ಸಾಯೋವರೆಗೂ ನಾನೂ ಸಿದ್ದರಾಮಯ್ಯ ಸ್ನೇಹಿತರು: ಈಶ್ವರಪ್ಪ
Recommended Video
ಬೆಂಗಳೂರು, ಡಿಸೆಂಬರ್ 13: 'ನಮ್ಮ ಜಗಳವನ್ನು ನೋಡುವವರು ಇವರು ಸಾಯೋವರೆಗೂ ಮಾತೇ ಆಡೊಲ್ಲ ಎಂದುಕೊಳ್ಳುತ್ತಾರೆ. ಆದರೆ ನಾವಿಬ್ಬರೂ ಸ್ನೇಹಿತರು. ಸಾಯುವವರೆಗೂ ಸ್ನೇಹಿತರಾಗಿಯೇ ಇರುತ್ತೇವೆ' ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಡುವಿನ ಜಗಳ, ಕಿತ್ತಾಟ ಇಂದು ನಿನ್ನೆಯದ್ದಲ್ಲ. ಸದನದಲ್ಲಿ ಮಾತ್ರವಲ್ಲದೆ, ವಿವಿಧ ಸಭೆಗಳಲ್ಲಿಯೂ ಒಬ್ಬರ ವಿರುದ್ಧ ಒಬ್ಬರು ವೀರಾವೇಶದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕುರುಬ ಸಮುದಾಯದ ಇಬ್ಬರ ನಡುವಿನ ರೋಷಾವೇಶಕ್ಕೆ ಹಲವು ಉದಾಹರಣೆಗಳಿವೆ.
'ಸಿದ್ದರಾಮಯ್ಯ ಈ ಜೀವನದಲ್ಲಿ ಇನ್ನೊಮ್ಮೆ ಸಿಎಂ ಆಗುವುದಿಲ್ಲ. ಸಿದ್ದರಾಮಯ್ಯ ಒಬ್ಬ ಹುಚ್ಚ. ಹಾಗಾಗಿ ಎಷ್ಟುದಿನ ಬದುಕುತ್ತಾರೋ' ಎಂದು ಈಶ್ವರಪ್ಪ ರಾಣೆಬೆನ್ನೂರಿನಲ್ಲಿ ಉಪ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು. ಇದಕ್ಕೆ 'ನನ್ನ ಸಾವನ್ನು ಬಯಸುವವರಿಗೆ ನಾನು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ' ಎಂಬ ತಣ್ಣನೆಯ ಪ್ರತಿಕ್ರಿಯೆಯನ್ನು ಸಿದ್ದರಾಮಯ್ಯ ನೀಡಿದ್ದರು. 'ಹುಚ್ಚ', 'ದಡ್ಡ', 'ಮೂರ್ಖ', 'ನಾಲಾಯಕ್' ಮುಂತಾದ ಪದಗಳ ಬಾಣಗಳು ಇಬ್ಬರ ನಡುವೆ ಹಲವು ಬಾರಿ ವಿನಿಮಯವಾಗಿವೆ. ಆದರೆ ಅದ್ಯಾವುದೂ ಸತ್ಯವಲ್ಲ. ಇವೆಲ್ಲವೂ ರಾಜಕಾರಣ ಮತ್ತು ಪಕ್ಷ ಕಾರಣದ ಯುದ್ಧಗಳಷ್ಟೇ ಎನ್ನುವುದು ಈಶ್ವರಪ್ಪ ನೀಡಿರುವ ವಿವರಣೆ.
ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಸಿದ್ದರಾಮಯ್ಯ ಅವರ ಯೋಗ ಕ್ಷೇಮ ವಿಚಾರಿಸಲು ಬಿಜೆಪಿ ನಾಯಕರು ಗುರುವಾರ ರಾತ್ರಿ ಆಸ್ಪತ್ರೆಗೆ ಆಸ್ಪತ್ರೆಗೆ ತೆರಳಿದ್ದರು. ಆಗ ಈಶ್ವರಪ್ಪ, 'ನಿಮಗೂ ಹಾರ್ಟ್ ಇದೆ ಅಂತಾ ಗ್ಯಾರಂಟಿ ಆಯ್ತು' ಎಂದು ಚಟಾಕಿ ಹಾರಿಸಿದ್ದರು. ಅದಕ್ಕೆ ಸಿದ್ದರಾಮಯ್ಯ, 'ನನಗೆ ಹಾರ್ಟ್ ಇಲ್ಲ ಅಂದ್ಕೊಂಡ್ರಾ' ಎಂದು ಪ್ರತಿಕ್ರಿಯೆ ನೀಡಿದ್ದರು. ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ತಮ್ಮ ಹಾಗೂ ಸಿದ್ದರಾಮಯ್ಯರ ಬಾಂಧವ್ಯವನ್ನು ವಿವರಿಸಿದರು.

