ಉದ್ಯಾನಗಳು, ಕಾರಂಜಿ ಜೊತೆಗೆ ಸ್ಮಾರ್ಟ್ ಲುಕ್ ಪಡೆದ ಶಿವಾಜಿನಗರ, ಸಂಕ್ರಾಂತಿಗೆ ಉದ್ಘಾಟನೆ
ಬೆಂಗಳೂರು, ಡಿ. 05: ಸಿಲಿಕಾನ್ ಸಿಟಿಯ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಶಿವಾಜಿನಗರ ಉದ್ಯಾನಗಳು, ಕಾರಂಜಿಗಳ ಜೊತೆಗೆ ಹೊಸ ರೂಪ ಪಡೆದುಕೊಂಡಿದ್ದು, ಸಂಕ್ರಾಂತಿಗೆ ಉದ್ಘಾಟನೆಯಾಗಲಿದೆ.
ಸ್ಮಾರ್ಟ್ ಸಿಟಿ ಬೆಂಗಳೂರು ಲಿಮಿಟೆಡ್ ಅಡಿಯಲ್ಲಿ ಶಿವಾಜಿನಗರದ ಐತಿಹಾಸಿಕ ಸ್ಥಳಗಳಿಗೆ ಹೊಸ ರೂಪ ನೀಡಲು ಹೊರಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಶೇಕಡಾ 70 ರಷ್ಟು ಕೆಲಸವನ್ನು ಪೂರ್ಣಗೊಳಿಸಿದೆ. ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಜನವರಿ 15 ರಂದು ಇದನ್ನು ಉದ್ಘಾಟನೆ ಮಾಡಲಿದ್ದು, ಜನರಿಗೆ ಸಂಕ್ರಾಂತಿ ಉಡುಗೊರೆಯಾಗಿ ನೀಡಲಿದ್ದಾರೆ.
ರಾಜ್ಯದಲ್ಲಿ ಎಲ್ಲೆಲ್ಲಿ ಹೊಸ ವಿಮಾನ ನಿಲ್ದಾಣ..? ಕಾಮಗಾರಿಯ ಸ್ಥಿತಿಗತಿ ಹೇಗಿದೆ ತಿಳಿಯಿರಿ
ಶಿವಾಜಿನಗರದ ಬ್ರಾಡ್ವೇ ರಸ್ತೆ, ರಿಚರ್ಡ್ ಸ್ಕ್ವೇರ್ ಮತ್ತು ಮೀನಾಕ್ಷಿ ಕೊಯಿಲ್ ರಸ್ತೆಯಲ್ಲಿ ಪಾರಂಪರಿಕ ಸ್ಥಾನಮಾನ ಹೊಂದಿರುವ ಬೀಫ್ ಮಾರುಕಟ್ಟೆ, ಐಕಾನಿಕ್ ರಸೆಲ್ ಮಾರುಕಟ್ಟೆ ಮತ್ತು ಸೆಂಟ್ ಮೇರಿ ಚರ್ಚ್ ಎದುರು ಶತಮಾನಗಳಷ್ಟು ಹಳೆಯದಾದ ಬಾವಿ (ರಾಬು ಕಿ ಬೌಡಿ), ರಸ್ತೆ ದುರಸ್ತಿ, ಚರಂಡಿ, ಕಲ್ಲುಹಾಸು, ಸ್ಮಾರ್ಟ್ ಲೈಟಿಂಗ್ ಕಾಮಗಾರಿ ನಡೆದಿದೆ.
ಶಿವಾಜಿನಗರದಲ್ಲಿ ಇರುವ ಪಾರ್ಕಿಂಗ್ ವ್ಯವಸ್ಥೆಯನ್ನು ಇನ್ನು ವ್ಯವಸ್ಥಿತವಾಗಿ ಮಾಡಲಾಗುವುದು, ಉದ್ಯಾನಗಳು ಮತ್ತು ಕಾರಂಜಿಗಳ ಜೊತೆಗೆ ಗಡಿಯಾರ ಗೋಪುರವೂ ರಚನೆಯಾಗಲಿದೆ.
''ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹೆಚ್ಚುವರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿವಿಧ ವರ್ತಕ ಸಂಘಗಳು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದವು. ರಸೆಲ್ ಮಾರುಕಟ್ಟೆಗೆ ನಿರ್ದಿಷ್ಟವಾಗಿ ಶೌಚಾಲಯ ಮತ್ತು ಇತರ ಸ್ಥಳಗಳಲ್ಲಿ ಕೆಲವು ಕಾಮಗಾರಿಗಳ ಅಗತ್ಯವಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರ ಮೂಲಕ ಹಣಕ್ಕಾಗಿ ಸರ್ಕಾರದ ಮುಂದೆ ಕಡತಗಳನ್ನು ಇಡಲಾಗುವುದು" ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಹೇಳಿದ್ದಾರೆ.
ಈ ರಸ್ತೆಯಲ್ಲಿ ಬಹುತೇಕ ಕಾಮಗಾರಿ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದರಿಂದ ಬ್ರಾಡ್ವೇ ರಸ್ತೆ, ಶಿವಾಜಿನಗರದ ಎಚ್ಕೆಪಿ ರಸ್ತೆಯಿಂದ ರಿಚರ್ಡ್ ಸ್ಕ್ವೇರ್, ರಸೆಲ್ ಮಾರ್ಕೆಟ್ನ ಕೋರ್ ಏರಿಯಾದಲ್ಲಿ ಪ್ರವಾಹ ಕಾಣಿಸಿಕೊಂಡಿಲ್ಲ ಎಂದು ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಿದ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಈಗ ಶೇ 70ರಷ್ಟು ಕಾಮಗಾರಿ ಮುಗಿದಿದೆ. ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಸುಮಾರು 2 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಜನವರಿ 15 ರೊಳಗೆ ನಾವು 'ಹೊಸ ಶಿವಾಜಿನಗರ'ವನ್ನು ಸಾರ್ವಜನಿಕರಿಗೆ ನೀಡಲಿದ್ದೇವೆ" ಎಂದು ಹೇಳಿದ್ದಾರೆ.
ಶಿವಾಜಿನಗರವೆಂದರೇ ಹೊರಗಿನವರಿಗೆ ಬರೀ ಕೆಟ್ಟ ರಸ್ತೆಗಳು, ತುಂಬಿ ಹರಿಯುವ ಚರಂಡಿಗಳು, ಅಡ್ಡಾದಿಡ್ಡಿ ಪಾರ್ಕಿಂಗ್, ಕಸ ಮತ್ತು ದುರ್ನಾತ ಮಾತ್ರ ನೆನಪಿಗೆ ಬರುತ್ತದೆ. ಆದರೆ, ಈ ಕಾಮಗಾರಿಯು ಶಿವಾಜಿನಗರದ ಗ್ರಹಿಕೆಯನ್ನು ಬದಲಾಯಿಸುತ್ತದೆ ಎಂದು ರಸೆಲ್ ಮಾರ್ಕೆಟ್ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌದ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.