ವೀರಪ್ಪ ಮೊಯ್ಲಿ ಟ್ವೀಟಾಸ್ತ್ರ ಸ್ವಾಗತಿಸಿದ ಶಾಸಕ ಸುರೇಶ್ ಕುಮಾರ್
ಬೆಂಗಳೂರು, ಮಾರ್ಚ್ 16: "ಕಾಂಗ್ರೆಸ್ಸಿನಲ್ಲಿ ಟಿಕೇಟ್ ಗಾಗಿ ಹಣದ ರಾಜಕೀಯ ನಡೆಯುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪ ಮೊಯ್ಲಿ ಮಾಡಿದ್ದ ಟ್ವೀಟ್ ಅನ್ನು ಶಾಸಕ ಸುರೇಶ್ ಕುಮಾರ್ ಸ್ವಾಗತಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರೂ ಆಗಿದ್ದ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ ಮುಖಂಡರು. ಅವರು ಇಂದು ಎಲ್ಲರಿಗೂ ಗೊತ್ತಿರುವ ವಿಷಯವನ್ನು ಧೈರ್ಯವಾಗಿ, ಬಹಿರಂಗವಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಣದ ಭರಾಟೆಗೆ ಕಡಿವಾಣ ಹಾಕಬೇಕು, ಲೋಕೋಪಯೋಗಿ ಸಚಿವರೊಂದಿಗೆ ಸಂಪರ್ಕ ಹೊಂದಿರುವ ಕೆಲವು ಗುತ್ತಿಗೆದಾರರು ಇಂಥವರೇ ಅಭ್ಯರ್ಥಿಯಾಗಬೇಕು ಎಂದು ಹೇಳುವುದು ಕಾಂಗ್ರೆಸ್ ಗೆ ತೀರಾ ಅಪಾಯಕಾರಿ ಎಂಬ ಅರ್ಥದಲ್ಲಿ ಮೊಯ್ಲಿ ಮಾತನಾಡಿದ್ದಾರೆ" ಎಂದರು.
"ಜನಮಾನಸದಲ್ಲಿರುವ ಅಭಿಪ್ರಾಯವನ್ನು ಮೊಯ್ಲಿ ಅವರು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿರುವ ಹಣದ ಭರಾಟೆಗೆ ವೀರಪ್ಪ ಮೊಯ್ಲಿ ಅವರಂಥ ನಾಯಕರಲ್ಲೂ ಆತಂಕ ಸೃಷ್ಟಿಯಾಗಿದೆ. ಆದರೆ ಅವರ ಆರೋಪ ಕೇಳಿದ ಕಾಂಗ್ರೆಸ್ಸಿಗರು ಹಣದ ನಿಯಂತ್ರಣಕ್ಕೆ ಬದಲು ವೀರಪ್ಪ ಮೊಯ್ಲಿ ಅವರನ್ನೇ ನಿಯಂತ್ರಿಸಲು ಪ್ರಯತ್ನಿಸಬಹುದು. ಅವರ ಮೇಲೆ ಒತ್ತಡ ತರಬಹುದು." ಎಂದು ಅವರ ಕಾಂಗ್ರೆಸ್ ಮೇಲೆ ಟೀಕಾಸ್ತ್ರ ಪ್ರಯೋಗಿಸಿದರು.

"ಅದೇನೇ ಇದ್ದರೂ, ವೀರಪ್ಪ ಮೊಯ್ಲಿ ಅವರು ಇಂದು ಎತ್ತಿರುವ ವಿಷಯ ವಾಸ್ತವಿಕವಾದುದು. ಕೇವಲ ಲೋಕೋಪಯೋಗಿ ಸಚಿವರಷ್ಟೇ ಅಲ್ಲ, ಪ್ರಭಾವಿ ಸಚಿವರೆಲ್ಲರೂ ಅದನ್ನೇ ಮಾಡುತ್ತಿದ್ದಾರೆ. ಹಣದ ಭರಾಟೆಯಿಂದ ಈ ದೇಶದ ರಾಜಕೀಯ ಹಾಳಾಗಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್. ವೀರಪ್ಪ ಮೊಯ್ಲಿ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ" ಎಂದು ಸುರೇಶ್ ಕುಮಾರ್ ಹೇಳಿದರು.
"ರಾಜ್ಯದಲ್ಲಿ ಲೋಕೋಪಯೋಗಿ ಸಚಿವ(ಎಚ್ ಸಿ ಮಹದೇವಪ್ಪ)ರು ಮತ್ತು ರಸ್ತೆ ಗುತ್ತಿಗೆದಾರರ ನಡುವೆ ಹೊಂದಾಣಿಕೆ ನಡೆಯುತ್ತಿದೆ" ಎಂದು ನೇರವಾಗಿ ಆರೋಪಿಸಿರುವ ಮೊಯ್ಲಿ, ಈ ಕುರಿತು ಗಮನ ಹರಿಸುವಂತೆ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರು.












Click it and Unblock the Notifications