ನಾವಿಬ್ಬರು ಬುದ್ಧಿವಂತರು
'ಹೊರಗಡೆ ನಾವೆಷ್ಟೇ ಬಡಿದಾಡಿಕೊಂಡರೂ, ನಮ್ಮ ಜಗಳವನ್ನು ವಿಧಾನಸಭೆಯಲ್ಲಿ ನೋಡಿದವರು ಇವರು ಸಾಯೋವರೆಗೂ ಮಾತೇ ಆಡೊಲ್ಲ ಎಂದುಕೊಳ್ಳುತ್ತಾರೆ. ಹಾಗೆ ಅಂದುಕೊಳ್ಳೋರು ದಡ್ಡರು. ನಾವಿಬ್ಬರು ಬುದ್ಧಿವಂತರು.
ನನ್ನ ಕಡಿದರೂ ನಾನು ಪಕ್ಷ ಬಿಡುವುದಿಲ್ಲ. ನಮ್ಮ ಪಕ್ಷದ ಸುದ್ದಿಗೆ ಅವರು ಬಂದಾಗ ನಾನು ಸುಮ್ಮನೆ ಬಿಡುವುದಿಲ್ಲ. ಹಾಗೆಯೇ ಅವರ ಪಕ್ಷದ ಸುದ್ದಿಗೆ ನಾವು ಹೋದಾಗ ಅವರು ಬಿಡೊಲ್ಲ. ಇದು ಪಕ್ಷ ನಿಷ್ಠೆಯ ವಿಚಾರ.

ಸಾಯುವರೆಗೂ ಸ್ನೇಹದಲ್ಲಿ ಇರುತ್ತೇವೆ
'ನಾವು ಬಹಳ ಸ್ನೇಹದಲ್ಲಿ ಇರುತ್ತೇವೆ. ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ನಲ್ಲಿ ಊಟದ ವೇಳೆ ಸಿದ್ದರಾಮಯ್ಯ ತಮ್ಮ ಪಕ್ಕ ನನಗಾಗಿ ಒಂದು ಚೇರ್ ಇಟ್ಟುಕೊಳ್ಳುತ್ತಿದ್ದರು. ಅವರು ನಮ್ಮವರೇ. ನಮ್ಮ ನಡುವೆ ಪ್ರೀತಿ ಜಾಸ್ತಿ. ನಾನು ಡಿಸಿಎಂ ಆಗಿದ್ದಾಗ ಅವರ ಕ್ಷೇತ್ರಕ್ಕೆ ಬೇಕಾದ ಲೆಟರ್ ಕಳಿಸೋರು. ನಾನು ಅವರನ್ನು ನೋಡಿ ನಕ್ಕಾಗ. ಕಣ್ಸನ್ನೆಯಲ್ಲೇ 'ಮಾಡು' ಎನ್ನುತ್ತಿದ್ದರು. ನಾನು ಸಹಿ ಮಾಡುತ್ತಿದ್ದೆ. ಅವರು ಸಿಎಂ ಆಗಿದ್ದಾಗ ನಾನು ಲೆಟರ್ ಕಳಿಸುತ್ತಿದ್ದೆ. ಆಗ ಅವರು ನನ್ನನ್ನು ನೋಡಿದಾಗ, ಹೀಗೆ ಮಾಡುತ್ತಿದ್ದೆ (ಕಣ್ಸನ್ನೆ). ಅದೆಲ್ಲ ನಡೆಯೋದು. ಎಂದಿಗೂ ನಮ್ಮ, ಅವರ ಸ್ನೇಹ ಎಲ್ಲಿಯೂ ವ್ಯತ್ಯಾಸ ಆಗಲು ಸಾಧ್ಯವಿಲ್ಲ. ಸಾಯುವವರೆಗೂ ಸ್ನೇಹದಲ್ಲಿ ಇರುತ್ತೇವೆ.

ಯಾರ ಮಾತನ್ನೂ ಕೇಳದವರು ಡಾಕ್ಟರ್ ಮಾತು ಕೇಳಿದ್ದಾರೆ
ಸಿದ್ದರಾಮಯ್ಯ ಆಸ್ಪತ್ರೆ ಸೇರಿದ್ದಾರೆ ಎಂದು ಇಡೀ ಕರ್ನಾಟಕದ ಜನರು ಗಾಬರಿ ಪಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ನೋಡಿದಾಗ ಗಾಬರಿ ಪಡುವಂತಹ ಸ್ಥಿತಿ ಏನೂ ಇಲ್ಲ. ಹಾಗಾಗಿ ನಾವು ಖುಷಿ ಖುಷಿಯಾಗಿ ಇದ್ದೇವೆ. ಅವರು ಇಂದೇ ಡಿಸ್ಚಾರ್ಜ್ ಆಗಿ ಹೋಗೋಣ ಎಂದುಕೊಂಡಿದ್ದರು. ವೈದ್ಯರು ಎರಡು ದಿನ ಇರಿ ಎಂದಿದ್ದಾರೆ. ರಾಜಕಾರಣಿಗಳಿಗೆ ಸ್ವಾಭಾವಿಕವಾಗಿಯೇ ಆರೋಗ್ಯ ವಿಚಾರಿಸಿಕೊಳ್ಳಲು ಜನರು ಹೆಚ್ಚಾಗಿ ಬರುತ್ತಾರೆ. ದೂಳು ಇದೆಲ್ಲ ಇರುತ್ತದೆ ಎಂದು ವೈದ್ಯರು ಎರಡು ದಿನ ವಿಶ್ರಾಂತಿಗೆ ಹೇಳಿದ್ದರು. ಯಾರ ಮಾತನ್ನೂ ಸಿದ್ದರಾಮಯ್ಯ ಕೇಳೊಲ್ಲ. ಡಾಕ್ಟರ್ ಹೇಳಿದ್ದನ್ನು ಕೇಳುತ್ತಿದ್ದಾರೆ.

