ಸಿ ಸಮುದಾಯ ಸೇರಿದಂತೆ ಎಲ್ಲ ಜನಾಂಗಗಳಲ್ಲಿ ಮತದಾರರನ್ನು ಹೊಂದಿದ್ದರು. ಕಳೆದ ಬಾರಿ ಟಿಕೆಟ್ ಕೈ ತಪ್ಪಿ ಹೋಗಿತ್ತು. ಆಗ ಪಕ್ಷದ ಅಭ್ಯರ್ಥಿ ವೆಂಕಟಸ್ವಾಮಿಗೆ ಬೆಂಬಲ ಸೂಚಿಸಿದ್ದರು. ಈ ಬಾರಿ ಟಿಕೆಟ್ ತಪ್ಪಿದ್ದರಿಂದ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದ್ದು, ಸದ್ಯಕ್ಕೆ ಅವರ ನಡೆ ನಿಗೂಢವಾಗಿದೆ.
ಬಿಜೆಪಿ ಅಕೌಂಟ್ ತೆರೆಯದಿದ್ದರೂ ಸ್ಪರ್ಧೆಗೆ ಸದಾ ಸಿದ್ಧ
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿವರೆಗೆ ಬಿಜೆಪಿ ಅಕೌಂಟ್ ತೆರೆದಿಲ್ಲ. ಆದರೂ ಬಿಜೆಪಿಯಿಂದ ಸ್ಪರ್ಧೆ ನಡೆಸಲು ಪ್ರತಿ ವರ್ಷ ಮೂರು ಜನ ಆಕಾಂಕ್ಷಿಗಳು ಚುನಾವಣೆ ಸಂದರ್ಭದಲ್ಲಿ ಸಿದ್ಧರಾಗುತ್ತಾರೆ. ಈ ಬಾರಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಕೆ.ನಾಗೇಶ್, ಮಾಜಿ ಶಾಸಕ ಚಂದ್ರಣ್ಣ, ಡಿ.ಆರ್ ನಾರಾಯಣಸ್ವಾಮಿ ಆಕಾಂಕ್ಷಿಗಳಾಗಿದ್ದರು. ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಕೆ.ನಾಗೇಶ್ ಟಿಕೆಟ್ ತನ್ನದಾಗಿಸಿಕೊಂಡಿದ್ದಾರೆ.
ಆದರೆ ಎರಡು ವರ್ಷದಿಂದ ಡಿ.ಆರ್. ನಾರಾಯಣಸ್ವಾಮಿ ಪಕ್ಷ ಸಂಘಟನೆಗಾಗಿ ನಿರಂತರವಾಗಿ ದುಡಿಯುತ್ತಿದ್ದರು. ಈ ಬಾರಿ ಡಿ.ಆರ್ ನಾರಾಯಣಸ್ವಾಮಿ ಗೆ ಗ್ಯಾರಂಟಿ ಟಿಕೆಟ್ ಎಂದು ಎಲ್ಲರು ತಿಳಿದುಕೊಂಡಿದ್ದರು. ಕಳೆದ ಬಾರಿಯೂ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬಿಎಸ್ಆರ್ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡರು. ಇದೀಗ ಕೆ.ನಾಗೇಶ್ ಗೆ ಟಿಕೆಟ್ ಅಂತಿಮವಾದರೂ ಅಭ್ಯರ್ಥಿ ಬದಲಾವಣೆ ಆಗುತ್ತದೆ ಎಂಬುದು ಬಿಜೆಪಿ ಮುಖಂಡರ ಅಭಿಪ್ರಾಯ.
ಕ್ಷೇತ್ರದಲ್ಲಿ ಜೆಡಿಎಸ್ ನಿಂದ 4 ಬಾರಿ ಸ್ಪರ್ಧೆ ನಡೆಸಿ, ಎರಡು ಬಾರಿ ಸೋಲು ಕಂಡು, ಎರಡು ಬಾರಿ ಗೆಲುವು ಸಾಧಿಸಿದ್ದಾರೆ. 2013 ರಲ್ಲಿ ಜೆಡಿಎಸ್ ನಲ್ಲಿ ಟಿಕೆಟ್ ಮಿಸ್ ಆದ ಕಾರಣ ಬಿಜೆಪಿಯಿಂದ ಸ್ಪರ್ಧೆ ಮಾಡಿ 9 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ನಡೆಸಲು ಕಾತುರದಿಂದ ತೆರೆಯ ಹಿಂದೆ ಕಸರತ್ತು ನಡೆಸುತ್ತಿದ್ದರು. ಟಿಕೆಟ್ ಲಭಿಸಿದ ಕಾರಣ ಮತ್ತೆ ಜೆಡಿಎಸ್ ಗೆ ಸೇರ್ಪಡೆ ಆಗಬಹುದು ಅಥವಾ ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ಮುಂದುವರೆಯಬಹುದು.
ಜೆಡಿಎಸ್ ನಾರಾಯಣಸ್ವಾಮಿ ಮನ ಒಲಿಸುವುದೇ?
ಜೆಡಿಎಸ್ ಅಭ್ಯರ್ಥಿ ಯಾರೆಂಬ ಕುತೂಹಲ ಬಹಳ ಮನೆ ಮಾಡಿತ್ತು. ನಾಮಪತ್ರ ಸಲ್ಲಿಕೆ ದಿನ ಪ್ರಾರಂಭವಾದ ನಂತರ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಬಿ ಫಾರಂ ಪಡೆದುಕೊಂಡರು. ಪಕ್ಷದಲ್ಲಿ ನಿಸರ್ಗ ನಾರಾಯಣಸ್ವಾಮಿ ಬಲಿಷ್ಠ ಆಕಾಂಕ್ಷಿ ಆಗಿದ್ದರು. ಇದೀಗ ಟಿಕೆಟ್ ನಿಂದ ವಂಚಿತರಾದ ಕಾರಣ ಜೆಡಿಎಸ್ ನಿಂದ ಬಂಡಾಯವೆದ್ದು, ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಕಾರ್ಯಕರ್ತರೊಂದಿಗೆ ಒಂದು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ. ಇಂದು ಸೋಮವಾರ (ಏಪ್ರಿಲ್ 23) ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಯೋಜನೆ ರೂಪಿಸಲಾಗಿದೆ. ಮತ್ತೊಂದೆಡೆ ನಾರಾಯಣಸ್ವಾಮಿ ಅವರ ಮನವೊಲಿಸಲು ಜೆಡಿಎಸ್ ಮುಖಂಡರು ಪ್ರಯತ್ನ ಪಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.