Bengaluru Heavy Rain Forecast: ಬೆಂಗಳೂರಿಗರ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆ: ಇಂದು ಕೂಡ ವರುಣನ ಅರ್ಭಟ
ಬೆಂಗಳೂರು ಮೇ 8: ಬೆಂಗಳೂರು ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗಿದ್ದು, ಇಂದು ಬೆಳಿಗ್ಗೆ (ಮೇ8) ಕೂಡ ನಗರದ ಕೆಲ ಭಾಗಗಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಇದರಿಂದ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನ ಮತ್ತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮಾತ್ರವಲ್ಲದೆ ಇಂದು ರಾತ್ರಿಯೊಳಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಧಿಕ ಮಳೆಯಾಗುವ ಸೂಚನೆ ಇದ್ದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ಮುಂದಿನ ಒಂದು ವಾರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ಬುಧವಾರದಿಂದ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಮಳೆ ವ್ಯಾಪಿಸಲಿದ್ದು, ಸತತ ಏಳು ದಿನ ಮಳೆಯಾಗಲಿದೆ.

ಮೇ 13 ಹಾಗೂ 14ರಂದು ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ. ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬುಧವಾರದಿಂದಲೇ ಮಳೆ ಆರಂಭಗೊಳ್ಳಲಿದ್ದು, ನಂತರದ ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಮಳೆ ವ್ಯಾಪಿಸಲಿದೆ. ಮುಂದಿನ 48 ಗಂಟೆಯಲ್ಲಿ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಉಷ್ಣ ಅಲೆ ಇರಲಿದೆ.
ಮಳೆಯೊಂದಿಗೆ ಮುಂದಿನ ಎರಡು ದಿನ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಏರಿಕೆಯ ಭಾಸವಾಗಲಿದ್ದು, ಸೆಕೆಯೂ ಇರಲಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡು ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ನಂಜನಗೂಡಿನಲ್ಲಿ ಅತಿ ಹೆಚ್ಚು 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಕೃಷ್ಣರಾಜಸಾಗರದಲ್ಲಿ 5 ಸೆಂ.ಮೀ, ಚಾಮರಾಜನಗರ, ಮಂಡ್ಯದ ಹೊನಕೆರೆಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಇಂದೂ ಕೂಡ ಮಳೆಯಾಗುತ್ತಾ? ಹವಾಮಾನ ಇಲಾಖೆ ಏನು ಹೇಳುತ್ತೆ ನೋಡೋಣ.
ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮಳೆ
ಹೌದು... ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದ್ದು ವಾತಾವರಣ ಕೂಲ್ ಕೂಲ್ ಆಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದ್ದು ವಾತಾವರಣ ಬದಲಾಗಿದೆ. ಬಿಸಿಲಿನ ಝಳ ಕಡಿಮೆಯಾಗಿದೆ. ಇಂದು ಬೆಳಗ್ಗೆ ಕೂಡ ಬೆಂಗಳೂರಿನಲ್ಲಿ ಮಳೆಯಾಗಿದೆ. ಜಯನಗರ, ಜೆಪಿನಗರ, ಎಚ್ಎಸ್ಆರ್, ಬಿಟಿಎಂ ಲೇಔಟ್, ಬಿಎಸ್ಕೆ, ಅಂಜನಾಪುರ, ಕುಮಾರಸ್ವಾಮಿ ಲೇಔಟ್, ಕೆಆರ್ಪುರ, ಉತ್ತರಹಳ್ಳಿ ಸುತ್ತಮುತ್ತ ಮಳೆಯಾಗಿದೆ.

ಅಲ್ಲದೆ ಬ್ರೂಕ್ಫೀಲ್ಡ್, ಮಹದೇವಪುರ, ಬೆಂಗಳೂರು ನಗರದ ಪೂರ್ವ ಭಾಗದ ವರ್ತೂರು, ವೈಟ್ಫೀಲ್ಡ್ನಿಂದ ಕಲ್ಯಾಣನಗರ, ಮಾರತ್ತಹಳ್ಳಿ, ಬೊಮ್ಮನಹಳ್ಳಿ, ಬೊಮ್ಮಸಂದ್ರ, ಅರೆಕೆರೆ ಮತ್ತು ಬೇಗೂರು, ಎಲೆಕ್ಟ್ರಾನಿಕ್ ಸಿಟಿಯಲ್ಲೂ ಬೆಳಗ್ಗೆ ಮಳೆಯ ಸಿಂಚನವಾಗಿದೆ.
ಬೆಂಗಳೂರಿನಲ್ಲಿ ಇಂದೂ ಕೂಡ ಭರ್ಜರಿ ಮಳೆ
ಅಲ್ಲದೇ ಬೆಂಗಳೂರಿನಲ್ಲಿ ಇಂದೂ ಕೂಡ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ. ಹೀಗಾಗಿ ಬೆಂಗಳೂರಿಗೆ ಬುಧವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಗಂಟೆಗೆ 50km ವೇಗದಲ್ಲಿ ಗಾಳಿ ಜೊತೆಗೆ ಮಳೆಯಾಗುವ ಸಾಧ್ಯತೆ ಇದೆ.
ಇದೇ ರೀತಿ ಮುಂದಿನ ಏಳು ದಿನಗಳಲ್ಲಿ ನಗರದಲ್ಲಿ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ. ಇಂದಿನಿಂದ ಮೋಡ ಕವಿದ ವಾತಾವರಣ ಇರಲಿದ್ದು ವೇಗವಾಗಿ ಗಾಳಿ ಬೀಸಲಿದೆ. ಜೊತೆಗೆ ಗುಡುಗು ಮಿಂಚಿ ಸಹಿತ ಮಳೆಯಾಗುವ ಸೂಚನೆ ಇದೆ.












Click it and Unblock the Notifications