ಬೆಂಗಳೂರಿಗೆ ಲಿಂಗನಮಕ್ಕಿ ನೀರು ಹರಿಸಲು ಸರ್ಕಾರ ಯೋಜನೆ
ಬೆಂಗಳೂರು, ಜೂನ್ 20: ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದಿಂದ ನದಿ ನೀರು ಹರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯದಿಂದ ನಗರಕ್ಕೆ ನೀರನ್ನು ತರುವ ಯೋಜನೆಯ ಕುರಿತು ಇಂದು ಬಿಎಂಆರ್ಡಿಎನಲ್ಲಿ ಅಧಿಕಾರಿಗಳ ಜೊತೆ ಪರಮೇಶ್ವರ್ ಅವರು ಸಭೆ ನಡೆಸಿದ್ದಾರೆ.
ಹೆಚ್ಚೆಚ್ಚು ಹಸಿರು ಕಟ್ಟಡ ನಿರ್ಮಾಣ, ಇನ್ಫೋಸಿಸ್ಸಿನ ಹೊಸ ಗುರಿ
ಯೋಜನೆಯ ಕಾರ್ಯಸಾಧು ವರದಿಯನ್ನು ತಯಾರಿಸಲು ಇಂದು ಅಧಿಕಾರಿಗಳಿಗೆ ಪರಮೇಶ್ವರ್ ಅವರು ಸೂಚಿಸಿದ್ದು, ಇದೊಂದು ಬೃಹತ್ ಯೋಜನೆ ಆಗಿರಲಿದೆ.
ಈಗಾಗಲೇ ಕಾವೇರಿ ನದಿಯಿಂದ 1400 ಎಂಎಲ್ಡಿ ನೀರನ್ನು ಬೆಂಗಳೂರಿಗೆ ತರಲಾಗುತ್ತಿದೆ. ಎರಡನೇಯ ಹಂತದ ಯೋಜನೆಯಲ್ಲಿ 800 ಎಂಎಲ್ಡಿ ನೀರು ತರಲಾಗುತ್ತದೆ. ಆದರೂ ಸಹ ಬೆಂಗಳೂರಿನ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲು ಆಗುತ್ತಿಲ್ಲವಾದ್ದರಿಂದ ಬೇರೆ ಮೂಲಗಳಿಂದ ನೀರು ತರುವುದು ಅತ್ಯವಶ್ಯಕವಾಗಿದೆ.
ಈ ಹಿಂದೆ ತ್ಯಾಗರಾಜ್ ಸಮಿತಿಯ ವರದಿಯು ಲಿಂಗನಮಕ್ಕಿಯಿಂದ ನದಿ ನೀರು ಹರಿಸಬಹುದು ಎಂದು ವರದಿ ಸಲ್ಲಿಸಿತ್ತು. ಅದರಂತೆ, ಈಗ ಯೋಜನೆಯ ಕಾರ್ಯಸಾಧು ವರದಿ ತಯಾರು ಮಾಡಲಾಗುತ್ತಿದೆ.
ಕೆರೆಯೊಳಗೆ ಗಣೇಶನ ಮೂರ್ತಿ ವಿಸರ್ಜಿಸುವಂತಿಲ್ಲ:ಹೈಕೋರ್ಟ್
ಲಿಂಗನಮಕ್ಕಿ ಜಲಾಶಯವು ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರವಿದೆ. ಅಲ್ಲಿಂದ ನಗರಕ್ಕೆ ನೀರು ತರಲು ಸುಮಾರು 12 ಸಾವಿರ ಕೋಟಿ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ.
ತುಮಕೂರು ಮತ್ತು ಇತರ ಭಾಗಗಳಿಗೆ ನೀರು ನೀಡುವ ಎತ್ತಿನಹೊಳೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ನಿನ್ನೆ ಸಹ ಪರಮೇಶ್ವರ್ ಅವರು ಸಭೆ ನಡೆಸಿದ್ದರು.
ಎತ್ತಿನಹೊಳೆ ಯೋಜನೆಯಡಿಯಲ್ಲಿ ಮುಳುಗಡೆಯಾಗುವ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ಜಮೀನುಗಳಿಗೆ ಸಮಾನ ಪರಿಹಾರ ಮೊತ್ತ ನಿಗದಿ ಮಾಡುವ ಕುರಿತು ಸಚಿವ ಸಂಪುಟದ ಉಪಸಮಿತಿ ಮುಂದೆ ಚರ್ಚಿಸಲಿದ್ದೇವೆ ಎಂದು ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.