ಅಂಗನವಾಡಿ ಅಭಿವೃದ್ಧಿಗೆ ಅವಿರತ ಪ್ರಯತ್ನಿಸಲಾಗುವುದು: ಉಮಾಶ್ರೀ
ಬೆಂಗಳೂರು, ಸೆಪ್ಟೆಂಬರ್, 23 : ಆಧುನಿಕ ಬದುಕಿನಲ್ಲಿ ಬೀದಿಗೊಂದರಂತೆ ತಲೆಎತ್ತಿರುವ ಖಾಸಗಿ ಶಾಲಾ ಹಾವಳಿಗಳ ನಡುವೆ ಅಂಗನವಾಡಿ ಕೇಂದ್ರಗಳು, ಅವುಗಳಲ್ಲಿನ ಆಟ-ಪಾಠಗಳು ಅವನತಿಯತ್ತ ಸಾಗುತ್ತಿದೆ. ಶಿಕ್ಷಣ ಪದ್ಧತಿಯಲ್ಲಿ ಆಗಿರುವ ಈ ಅಂತರವನ್ನು ತಪ್ಪಿಸಿ ಅಂಗನವಾಡಿ ಕೇಂದ್ರಗಳ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದರು.
ನಗರದ ಅಕ್ಷರ ಫೌಂಡೇಶನ್ ಏರ್ಪಡಿಸಿದ್ದ 'ಅಂಗನವಾಡಿ ಕೇಂದ್ರಗಳಲ್ಲಿ ಮೊಳೆಯುವ ಬಾಲ್ಯ ಶಿಕ್ಷಣ-ಪಾಲುದಾರಿಕೆ ಮತ್ತು ಅವಕಾಶಗಳು' ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಚಿವೆ ಉಮಾಶ್ರೀ ಅವರು ಅಂಗನವಾಡಿ ಕೇಂದ್ರಗಳ ಇಂದಿನ ಪರಿಸ್ಥಿತಿಯ ಕುರಿತಾಗಿ ಮಾತನಾಡಿದರು.[ಬೆಂಗಳೂರು ಉತ್ತರ ವಲಯದ ಅನಧಿಕೃತ ಶಾಲೆಗಳ ಪಟ್ಟಿ]
ಹಿಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳು ನಮ್ಮ ಹಿರಿಯರ ಶಿಕ್ಷಣ ಮೂಲ ನೆಲೆಗಳಾಗಿದ್ದವು. ಆದರೆ ಇವು ಇಂದು ಅವನತಿ ಹಾದಿ ಹಿಡಿದಿವೆ. ಇವುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಒಟ್ಟಿಗೆ ಶ್ರಮಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ತೆಯಲ್ಲಿ ಸರ್ಕಾರೇತರ ಸಂಸ್ಥೆಗಳ ಪಾಲುದಾರಿಕೆ ಬಹಳ ಫಲಕಾರಿಯಾದುದಾಗಿದೆ. ಹಲವಾರು ಕ್ರಿಯಾಶೀಲ ಚಟುವಟಿಕೆಗಳು, ಮಾದರಿಗಳು ಸರ್ಕಾರೇತರ ಸಂಸ್ಥೆಗಳಿಂದ ಜರುಗುತ್ತವೆ. ಇವುಗಳ ಸಹಕಾರದಿಂದ ಅಂಗನವಾಡಿಗಳನ್ನು ಉತ್ತಮ ಸೌಕರ್ಯಭರಿತ ಶಾಲೆಗಳನ್ನಾಗಿ ಮಾಡಬಹುದು ಎಂದು ಕಂಚನಾ ಬ್ಯಾನರ್ಜಿ ಹೇಳಿದರು.
ಈ ವಿಚಾರವ ಸಂಕಿರಣದಲ್ಲಿ ರೋಹಿಣಿ ನಿಲೇಕಣಿ, ನವದೆಹಲಿಯ ಅಘಾ ಖಾನ್ ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮಾಧಿಕಾರಿಯಾದ ಡಿ ಆರ್ ಅಖಿಲಾ ದತ್ತು, ಅಕ್ಷರ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿಯಾದ ಕಾಂಚನಾ ಬ್ಯಾನರ್ಜಿ, ಎನ್ ಐಪಿಸಿಸಿಡಿಯ ನಿರ್ದೇಶಕರಾದ ಡಾ.ಭರತ್ ಕುಮಾರ್, ಮಕ್ಕಳ ಹಕ್ಕು ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾದ ಡಾ|| ಪದ್ಮಿಣಿ ಹಲವಾರು ಮಹನೀಯರು ಭಾಗವಹಿಸಿದ್ದರು