ಉಪಚುನಾವಣೆ ಮೋದಿ ಹೆಸರಲ್ಲಿ ನಡೆಯಲಿದೆ: ದೇವೇಗೌಡ
ಬೆಂಗಳೂರು, ಅಕ್ಟೋಬರ್ 17: ಮುಂಬರುವ ಉಪಚುನಾವಣೆ ಸಹ ಮೋದಿ ಹೆಸರಲ್ಲಿಯೇ ನಡೆಯಲಿದೆ, ಹಾಗಾಗಿ ಮೋದಿಗೆ ಸರಿಸಾಟಿಯಾಗಬಲ್ಲ ನಾಯಕನ ಅವಶ್ಯಕತೆ ಇದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಮಾಜಿ ಪ್ರಧಾನಿ ಎಂಬುದೇ ಹಲವು ಜನರಿಗೆ ಮರೆತುಹೋಗಿದೆ. ಹಾಗಾಗಿ ಮೋದಿಯನ್ನು ಎದುರಿಸಲು ಇನ್ನೂ ಪ್ರಭಲ ನಾಯಕನ ಅವಶ್ಯಕತೆ ಇದೆ' ಎಂದು ಹೇಳಿದರು.
'ನಮ್ಮದು ಪ್ರಾದೇಶಿಕ ಪಕ್ಷ ರಾಷ್ಟ್ರೀಯ ಪಕ್ಷವಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ ದೇವೇಗೌಡ, 'ಉಪಚುನಾವಣೆಯಲ್ಲಿ ಯಾವ ಅನರ್ಹರು ಗೆಲ್ಲುತ್ತಾರೋ ಗೊತ್ತಿಲ್ಲ, ಉಪಚುನಾವಣೆ ಬಳಿಕ ಬಿಜೆಪಿ ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ' ಎಂದು ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದ ಜೆಡಿಎಸ್ ಈ ಬಾರಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಈ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ.
ದೇವೇಗೌಡ ಅವರ ಇಂದಿನ ಹೇಳಿಕೆ ಅವಲೋಕಿಸಿದಲ್ಲಿ, ಉಪಚುನಾವಣೆಗೆ ಬಿಜೆಪಿಗೆ ಹೆಚ್ಚಿನ ಲಾಭ ಆಗಲಿದೆ ಎಂದು ಪರೋಕ್ಷವಾಗಿ ಹೇಳಿದಂತಿದೆ. ದೇವೇಗೌಡ ಅವರು ಇತ್ತೀಚೆಗೆ ಮೋದಿ ಅವರನ್ನು ಹೊಗಳುತ್ತಿರುವುದು ನೋಡಿದರೆ ಬೇರೆಯ ರಾಜಕೀಯ ಲೆಕ್ಕಾಚಾರದ ವಾಸನೆಯೂ ಬರುತ್ತಿದೆ.












Click it and Unblock the Notifications