ಏ ಬಾರಯ್ಯ, ಅದು ಬೇರೆ ಇದು ಬೇರೆ!
ಒಂದು ಘಟನೆ ಇಡೀ ರಾಜ್ಯಕ್ಕೆ ಗೊತ್ತಾಗಲಿ ಎಂದು ಹೇಳುತ್ತಿದ್ದೇನೆ. ವಿಧಾನಪರಿಷತ್ನಲ್ಲಿ ವಿರೋಧಪಕ್ಷದ ನಾಯಕನಾಗಿ ಒಮ್ಮೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೆ. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಥಟ್ಟಂತ ಬಂದರು ಏನೆಂದು ಕೇಳಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರ ಪಕ್ಷದವರು ತಿಳಿಸಿದರು. ಅವರು ನಾನು ಮಾತನಾಡುತ್ತಿದ್ದ ಮರಳು ದಂಧೆ ವಿಚಾರ ಬಿಟ್ಟರು. ನಮ್ಮ ನಾಯಕರ ಬಗ್ಗೆ, ಅವರು ಭ್ರಷ್ಟಾಚಾರಿಯಾಗಿದ್ದರು ಎಂದೆಲ್ಲ ಆರೋಪ ಮಾಡತೊಡಗಿದರು. ಸಾಕಷ್ಟು ಗಲಾಟೆ ಆಯ್ತು. ನಮ್ಮ ಪಕ್ಷದ ಪರವಾಗಿ ನಮ್ಮವರು, ಅವರ ಪಕ್ಷದ ಪರವಾಗಿ ಅವರು ಮಾತನಾಡತೊಡಗಿದೆವು. ಕೊನೆಗೆ ಗದ್ದಲ ಜೋರಾಗಿ ಸಭಾಧ್ಯಕ್ಷ. ಶಂಕರಮೂರ್ತಿ ಸದನ ಮುಂದೂಡಿದರು.
ಬಳಿಕ ನಾನು ಎಲ್ಲಿಯೂ ಹೋಗದೆ ಶಂಕರಮೂರ್ತಿ ಅವರ ಚೇಂಬರಲ್ಲಿ ಟೀ ಕುಡಿಯುತ್ತಾ ಕುಳಿತಿದ್ದೆ. ಆಗ ಸಿದ್ದರಾಮಯ್ಯ ಬಂದರು. ಇಲ್ಲಿಯೂ ಏಕೆ ಜಗಳ ಎಂದು ನಾನು ಎದ್ದು ಹೋಗಲು ನಿಂತೆ. 'ಏ ಬಾರಯ್ಯ, ಇದು ಬೇರೆ ಅದು ಬೇರೆ. ಎಂದರು. ಇದು ಅವರ ವ್ಯಕ್ತಿತ್ವ.

ಎಲ್ಲರ ಜತೆಗೂ ಹೀಗೆ ಇರುತ್ತೇವೆ
ನಮ್ಮ ನಡುವೆ ಅಪಾರ ವಿಶ್ವಾಸ, ಪ್ರೀತಿ ಇದೆ. ಸ್ನೇಹಕ್ಕೂ ರಾಜಕಾರಣಕ್ಕೂ ಎಂದೂ ಯಾರೂ ಒಂದಕ್ಕೊಂದು ಸಂಬಂಧ ತರಬಾರದು. ಅದು ಬೇರೆ ಇದು ಬೇರೆ. ಎಲ್ಲ ರಾಜಕಾರಣಿಗಳ ಜತೆಗೂ ನಾವು ಹೀಗೆಯೇ ಇದ್ದೇವೆ. ಕುಮಾರಸ್ವಾಮಿ ಅವರ ಬಳಿಯೂ ಹೀಗೆ ಇದ್ದೇವೆ, ದೊಡ್ಡೋರು ದೇವೇಗೌಡರ ಬಳಿ ನಾನು ಹೋಗೊಲ್ಲ. ಹೋಗೋದು ಕಡಿಮೆ ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications